ಮುಂದಿನ 6 ವರ್ಷ ಜಂಬೂಸವಾರಿ ಕ್ಯಾಪ್ಟನ್ ಆಗಿರಲಿದ್ದಾನೆ ಅಭಿಮನ್ಯು
ಮೈಸೂರು, ಅಕ್ಟೋಬರ್ 27: ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಯಾವುದೇ ಅಡಚಣೆಯಾಗದಂತೆ ಉತ್ಸವವನ್ನು ಯಶಸ್ವಿಗೊಳಿಸಿದ ಅಭಿಮನ್ಯು ಇನ್ನು ಮುಂದಿನ 6 ವರ್ಷಗಳ ಕಾಲವೂ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿದ್ದಾನೆ.
54 ವರ್ಷದ ಅಭಿಮನ್ಯು ಈ ಬಾರಿ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾನೆ. ಅವನೇ ಮುಂದಿನ ಆರು ವರ್ಷಗಳ ಕಾಲ ದಸರಾದಲ್ಲಿ ಚಿನ್ನದ ಅಂಬಾರಿ ಹೊರಲಿದ್ದಾನೆ ಎಂದು ಪಶು ವೈದ್ಯ ಡಾ.ನಾಗರಾಜ್ ತಿಳಿಸಿದ್ದಾರೆ.
ಅ.26ರಂದು ದಸರಾ ಕಾರ್ಯಗಳು ಮುಕ್ತಾಯವಾಗಿದ್ದು, ಜಂಬೂಸವಾರಿಯಲ್ಲಿ ಸಾಗಿದ ಅಭಿಮನ್ಯು, ವಿಜಯ, ಕಾವೇರಿ, ಗೋಪಿ ಮತ್ತು ವಿಕ್ರಮ ಆನೆಗಳು ರಿಲ್ಯಾಕ್ಸ್ ಮೂಡ್ ನಲ್ಲಿವೆ. ಜೊತೆಗೆ ಇಂದು ಗಜಪಡೆಗೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳಿಗೆ ಕಬ್ಬು, ಹಣ್ಣುಬೆಲ್ಲ ನೀಡಿದ್ದಾರೆ. ಅ.28ಕ್ಕೆ ಅರಣ್ಯಕ್ಕೆ ಗಜಪಡೆ ಮರಳಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ನಾಗರಾಜ್, "ಈಗ ಅಭಿಮನ್ಯು ಆನೆಗೆ 54 ವರ್ಷ. 60 ವರ್ಷಗಳವರೆಗೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಬಹುದು. ಇನ್ನೂ 6 ವರ್ಷಗಳ ಕಾಲ ಆತನೇ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಮುಂದಿನ ವರ್ಷ ಕೊರೊನಾ ಎಲ್ಲಾ ಮುಗಿದು ಅದ್ಧೂರಿಯಾಗಿ ದಸರಾ ಆಚರಿಸೋಣ" ಎಂದು ಹೇಳಿದರು.
ಮೊದಲ ಬಾರಿಗೆ ಅಭಿಮನ್ಯು ತನಗೆ ವಹಿಸಿದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಚಿನ್ನದ ಅಂಬಾರಿ ಈ ಬಾರಿ ಸರಿಯಾಗಿ ಕುಳಿತಿತ್ತು. ಸರಳ ದಸರಾ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಇದರಲ್ಲಿ ಅಭಿಮನ್ಯುವಿನ ಪಾಲು ಹೆಚ್ಚಿದೆ ಎಂದು ಪಶು ವೈದ್ಯ ಡಾ.ನಾಗರಾಜ್ ಸಂತಸ ವ್ಯಕ್ತಪಡಿಸಿದರು.












Click it and Unblock the Notifications