ಸತ್ತವರ ಸಂಖ್ಯೆ ಒಂದಂಕಿಯಿಂದ ಎರಡಂಕಿ ದಾಟಿದ್ದು ಹೇಗೆ? ಆಂಬ್ಯುಲೆನ್ಸ್ ಚಾಲಕನ ಮಾತು
ಮೈಸೂರು, ಡಿಸೆಂಬರ್ 17: ಸುಳ್ವಾಡಿ ಘಟನೆಯ ಸಾವಿನ ಸಂಖ್ಯೆ ಒಂದಂಕಿಯಿಂದ ಎರಡಂಕಿ ದಾಟಲು ಪ್ರಸಾದದಷ್ಟೇ ಇತರೆ ಸಮಸ್ಯೆಗಳು ಕಾರಣವಾಗಿದೆ. ಅವುಗಳ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ . ಸುಳ್ವಾಡಿ ಬಾಲಕಿ ಅನಿತಾ ಮೊದಲು ಈ ಪ್ರಸಾದ ಸೇವಿಸಿ ಮೃತಪಟ್ಟ 12 ವರ್ಷದ ಬಾಲಕಿ. ಆಕೆ ಶುಕ್ರವಾರ ಮಧ್ಯಾಹ್ನ 12ಕ್ಕೆ ಮೃತಪಟ್ಟಿದ್ದಾಳೆ.
ಆಂಬ್ಯುಲೆನ್ಸ್ ವಾಹನಕ್ಕೆ ಬೆಳಗ್ಗೆ 11.30ಕ್ಕೆ ಕರೆ ಮಾಡಿ ತಿಳಿಸಲಾಗಿದ್ದು ಈ ವಿಚಾರವನ್ನು 108 ಚಾಲಕರೊಬ್ಬರು ಸ್ಪಷ್ಟಪಡಿಸಿದ್ದಾರೆ. ಮೊದಲಿಗೆ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ದೇವಸ್ಥಾನದಿಂದ ಆಸ್ಪತ್ರೆಗೆ 1 ಕಿಲೋಮೀಟರ್ ಗೂ ಹೆಚ್ಚು ದೂರಾವಿತ್ತು. ಅಲ್ಲಿಂದ ವಾಹನ ಬರಲು ಕನಿಷ್ಠ 20 ನಿಮಿಷ ಬೇಕಾಗುತ್ತದೆ. ಏಕೆಂದರೆ ದೇವಸ್ಥಾನಕ್ಕೆ ಹೋಗುವ ರಸ್ತೆ ಮಣ್ಣಿನ ರಸ್ತೆಯಾಗಿದ್ದು ಹಳ್ಳ - ಕೊಳ್ಳಗಳಿಂದ ಕೂಡಿದೆ.

ಇನ್ನು ಅಲ್ಲಿನ ವೈದ್ಯಾಧಿಕಾರಿಗಳು ಇದು ಫುಡ್ ಪಾಯ್ಸನ್ ಕ್ರಮೇಣ ಸರಿಹೋಗುತ್ತದೆ ಎಂದು ಬಹಳ ಕಾಲದೂಡಿದರು. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದಲೇ ಸಾಗಿ ಹಾಕುವ ಪ್ರಯತ್ನ ಮಾಡಲಾಗಿತ್ತು.
ಪರಿಸ್ಥಿತಿ ಬಿಗಡಾಯಿಸಿದ ಮೇಲೆ 108 ತುರ್ತು ವಾಹನಗಳನ್ನು ಕರೆಸಿಕೊಳ್ಳಲಾಗಿದೆ. ಅವು ಆಗೊಂದು ಈಗೊಂದು ಬಂದಿವೆ. ಒಂದೊಂದು ವಾಹನದಲ್ಲಿ ಕುರಿಗಳನ್ನು ತುಂಬುವಂತೆ 30 ಜನರನ್ನು ತುಂಬಿ 18 ಕಿಲೋಮೀಟರ್ ದೂರದ ರಾಮಪುರ ಆಸ್ಪತ್ರೆಗೆ, 30 ಕಿಲೋಮೀಟರ್ ದೂರದ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ, ಆ ನಂತರ 63 ಕಿ .ಮೀ ದೂರದ ಕೊಳ್ಳೇಗಾಲ ಆಸ್ಪತ್ರೆಗೆ ಕೊನೆಗೆ ಮೈಸೂರಿಗೆ ಸೇರಿಸಲಾಗಿದೆ.
ರೋಗಿಗಳನ್ನು ಹೀಗೆ ದೂರದ ಆಸ್ಪತ್ರೆಗೆ ಕರೆದೊಯ್ಯುವುದು ತಡವಾಗಿದ್ದ ಪ್ರಯಾಣದ ಸಂದರ್ಭದಲ್ಲಿ ವೆಂಟಿಲೇಟರ್ ಗಳು ಇಲ್ಲದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಗಳು ಸಾಯಲು ಕಾರಣವಾಗಿದೆ.
ಅಲ್ಲದೇ ಈ ಭಾಗದ ಶಾಸಕರು ಅಧಿವೇಶನದಲ್ಲಿ ಭಾಗವಹಿಸಿರುವುದರಿಂದ ಸ್ಥಳೀಯವಾಗಿ ಅವರು ಇಲ್ಲದಿರುವುದು ಜಿಲ್ಲಾ ಮಟ್ಟದ ಅಧಿಕಾರಿಗಳು ಅಷ್ಟೊಂದು ತ್ವರಿತವಾಗಿ ನಿಗಾವಹಿಸಿದಂತೆ ಕಾಣುತ್ತಿಲ್ಲ ಎನ್ನುತ್ತಾರೆ ತಮ್ಮ ಹೆಸರು ಹೇಳಲು ಇಚ್ಛಿಸಿದ ಆಂಬ್ಯುಲೆನ್ಸ್ ಚಾಲಕರು.












Click it and Unblock the Notifications