ಪಿರಿಯಾಪಟ್ಟಣದ ರಾವಂದೂರಲ್ಲಿ ಮಹಿಳೆ ದಯಾಮರಣಕ್ಕೆ ಅರ್ಜಿ ನೀಡಿದ್ದೇಕೆ?
ಮೈಸೂರು, ಜನವರಿ 07: ಹೆಂಡತಿ ಮಕ್ಕಳನ್ನು ಬಿಟ್ಟು ಮನೆಯಿಂದ ಹೊರ ಹೋದವನು ಕಳೆದ ಆರು ತಿಂಗಳಿನಿಂದ ಮರಳಿ ಬಾರದೆ ನಾಪತ್ತೆಯಾಗಿದ್ದು, ಇದರಿಂದ ನೊಂದ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗದ ಕಾರಣದಿಂದಾಗಿ ಇದೀಗ ಪತ್ನಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಮುಂದಾಗಿರುವ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದ ಸುಖಲಾಲ್ ಅಲಿಯಾಸ್ ಸುರೇಶ್ ಎಂಬಾತನ ಪತ್ನಿ ಸುನೀತಾ ಎಂಬುವರೇ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ ಮಹಿಳೆ. ಈಕೆಗೆ ನಾಲ್ಕು ಜನ ಮಕ್ಕಳಿದ್ದು, ಪತಿ ಸುರೇಶ್ ಕಳೆದ ಆರು ತಿಂಗಳಿನಿಂದ ಮನೆಗೆ ಬಾರದೆ ನಾಪತ್ತೆಯಾದಲ್ಲಿಂದ ಸುಖಮಯವಾಗಿದ್ದ ಸಂಸಾರದಲ್ಲೀಗ ಕಷ್ಟಗಳು ಮೇಲಿಂದ ಮೇಲೆ ಕಾಣಿಸಿಕೊಂಡಿದ್ದು ಬದುಕೋದೆ ಕಷ್ಟಮಯವಾಗಿ ಪರಿಣಮಿಸಿದೆ.
ಕುಮಾರಸ್ವಾಮಿ ಬಳಿ ದಯಾಮರಣಕ್ಕೆ ಮೊರೆಯಿಟ್ಟ ಹಂದಿಗೋಡು ಗ್ರಾಮಸ್ಥರು
ಹೀಗಾಗಿ ಈ ಕಷ್ಟದ ಕಣ್ಣೀರಿನ ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಸುನೀತಾ ಮಕ್ಕಳೊಂದಿಗೆ ನನಗೆ ಸಾವು ಕರುಣಿಸಿ ಎನ್ನುತ್ತಿದ್ದಾಳೆ. ಆಕೆ ಹೇಳುತ್ತಿರುವ ಕರುಣಾಜನಕ ಕಥೆ ಇಲ್ಲಿದೆ.
"ನನ್ನ ಪತಿ ಸುಖಲಾಲ್(ಸುರೇಶ್) ರಾವಂದೂರಿನಲ್ಲಿ ಬಟ್ಟೆ ಅಂಗಡಿ, ಗಿರವಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ವಾಸಕ್ಕಾಗಿ ಒಂದು ಮನೆ ನಿರ್ಮಿಸಿಕೊಂಡು ನೆಮ್ಮದಿಯಾಗಿ ಬದುಕುತ್ತಿದ್ದೆವು. ನಾವು ಗಿರವಿ ಅಂಗಡಿ ಮತ್ತು ಪರ್ವಿನ್ ಎಂಬ ಹೆಸರಿನ ಟೆಕ್ಸ್ ಟೈಲ್ಸ್ ಅಂಗಡಿಯನ್ನು ನಡೆಸುತ್ತಿದ್ದೆವು.
ಗ್ರಾಹಕರು ಗಿರವಿ ಇಡಲು ತರುವ ಚಿನ್ನಾಭರಣಗಳನ್ನು ಪಡೆದುಕೊಂಡು ಅದನ್ನು ನಂತರ ಇಲ್ಲಿಗೆ ಸಮೀಪದ ಭೋಗನಹಳ್ಳಿಯ ಸ್ವಾಮಿಗೌಡ ಎಂಬ ನಿವೃತ್ತ ಶಿಕ್ಷಕರ ಬಳಿ ಇಡುತ್ತಿದ್ದೆವು. ಹೀಗೆ ನನ್ನ ಪತಿ ಕಳೆದ 11 ವರ್ಷಗಳಿಂದಲೂ ಅವರೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಇವರಿಬ್ಬರು ಎಲ್ಲ ವ್ಯವಹಾರಗಳನ್ನು ನಂಬಿಕೆಯಿಂದಲೇ ನಡೆಸಿಕೊಂಡು ಬರುತ್ತಿದ್ದರು.
ತೀರ್ಪಿನ ನಂತರ ದಯಾಮರಣದ ಅರ್ಜಿ ಸ್ವೀಕರಿಸಿದ ಮೊದಲ ವಕೀಲೆ
ನನ್ನ ಪತಿ ಮೊಬೈಲ್ನಲ್ಲಿ ಹೇಳಿಕೊಂಡಿರುವ ವಿಡಿಯೋ ಈಗಾಗಲೇ ವೈರಲ್ ಆಗಿದೆ" ಎಂದು ಹೇಳಿದ್ದಾರೆ ಮುಂದೆ ಓದಿ...
11 ವರ್ಷಗಳಿಂದ ವ್ಯವಹಾರ
"ಸುಮಾರು1.50 ಕೋಟಿ ರೂ.ಗೆ ಮಿಗಿಲಾದ ಚಿನ್ನಾಭರಣಗಳನ್ನು ಸ್ವಾಮಿಗೌಡರವರ ಬಳಿ ಇರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ 11 ವರ್ಷಗಳಿಂದ ವ್ಯವಹಾರ ನಡೆಯುತ್ತಿದ್ದು 1.25 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬಡ್ಡಿರೂಪದಲ್ಲಿ ಸ್ವಾಮಿಗೌಡರವರಿಗೆ ನೀಡಿದ್ದಾರೆ. ಅಷ್ಟೆ ಅಲ್ಲದೇ, ಇದೇ ರೀತಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದ ತೊಟ್ಟಿಮನೆ ಶೆಟ್ಟಿರವರು ಮತ್ತು ಇವರ ತಮ್ಮ ಶರತ್ ಶೆಟ್ಟಿರವರ ಬಳಿಯೂ ವ್ಯವಹರಿಸಲಾಗಿದ್ದು ಇದರ ಜೊತೆಗೆ ನನ್ನ ಪತಿಯು ಗ್ರಾಹಕರ ವ್ಯವಹಾರಕ್ಕಾಗಿ 35 ಲಕ್ಷ ರೂ.ಗಳನ್ನು ಇದೇ ನಿವೃತ್ತ ಶಿಕ್ಷಕ ಸ್ವಾಮಿಗೌಡರವರ ಬಳಿಯೂ ವ್ಯವಹರಿಸಿದ್ದರು" ಎಂದು ಸುನೀತಾ ಹೇಳಿದ್ದಾರೆ.
ಹಣ ನೀಡದೆ ವಾಪಸ್ ಕಳಿಸಿದ್ದಾರೆ
"ಇದನ್ನೇ ದುರುಪಯೋಗಪಡಿಸಿಕೊಂಡ ಸ್ವಾಮಿಗೌಡ ಮನೆ ಮತ್ತು ಚರಾಸ್ಥಿ ಜಾಗವನ್ನು ತನ್ನ ಹೆಸರಿಗೆ ನೊಂದಾಯಿಸಿ ಕೊಡುವಂತೆ ಹೇಳಿದ್ದಾರೆ. ಇದು ನನ್ನ ಗಮನಕ್ಕೂ ಬಾರದೆ ನನ್ನ ಪತಿ ಸುಖಲಾಲ್(ಸುರೇಶ್) ಅವರು ಸ್ವಾಮಿಗೌಡರಿಗೆ ರಿಜಿಸ್ಟ್ರಾರ್ ಮಾಡಿಸಿಕೊಟ್ಟಿದ್ದು ಈ ವೇಳೆ ಸ್ವಾಮಿಗೌಡ ಮಾರನೆಯ ದಿನ ಬಂದು ಹಣ ಪಡೆಯುವಂತೆ ತಿಳಿಸಿದ್ದಾರೆ. ಅಲ್ಲದೆ ನನ್ನ ಪತಿಗೆ ಈ ಹಿಂದೆ ನೀಡಿದ್ದ 2 ಲಕ್ಷ ರೂ.ಗಳನ್ನು ಲೆಕ್ಕಕ್ಕೆ ಬರೆದುಕೊಂಡಿದ್ದು, ಬಳಿಕ ಹಣ ಪಡೆಯಲು ಹೋದ ಪತಿಗೆ ನಿನಗೆ ಯಾವುದೇ ಹಣ ನೀಡುವುದಿಲ್ಲ. ಸಂಪೂರ್ಣ ಹಣವನ್ನು ನೀಡಿದ್ದೇನೆ, ಎಂದು ಅವಮಾನಿಸಿ ಹಣ ನೀಡದೆ ವಾಪಸ್ ಕಳಿಸಿದ್ದಾರೆ" ಎಂದು ಸುನೀತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆತ್ತಲೆಗೊಳಿಸಿ ಮಹಿಳೆಗೆ ಥಳಿತ: ದಯಾಮರಣ ಕೋರಿ ಅರ್ಜಿ
ಪತಿ ನಾಪತ್ತೆ, ದೂರು
"ಇದರಿಂದ ನೊಂದ ಪತಿ ಸುಖಲಾಲ್(ಸುರೇಶ್) ಅವರು ಮಕ್ಕಳನ್ನು ಮನೆಯಿಂದ ವಾಹನದಲ್ಲಿ ಕೂರಿಸಿಕೊಂಡು ಶಾಲೆಗೆ ಬಿಟ್ಟು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದಿನಾಂಕ : 09-07-2018 ರಂದು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ನನ್ನ ಪತಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದೆನು. ಪೊಲೀಸ್ ತನಿಖೆಯಾದಾಗ ಹಾವೇರಿ ಜಿಲ್ಲೆಯ ಸಮೀಪ ತುಂಗಭದ್ರಾ ನದಿ ತೀರದ ಜಂಕ್ಷನ್ನಲ್ಲಿ ವಾಹನ, ಮೊಬೈಲ್, ಬಟ್ಟೆ ಮಾತ್ರ ದೊರೆತಿದ್ದು, ಇದಾದ ನಂತರ ಯಾವುದೇ ಮಾಹಿತಿ ಸಿಕ್ಕಿಲ್ಲ. ನನ್ನ ಪತಿ ಸುಖಲಾಲ್ ನಾಪತ್ತೆಯಾಗಿ 6 ತಿಂಗಳು ಕಳೆದಿದೆ. ನನ್ನ ಗಂಡನನ್ನು ಕೊಲೆ ಮಾಡಿರಬಹುದೆಂಬ ಶಂಕೆಯಿದೆ ಈ ಬಗ್ಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಹುಣಸೂರು ಡಿವೈಎಸ್ ಪಿ ಮತ್ತು ಪಿರಿಯಾಪಟ್ಟಣ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ" ಎಂದು ಸುನೀತಾ ಆರೋಪಿಸಿದ್ದಾರೆ.
ದಯಾಮರಣ ಕೋರುತ್ತಿದ್ದೇವೆ
"ಪತಿ ನಾಪತ್ತೆಯಾದಲ್ಲಿಂದ ನಾನು ಹಾಗೂ ನನ್ನ ಮಕ್ಕಳಾದ ಐಶ್ವರ್ಯ(10), ಅನೂಶ(8), ರಾಶಿ(5) ಮತ್ತು ಮುಖೇಶ್(2) ಅವರುಗಳು ಮಾನಸಿಕ ತೊಂದರೆಗೆ ಸಿಲುಕಿದ್ದು ಅಲ್ಲದೆ ಯಾವುದೇ ಆರ್ಥಿಕ ಸಂಪನ್ಮೂಲಗಳು ಇಲ್ಲದೆ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದು, ಇವರ ವಿದ್ಯಾಭ್ಯಾಸವೂ ಕೂಡ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಬಂದಿದ್ದು, ನನ್ನ ಮಕ್ಕಳ ಆರೋಗ್ಯವೂ ಕೂಡ ಹದಗೆಡುತ್ತಿದೆ. ಪಿರಿಯಾಪಟ್ಟಣದ ಪೊಲೀಸ್ ಠಾಣೆಯ ಉಪ ನಿರೀಕ್ಷಕರನ್ನು ಕೇಳಿದರೆ ದೂರು ಸ್ವೀಕರಿಸಿದ್ದೇವೆ, ನಾಪತ್ತೆಯಾದ ವ್ಯಕ್ತಿಜೀವಂತವಾಗಿ ಅಥವಾ ಮೃತವಾಗಿ ದೊರೆಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಎಷ್ಟೇ ವರ್ಷಗಳು ಕಳೆದರೂ ತನಿಖೆ ಮುಂದುವರೆಯುತ್ತದೆ ಎನ್ನುತ್ತಿದ್ದಾರೆ. ನನಗೆ ಜೀವನ ಸಾಗಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತಿ ಇಲ್ಲದಾಗಿದೆ. ಆದ್ದರಿಂದ ನಾನು ಮತ್ತು ನನ್ನ ಮಕ್ಕಳು ಅಸಹಾಯಕತೆಯಿಂದ ಜೀವಿಸಲು ಆಗದೆ ದಯಾಮರಣ ಕೋರುತ್ತಿದ್ದೇವೆ. ನನ್ನ ಮನವಿಯ ಮೇಲೆ ಸೂಕ್ತ ಕ್ರಮ ಜರುಗಿಸುತ್ತೀರೆಂದು ನಂಬಿದ್ದೇನೆ" ಎಂದು ದಯಾಮರಣಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಸುನೀತಾ ವಿವರಿಸಿದ್ದಾರೆ.