ಬೇಸಿಗೆ ದಾಹ ನೀಗಿಸುವ ಕೋಲ್ಡ್ ಪ್ರಿಯರ ಮಣ್ಣಿನ ಫ್ರಿಡ್ಜ್..!
ಮೈಸೂರು ಜಿಲ್ಲೆಯ ಕೆಲವು ರಸ್ತೆ ಬದಿಗಳಲ್ಲಿ ಒಪ್ಪವಾಗಿ ಜೋಡಿಸಿ ಇಟ್ಟಿರುವ ಮಣ್ಣಿನ ಫಿಲ್ಟರ್ ಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮುಂಬರುವ ದಿನಗಳು ಬೇಸಿಗೆಯ ದಿನಗಳಾಗಿರುವುದರಿಂದ ಮಣ್ಣಿನ ಮಡಿಕೆ (ಫಿಲ್ಟರ್)ಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ ಕೆಲವರು ಮಣ್ಣಿನ ಫಿಲ್ಟರ್ ನತ್ತ ಮುಖ ಮಾಡಿರುವುದು ಕಂಡು ಬರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹಲವು ಬಗೆಯ ಫಿಲ್ಟರ್ ಗಳು ಬಂದಿರುವುದರಿಂದ ಮಣ್ಣಿನ ಫಿಲ್ಟರ್ ಸೇರಿದಂತೆ ಪಾತ್ರೆಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದ್ದರೂ ನೋಡಲು ಆಕರ್ಷಕವಾಗಿದ್ದರೆ ಅಂಥ ವಸ್ತುಗಳನ್ನು ಖರೀದಿಸುವ ಫ್ಯಾಷನ್ ಪ್ರಿಯರಿದ್ದಾರೆ. ಇಂತಹವರಿಗಾಗಿಯೇ ಬಿಹಾರದ ವ್ಯಾಪಾರಿಗಳು ಆಕರ್ಷಕ, ಕಲಾತ್ಮಕ ಮಣ್ಣಿನ ಫಿಲ್ಟರ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.[ಚುಮುಚುಮು ಚಳಿ ಮತ್ತು ಆರೋಗ್ಯದ ಆರೈಕೆ]

ನೋಡಲು ವಿಭಿನ್ನವಾಗಿರುವುದರಿಂದ ಜತೆಗೆ ಮನೆಯಲ್ಲಿ ಅಲಂಕಾರಿಕ ವಸ್ತುಗಳ ಸ್ಥಾನವನ್ನು ತುಂಬುವುದರಿಂದ ಒಂದಷ್ಟು ಜನ ಈ ಫಿಲ್ಟರ್ ಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿರುವ ಫಿಲ್ಟರ್ ಗಳು ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳಿಂದ ಕೂಡಿ ವಿಭಿನ್ನವಾಗಿವೆ. ಸುರಕ್ಷತೆಗಾಗಿ ಸ್ಟಾಂಡ್ನ್ನು ಕೂಡ ಅಳವಡಿಸಲಾಗಿದೆ. 10ಲೀ, 20ಲೀಟರ್ ನೀರು ತುಂಬುವ ಸಾಮರ್ಥ್ಯ ಹೊಂದಿರುವ ಇವುಗಳ ಬೆಲೆ 300ರೂ.ನಿಂದ ಆರಂಭವಾಗುತ್ತದೆ.
ಸಂಕಷ್ಟದಲ್ಲಿ ಸ್ಥಳೀಯ ಕುಂಬಾರರು:
ಎಲ್ಲಿಂದಲೋ ಬಂದು ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡಿ ಬದುಕು ಸಾಗಿಸುವವರು ಒಂದೆಡೆಯಾದರೆ, ತಾತ, ಮುತ್ತಾಂದಿರ ಕಾಲದಿಂದ ಮಣ್ಣಿನ ಪಾತ್ರೆಗಳನ್ನೂ ತಯಾರಿಸುತ್ತಾ... ಮಾರಾಟ ಮಾಡಿ ಬದುಕುತ್ತಿರುವ ಸ್ಥಳೀಯ ಕುಂಬಾರರು ಮತ್ತು ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಇವತ್ತಿಗೂ ಬನ್ನೂರು, ಕಿರುಗಾವಲು, ದೂರ ಗ್ರಾಮಗಳಲ್ಲಿ ಮಣ್ಣಿನ ಮಡಿಕೆ ತಯಾರು ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳಿವೆ. ಅವರು ತಾವು ತಯಾರಿಸಿದ ಪಾತ್ರೆಗಳನ್ನು ತಂದು ನಗರದ ಕೆಲವು ಅಂಗಡಿಗಳಿಗೆ ಮಾರಾಟ ಮಾಡಿ ತೆರಳುತ್ತಾರೆ.['ಮಳೆ ನೀರು ಸಂಗ್ರಹಿಸದಿದ್ದರೆ ದಂಡ ಗ್ಯಾರಂಟಿ']
ಹೆಚ್ಚಿನ ಬೇಡಿಕೆಯಿಲ್ಲದ ಕಾರಣ ಅವರಿಂದ ಖರೀದಿಸಿ ಮಾರಾಟ ಮಾಡಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಕೆಲವು ಮಡಿಕೆ ಅಂಗಡಿಗಳಲ್ಲಿ ದಿನಕ್ಕೆ ನೂರು ರೂಪಾಯಿ ಕೂಡ ವ್ಯಾಪಾರವಾಗುವುದಿಲ್ಲ. ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಿ ಕೃಷ್ಣಪ್ಪ ಅವರ ಧರ್ಮಪತ್ನಿಯಾಗಿರುವ ಜಯಮ್ಮ ಅವರು ಅಗ್ರಹಾರದ 101 ಗಣಪತಿ ದೇವಾಲಯದ ಬಳಿ ಮಣ್ಣಿನ ಮಡಿಕೆ ಮಾರಾಟದ ಅಂಗಡಿ ನಡೆಸುತ್ತಿದ್ದಾರೆ.

ಜಯಮ್ಮ ಅವರು ಹೇಳುವಂತೆ ತಾತನ ಕಾಲದಿಂದಲೂ ಮಡಿಕೆ ವ್ಯಾಪಾರವೇ ಕಸುಬು. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಮಣ್ಣಿನ ಪಾತ್ರೆಗಳನ್ನು ಕೊಳ್ಳುವವರೇ ಇಲ್ಲವಾಗಿದ್ದಾರಂತೆ. ದಿನಕ್ಕೆ 50 ರೂ. ಕೂಡ ವ್ಯಾಪಾರವಾಗದ ದಿನಗಳಿವೆ.ಆದ್ದರಿಂದ ಇದನ್ನೇ ನಂಬಿ ಬದುಕೋದು ಸಾಧ್ಯವಿಲ್ಲ ಎನ್ನುವ ಜಯಮ್ಮ ಮೊದಲೆಲ್ಲಾ ಹೂಕುಂಡಗಳನ್ನಾದರು ಖರೀದಿಸುತ್ತಿದ್ದರು. ಈಗ ಸಿಮೆಂಟ್ ನಿಂದ ತಯಾರಾದ ಹೂಕುಂಡಗಳು ಮಾರುಕಟ್ಟೆಗೆ ಬರುವುದರಿಂದ ಅದನ್ನೂ ಕೂಡ ಖರೀದಿಸುವವರೇ ಇಲ್ಲವಾಗಿದ್ದಾರೆ ಎಂದು ವಿಷಾದದಿಂದ ನುಡಿಯುತ್ತಾರೆ.[ಜೆಪಿ ನಗರದಲ್ಲಿ ಈವಯ್ಯ ಮಾಡುತ್ತಿರುವುದಾದರೂ ಏನು?]
ಬೇರೆ ದಿನಗಳಲ್ಲಿ ಮಡಿಕೆ, ಕುಡಿಕೆ ಕೇಳಿಕೊಂಡು ಅಂಗಡಿಗೆ ಬರೋರೇ ಇಲ್ಲ. ಯಾರಾದ್ರು ಸತ್ರೆ ಮಾತ್ರ ಬಂದು ಮಡಿಕೆನೋ, ಕುಡಿಕೆನೋ ಕೇಳುತ್ತಾರೆ.
ನಾವು ವಯಸ್ಸಾದವರು ಹಿಂದಿನಿಂದಲೂ ಇದೇ ವ್ಯಾಪಾರ ಮಾಡಿಕೊಂಡು ಬಂದಿದ್ದೀವಿ. ಬಿಟ್ಟು ಇರೋಕಾಗಲ್ಲ ಆದ್ದರಿಂದ ಬಂದು ಕೂತ್ಕೋತ್ತೀವಿ. ವ್ಯಾಪಾರ ಆಗುತ್ತೋ ಬಿಡುತ್ತೋ ಕಾಲ ಕಳೆದು ಮನೆಗೆ ಹೋಗ್ತೀವಿ. ಇದೇ ವ್ಯಾಪಾರನ ನಂಬಿದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆ ಅಷ್ಟೆ ಎನ್ನುತ್ತಾರೆ ಜಯಮ್ಮ.












Click it and Unblock the Notifications