ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಮೈಸೂರು, ಸೆ. 28: ವಿಶ್ವವಿಖ್ಯಾತ ಹಬ್ಬ ಎಂದೇ ಪ್ರಸಿದ್ಧಿ ಪಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಕೇಂದ್ರಬಿಂದುವಾದ ಯುವ ದಸರಾ ಸಮಾರಂಭವನ್ನು ಅಪ್ಪು ನಮನದ ಮೂಲಕ ಡಾ.ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡಿ, "ಅಂದು ಅಪ್ಪುವನ್ನು ಪ್ರೀತಿಸುತ್ತಿದ್ದಿರಿ. ಇಂದು ಪೂಜಿಸುತ್ತಿದ್ದಿರಾ. ಹೀಗಾಗಿ ಇಂದು ಅಪ್ಪುವನ್ನು ಎಲ್ಲರಲ್ಲೂ ನೋಡಲಾಗುತ್ತಿದೆ," ಎಂದು ಹೇಳಿದರು.
ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, "ಕನ್ನಡ, ಕನ್ನಡಿಗರು, ಸೂರ್ಯ ಹಾಗೂ ಚಂದ್ರ ಇರುವವರೆಗೂ ಅಪ್ಪು ಅಜರಾಮರರಾಗಿರುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅದರಂತೆ ದಸರಾ ಯಶಸ್ವಿಯಾಗಿ ನಡೆಯುತ್ತಿದೆ," ಎಂದು ಹೇಳಿದರು.

ಇಂದು ಅಪ್ಪು ಅಭಿಮಾನಿಗಳಿಗೆ ದೇವರಾಗಿದ್ದಾರೆ
ಅಭಿಮಾನಿಗಳನ್ನು ದೇವರು ಅಂದವರು ಅಪ್ಪು. ಆದರೆ ಇಂದು ಅವರೆ ಅಭಿಮಾನಿಗಳಿಗೆ ದೇವರಾಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ನಟ ವಶಿಷ್ಠ ಸಿಂಹ ಹೇಳಿದರು. ಜೊತೆಗೆ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತು ದಯವಿಟ್ಟು ಗಮನಿಸಿ ಚಿತ್ರದ ಮರೆತು ಹೋದೆನು ಹಾಡುಗಳನ್ನು ಹಾಗೂ ಟಗರು ಚಿತ್ರದ ಡೈಲಾಗ್ ಹೊಡೆಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಅಪ್ಪು ಜೊತೆಗಿನ ಮಧರ ನೆನಪುಗಳನ್ನು ಹಂಚಿಕೊಂಡ ಗುರುಕಿರಣ್
ಗಾಯಕಿ ಅನುರಾಧ ಭಟ್ ಅವರು ಡಾ.ಪುನೀತ್ ರಾಜ್ ಕುಮಾರ್ ಹಾಗೂ ರಮ್ಯ ನಟನೆಯ ಆಕಾಶ್ ಚಿತ್ರದ ಆಹಾ ಎಂತ ಆಕ್ಷಣ ನೆನೆದರೆ ತಲ್ಲಣ ಎಂಬ ಹಾಡನ್ನು ಹಾಡಿದರು. ನಂತರ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮೈಲಾರಿ ಚಿತ್ರದ ಮೈಲಾಪುರದ ಮೈಲಾರಿ ಹಾಗೂ ಅಪ್ಪು ಚಿತ್ರದ ತಾಲಿಬಾನ್ ಅಲ್ಲಾ ಅಲ್ಲಾ ಹಾಗೂ ಅಭಿ ಚಿತ್ರದ ಮಾಮಾ ಮಜಾ ಮಾಡು ಮತ್ತು ಮೌರ್ಯ ಚಿತ್ರದ ಅಮ್ಮಾ ಅಮ್ಮಾ ಐ ಲವ್ ಯೂ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ಕುಣಿಸಿ ರಂಜಿಸಿದರು.
ನಂತರ ಗುರುಕಿರಣ್ ಅವರು ಮಾತನಾಡಿ, ಅಪ್ಪು ಅವರೊಂದಿಗೆ ಕಳೆದ ಸುಮಧರ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ನನ್ನ ಹಾಗೂ ಪುನೀತ್ ಸ್ನೇಹಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರೇ ಕಾರಣ ಎಂದು ಹೇಳಿದರು. ಇದರಿಂದ ವೇದಿಕೆ ಹಾಗೂ ಮೈದಾನದ ತುಂಬಾ ಅಪ್ಪು ಅಪ್ಪು ಹೆಸರು ಮಾರ್ಧನಿಸಿತು.

ಅಭಿಮಾನಿಗಳನ್ನು ಕುಣಿಸಿದ ಭಾವನ ಹಾಗೂ ಇಬ್ರಾಹಿಂ ತಂಡ
ರಾಘವೇಂದ್ರ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರಿಗಾಗಿ ಡಾ.ರಾಜ್ ಕುಮಾರ್ ನಟಿಸಿರುವ ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬಿಳಿಸಿ ನೋಡು ಉರುಳಿ ಹೋಗದು ಹಾಗೂ ರಾಜಕುಮಾರ ಚಿತ್ರದ ಹಾಡನ್ನು ಅಭಿಮಾನಿಗಳನ್ನು ರಂಜಿಸಿದರು.
ಭಾವನ ಹಾಗೂ ಇಬ್ರಾಹಿಂ ತಂಡದವರು ನಟ ಸಾರ್ವಭೌಮ ಚಿತ್ರದ ಹಾಡಿಗೆ ಹಾಗೂ ಪವರ್ ಚಿತ್ರದ ಧಮ್ ಪವರೇ ಹಾಡಿಗೆ ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಇನ್ನು ಎದೆ ತುಂಬಿ ಹಾಡುವೇನು ತಂಡದವರು ಪವರ್ ಚಿತ್ರದ ಧಮ್ ಪವರೇ ಹಾಡನ್ನು ಹಾಗೂ ರಾಜಕುಮಾರ ಚಿತ್ರದ ಹಾಡನ್ನು ಹಾಡುವ ಮೂಲಕ ನೆರೆದಿದ್ದ ಸಭಿಕರನ್ನು ಮೈ ಮರೆಸುವಂತೆ ಮಾಡಿದರು.

ಕಾರ್ಯಕ್ರಮದ ತುಂಬಾ ಪ್ರತಿಧ್ವನಿಸಿದ ಅಪ್ಪು
ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಮೈಸೂರು ನೃತ್ಯ ಕಲಾವಿದರ ಕಲಾತಂಡವು ಡಾ.ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಾದ ಯುವರತ್ನ, ಜಾಕಿ, ಪವರ್, ಅಣ್ಣಾಬಾಂಡ್ ಸೇರಿದಂತೆ ಅನೇಕ ಚಿತ್ರಗಳನ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಂಜಿಸಿ, ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದರು.
ಡಾ.ಪುನೀತ್ ರಾಜ್ ಕುಮಾರ್ ಹೆಸರು ಹಾಗೂ ಹಾಡುಗಳು ಬರುತ್ತಿದ್ದಂತೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಕುಣಿದು ಕುಪ್ಪಳಿಸಿ ಯುವ ಸಂಭ್ರಮದಲ್ಲಿ ಸಡಗರದಿಂದ ಪಾಲ್ಗೊಂಡರು. ಹಾಡು ಮುಗಿದ ಬಳಿಕವು ಮೈದಾನದಲ್ಲಿ ಅಪ್ಪು ಅಪ್ಪು ಎನ್ನುವ ಮೂಲಕ ಅಭಿಮಾನಿಗಳೂ ಸಹ ಅಪ್ಪು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ನಿರೂಪಕಿ ಹಾಗೂ ನಟಿ ಅನುಶ್ರೀ, ವಿನಯ್ ರಾಜ್ ಕುಮಾರ್, ಧೀರನ್ ರಾಮ್ ಕುಮಾರ್, ಗಂಧದ ಗುಡಿ ಚಿತ್ರದ ನಿರ್ದೇಶಕರಾದ ಅಮೋಘ ವರ್ಷ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ್, ಶಾಸಕರಾದ ಎಲ್.ನಾಗೇಂದ್ರ, ಸಂಸದರಾದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.












Click it and Unblock the Notifications