ಸಿದ್ದರಾಮೋತ್ಸವದ ನಂತರ ರಾಜಕೀಯವಾಗಿ ಪುಟಿದೆದ್ರಾ ಸಿದ್ದರಾಮಯ್ಯ?
ಮೈಸೂರು, ಆಗಸ್ಟ್ 8: ಸಿದ್ದರಾಮೋತ್ಸವದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯವಾಗಿ ಇನ್ನಷ್ಟು ಬಲಿಷ್ಠರಾಗಿದ್ದಾರೆ. ಸಮಾವೇಶಕ್ಕೆ ಸೇರಿದ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಸಮೂಹ ನೋಡಿದ ಬಳಿಕ ಅವರಲ್ಲಿದ್ದ ಉತ್ಸಾಹ ಇಮ್ಮಡಿಯಾಗಿದೆ. ಆ ಉತ್ಸಾಹದಲ್ಲಿಯೇ ಅವರು ಪಕ್ಷ ಸಂಘಟನೆಗೆ ಇಳಿದಿದ್ದಾರೆ.
ಇದೀಗ ಮೈಸೂರಿನತ್ತ ಧಾವಿಸಿರುವ ಅವರು ತಾವು ಸೋಲು ಕಂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ, ಜೆಡಿಎಸ್ಗೆ ಟಾಂಗ್ ಕೊಟ್ಟಿದ್ದಾರೆ. ಮೇಲುನೋಟಕ್ಕೆ ಇದರಲ್ಲೇನಿದೆ? ಅಂಥ ಅನಿಸಬಹುದು ಆದರೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಸಿದ್ದರಾಮಯ್ಯ ಕೈಗೊಳ್ಳುವ ಕಾರ್ಯದ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರವಂತು ಇದ್ದೇ ಇರುತ್ತದೆ.
ಈ ನಡುವೆ ಸಿದ್ದರಾಮೋತ್ಸವ ಮುಗಿಸಿ ಬರುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ನಿವಾಸಿ ಫಸೀವುದ್ದೀನ್ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ್ದಲ್ಲದೆ ಎರಡು ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ.
ಕುಟುಂಬಕ್ಕೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಜತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಮೃತ ಫಸೀವುದ್ದೀನ್ ಸಹೋದರ ಸಲ್ಲಾವುದ್ದೀನ್ ಅವರ ಚಿಕಿತ್ಸೆಗೆ ಸಹಕರಿಸುವ ಭರವಸೆ ನೀಡಿದರು. ಇದೇ ವೇಳೆ ಅಂದು ಅಪಘಾತದಲ್ಲಿ ಗಾಯಗೊಂಡಿದ್ದವರ ನಿವಾಸಗಳಿಗೆ ಸಹ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಸಿದ್ದರಾಮಯ್ಯ ಸಾಂತ್ವನ ಹೇಳಲು ಊರಿಗೆ ಬರುತ್ತಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದು, ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿರುವುದು ಅವರಲ್ಲಿ ಹುಮ್ಮಸ್ಸು ತುಂಬಿದೆ. ಮುಂದಿನ ಸಿಎಂ ಕನಸಿನಲ್ಲಿರುವ ಸಿದ್ದರಾಮಯ್ಯ ಅವರಿಗೆ ಈಗ ತಮ್ಮ ಸುತ್ತ ನಿರ್ಮಾಣವಾಗಿರುವ ಅಭಿಮಾನ ಚುನಾವಣೆ ಸಂದರ್ಭದಲ್ಲಿ ಫ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ.

ಬಿಜೆಪಿಗೆ ವಿರುದ್ಧವಾಗಿ ಪಾದಯಾತ್ರೆ
ಇನ್ನು 75ನೇ ವರ್ಷದ ಸಾತಂತ್ರ್ಯ ಅಮೃತಮಹೋತ್ಸವವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ದೇಶದ ಜನರಲ್ಲಿ ದೇಶಭಕ್ತಿಯನ್ನು ಬಿಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದರಲ್ಲಿ ಬಿಜೆಪಿಯ ಉದ್ದೇಶವೇ ಆಗಿದ್ದರೂ ಕೂಡ ರಾಜಕೀಯ ಲೆಕ್ಕಾಚಾರ ಇಲ್ಲವೇ ಇಲ್ಲ ಎನ್ನಲಾಗುವುದಿಲ್ಲ.
ಆದರೆ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮಗಳ ಪ್ರಯುಕ್ತ ಕಾಂಗ್ರೆಸ್ ಅಲ್ಲಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜೊತೆಗೆ ಆ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ವಿರುದ್ಧ ಹರಿಹಾಯಲು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಮತ್ತು ಜಯಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲವಾಲದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪಾದಯಾತ್ರೆ ಸಾಕ್ಷಿಯಾಗಿದೆ.

ಬಿಜೆಪಿ, ಜೆಡಿಎಸ್ ವಿರುದ್ಧ ಸಿದ್ದು ಕಿಡಿ
ಈ ಕಾರ್ಯಕ್ರವನ್ನು ಸಮರ್ಪಕವಾಗಿ ಬಳಸಿಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಜತೆಗೆ ಜೆಡಿಎಸ್ ಅನ್ನು ಕೂಡ ಬಿಡದೆ ಟೀಕಿಸಿದ್ದಾರೆ. ಸ್ವಾತಂತ್ರ್ಯ ತಂದುಕೊಡುವುದರಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂಬುದನ್ನು ವಿವರಿಸುತ್ತಾ ಬಿಜೆಪಿ ಮತ್ತು ಜೆಡಿಎಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ಹೇಳಿದ್ದನ್ನೇ ಹೇಳುವುದಾದರೆ, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಬ್ರಿಟೀಷರು ಸುಮಾರು 200 ವರ್ಷಗಳ ಕಾಲ ಈ ದೇಶ ಆಳಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮನ್ನು ಸ್ವತಂತ್ರರನ್ನಾಗಿ ಮಾಡಲು ಹೋರಾಟ ಮಾಡಿ ಸ್ವಾತಂತ್ರ್ಯ ಕೊಡಿಸಿದೆ. ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ನೆಹರು ಸರ್ಧಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರಬೋಸ್, ಅಜಾದ್ ಇನ್ನು ಹಲವರು ಈ ದೇಶಕ್ಕಾಗಿ ಹೋರಾಟ, ತ್ಯಾಗ, ಬಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಪ್ರಶಂಸಿಸಿದ್ದಾರೆ.

ಬಿಜೆಪಿಯ ದೇಶಭಕ್ತಿಯ ಬಗ್ಗೆ ವ್ಯಂಗ್ಯ
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮದವರು ಹೋರಾಟ ಮಾಡಿದರು. ಆದರೆ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. 1925ರಲ್ಲಿ ಆರ್ಎಸ್ಎಸ್ ಸ್ಥಾಪನೆಯಾಯಿತು. 1951ರಲ್ಲಿ ಜನಸಂಘ ಪ್ರಾರಂಭವಾಯಿತು. 1980ರಲ್ಲಿ ಬಿಜೆಪಿ ಸ್ಥಾಪನೆಯಾಯಿತು. ಇವರೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿಜೆಪಿಯ ದೇಶಭಕ್ತಿಯ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ ಕಾಂಗ್ರೆಸ್ನಿಂದ ರಾಷ್ಟ್ರಗೀತೆ, ಸಂವಿಧಾನ ರಚನೆಯಾಗಿದ್ದು, ರಾಷ್ಟ್ರಧ್ವಜ ಎಂದರೆ ನಮಗೆ ಹೆಮ್ಮೆಯ ವಿಚಾರ. ಇದೇ ಧ್ವಜವನ್ನು ಸಾವರ್ಕರ್, ಗೋಳ್ವಾಲ್ಕರ್ ವಿರೋಧಿಸಿದ್ದರು. ಯಾರಾದರು ಒಬ್ಬ ಬಿಜೆಪಿಯವರು ದೇಶಕ್ಕೆ ಸ್ವಾತಂತ್ರ ತರಲು ಸತ್ತಿದ್ದಾರಾ? ಆಸ್ತಿ ಕಳೆದುಕೊಂಡಿದ್ದಾರಾ? ದೇಶಭಕ್ತಿ ಪ್ರಾರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ ಎಂದು ಹೇಳಿದರು.

ಜಿಡಿಎಸ್ಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಶಕ್ತಿಯಿಲ್ಲ
ಇದರ ನಡುವೆ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿ ಜೆಡಿಎಸ್ನವರು ಯಾವುದಕ್ಕೂ ಹೋರಾಟ ಮಾಡಿಲ್ಲ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಶಕ್ತಿಯಿಲ್ಲ. ಬೇರೆಯವರ ಮನೆಯ ಬೆಂಕಿಯಲ್ಲಿ ಕೈಕಾಯಿಸಿಕೊಳ್ಳುವುದೇ ಅವರ ಕೆಲಸ. ನಾವು ಕಳೆದ ಚುನಾವಣೆಯಲ್ಲಿ 80ಜನ ಗೆದ್ದು, ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ನವರಿಗೆ ಬೆಂಬಲ ನೀಡಿದ್ದೆವು. ಕುಮಾರಸ್ವಾಮಿ ವೆಸ್ಟೆಂಡ್ ಹೋಟೆಲ್ನಲ್ಲಿ ಕುಳಿತು ಸರಿಯಾಗಿ ಅಧಿಕಾರ ನಡೆಸದೆ ಅಧಿಕಾರ ಕಳೆದುಕೊಂಡರು ಎಂದು ಕುಮಾರಸ್ವಾಮಿ ವಿರುದ್ಧವೂ ಸಿದ್ದ ರಾಮಯ್ಯ ಹರಿಹಾಯ್ದಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಟೀಕೆ ಮಾಡಿದ ಬಳಿಕ ಸ್ವಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಬದ್ಧತೆಯಿಂದ ಪಕ್ಷದಲ್ಲೆ ಇರಬೇಕು. ನಾವು ಅಧಿಕಾರದಲ್ಲಿದ್ದಾಗ ಮಾಡಿದಂತಹ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿಗೆ ಬೇಸರ
ನಮ್ಮ ಹಿಂದಿನ ಸರ್ಕಾರಕ್ಕೂ ಇಂದಿನ ಬಿಜೆಪಿಯ ಶೇ.40 ಪರ್ಸೆಂಟ್ ಸರ್ಕಾರಕ್ಕೂ ಹೋಲಿಕೆ ಮಾಡಿ ಈ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶಪಥ ಮಾಡುವಂತೆ ಹೇಳಿದರು. ಇದೇ ವೇಳೆ ತಾವು ಮಾಡಿದ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳಲು ಮರೆಯಲಿಲ್ಲ.
1978ರಲ್ಲಿ ಈ ತಾಲ್ಲೂಕಿನಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಹಳ್ಳಿಗೆ ಸಿಟಿ ಬಸ್, ವರುಣಾ ಚಾನೆಲ್ ಇರಲಿಲ್ಲ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಆದರೆ ಏನು ಮಾಡದವರಿಗೆ ಅಧಿಕಾರ ಕೊಡುತಿದ್ದೀರಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿಗೆ ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಪುಟಿದೆದ್ದಿರುವ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಜತೆಗೆ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಗೆಲ್ಲಿಸಿ ಮುಖ್ಯಮಂತ್ರಿಯಾಗುವ ಹುಮ್ಮಸ್ಸಿನಲ್ಲಿರುವುದು ಎದ್ದು ಕಾಣುತ್ತಿದೆ.












Click it and Unblock the Notifications