ಎಚ್.ಡಿ. ಕೋಟೆ ಬಳಿ ಗ್ರಾಮಸ್ಥರ ಪ್ರತಿಭಟನೆಗೆ ಹೆದರಿದ ಎ.ಸಿ.ಎಫ್
ಮೈಸೂರು, ಜನವರಿ 9: ಕಳೆದ ಒಂದು ತಿಂಗಳಿನಿಂದ ಹುಲಿ ಐದು ಹಸುಗಳನ್ನು ಬಲಿ ಪಡೆದಿದ್ದರೂ ಪರಿಹಾರ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಧರಣಿ ಕುಳಿತ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹೆದರಿ ಅಲ್ಲಿಂದ ಎ.ಸಿ.ಎಫ್ ಕಾಲ್ಕಿತ್ತ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಗುಪ್ಪೆ ವಲಯ ವ್ಯಾಪ್ತಿಯ ಅಗಸರಹುಂಡಿ ಗ್ರಾಮದ ರವಿ ಎಂಬುವವರ ಹಸು ಹುಲಿ ದಾಳಿಗೆ ಸಾವನ್ನಪ್ಪಿತ್ತು.ಅಲ್ಲದೇ, ಅಗಸರಹುಂಡಿ ಗ್ರಾಮದಲ್ಲಿ ಏಳು ಜಾನುವಾರುಗಳನ್ನು ಹುಲಿ ತಿಂದು ಹಾಕಿತ್ತು.
ಆದರೆ ಅರಣ್ಯ ಇಲಾಖೆಯಿಂದ ಇದುವರೆಗೂ ಪರಿಹಾರ ನೀಡದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಮೇಲಧಿಕಾರಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಅಂತರಸಂತೆ ಎ.ಸಿ.ಎಫ್.ಕೇಶವಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮನವಲಿಸಲು ಪ್ರಯತ್ನಿಸಿದರು. ಪ್ರತಿಭಟನಕಾರರು ಸ್ಥಳದಲ್ಲಿ ಪರಿಹಾರ ನೀಡಬೇಕು ಜೊತೆಗೆ ಹುಲಿಯನ್ನು ಸೆರೆಹಿಡಿಯಬೇಕು ಎಂದು ಪಟ್ಟು ಹಿಡಿದರು.

ನಂತರ ಎ.ಸಿ.ಎಫ್.ಕಾರಿಗೆ ಟ್ಯಾಕ್ಟರ್ ಅಡ್ಡಹಾಕಿ ಧರಣಿ ನಡೆಸಲು ಮುಂದಾದರು. ಇದಕ್ಕೆ ಹೆದರಿದ ಎ.ಸಿ.ಎಫ್ ಕೇಶವಗೌಡ ಅಡ್ಡದಾರಿ ಹಿಡಿದು ಓಡಿಹೋದ ಘಟನೆ ನಡೆದಿದೆ. ಹಸುವನ್ನು ನಂಬಿ ಹಾಲು ಮಾರಿ ಜೀವನ ನಡೆಸುತ್ತಿದ್ದ ಕುಟುಂಬ ಹಸು ಕಳೆದುಕೊಂಡು ಕಣ್ಣೀರಿಡುತ್ತಿದೆ.












Click it and Unblock the Notifications