ಮೈಸೂರು: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 11 ಮಂದಿ ವಶಕ್ಕೆ
ಮೈಸೂರು, ಮಾರ್ಚ್ 23: ಮೈಸೂರಿನ ಇನಕಲ್ ಬಳಿ ಟಿಪ್ಪರ್ಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತರಾಗಲು ಸಂಚಾರ ಪೊಲೀಸರೇ ಕಾರಣ ಎಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಹಲವರಲ್ಲಿ 11 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಇಬ್ಬರು ಫೋಟೋಗಳನ್ನು ಮಾತ್ರ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ.
ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ತಿರುವು!
ಸಂಚಾರಿ ಪೊಲೀಸರ ತಪಾಸಣೆ ವೇಳೆ ಸವಾರರೊಬ್ಬರು ಟಿಪ್ಪರ್ಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಆರ್ಎಂಪಿ ವೃತ್ತದಲ್ಲಿ ನಡೆದಿತ್ತು. ಹಿಂಬದಿ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವೇಳೆ ಅಪಘಾತ ಸಂಭವಿಸಲು ಪೊಲೀಸರೇ ಕಾರಣ ಎಂದು ಸ್ಥಳೀಯರು ಅವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ, ಪೊಲೀಸ್ ವಾಹನವನ್ನು ಕೂಡ ಜಖಂಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ತವ್ಯ ನಿರತ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿ, ಅವರ ಮೇಲೆ ಹಲ್ಲೆ ಮಾಡಿ, ಗಾಯಗೊಳಿಸಿದಕ್ಕೆ, ವಾಹನ ಜಖಂಗೊಳಿಸಿದಕ್ಕೆ, ಗುಂಪು ಸೇರಿ ಗಲಾಟೆ ಮಾಡಿದಕ್ಕೆ ವಿವಿಧ ಸೆಕ್ಷನ್ಗಳ ಅಡಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಬಂಧಿತರ ಹೆಸರು, ವಿಳಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ.