ಮೈಸೂರಿನಲ್ಲಿ ವಿಷ ಸೇವಿಸಿ ಪೇದೆ ಸಾವಿಗೆ ಶರಣು
ಮೈಸೂರು, ಜನವರಿ 4: ನಗರದ ಗೌರಿಶಂಕರ ಬಡಾವಣೆಯ ಪಾಳು ಜಾಗದಲ್ಲಿ ಪೊಲೀಸ್ ಪೇದೆಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಜುರಗಿದೆ.
ಹುಣಸೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಪರಮೇಶ್(31) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದೊಂದು ವಾರದಿಂದ ಮೈಸೂರಿನ ನಂಜನಗೂಡು ರಸ್ತೆಯ ಅಡಕನಹಳ್ಳಿಯಲ್ಲಿ ಏರ್ಪಾಟಾಗಿದ್ದ ರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು.[ಮಾಲೂರು ಸರ್ಕಲ್ ಇನ್ ಸ್ಪೆಕ್ಟರ್ ಠಾಣೆಯಲ್ಲೇ ಆತ್ಮಹತ್ಯೆ]

ಈ ಕಾರ್ಯಕ್ರಮಕ್ಕೆ ಜಿಲ್ಲೆ ಮಾತ್ರವಲ್ಲದೆ, ಹೊರಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜಿಸಲಾಗಿದ್ದು, ಕೆಲವರನ್ನು ಈಗಾಗಲೇ ಕರ್ತವ್ಯದಿಂದ ಬಿಡುಗಡೆ ಮಾಡಿದ್ದು ಅವರವರ ಠಾಣೆಗೆ ಹಿಂತಿರುಗಿ ತಮ್ಮ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಪೇದೆ ಪರಮೇಶ್ ಅವರನ್ನು ಕೂಡ ಜಾಂಬೂರಿ ಉತ್ಸವದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರು ಮಾನಸಿಕವಾಗಿ ಜರ್ಜರಿತಗೊಂಡಿದ್ದರು ಎನ್ನಲಾಗಿದೆ.
ಆದರೆ ಪರಮೇಶ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಕೆಲವು ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಂತೆ. ಈ ಸಂದರ್ಭ ಮೇಲಾಧಿಕಾರಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಇನ್ನು ಕೆಲವು ಮಾಹಿತಿ ಪ್ರಕಾರ ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸುವ ಸಲುವಾಗಿ ಪರದಾಡುತ್ತಿದ್ದರು ಎನ್ನಲಾಗಿದೆ.[ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ?]
ಮಂಗಳವಾರ ಕರ್ತವ್ಯ ಮುಗಿಸಿ ಅಡಕನಹಳ್ಳಿಯಿಂದ ಬಂದಿದ್ದ ಅವರು ಮನೆಗೆ ಹೋಗುವ ಬದಲು ನೇರವಾಗಿ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಗೌರಿಶಂಕರ ನಗರಕ್ಕೆ ತೆರಳಿದ್ದು ಅಲ್ಲಿರುವ ಖಾಲಿ ಜಾಗದಲ್ಲಿ ವಿಷಸೇವಿಸಿದ್ದಾರೆ. ಬುಧವಾರ ಸಾರ್ವಜನಿಕರು ಕೆ.ಆರ್.ಠಾಣೆಗೆ ವಿಷಯ ಮುಟ್ಟಿಸಿದ್ದು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications