ಹುಣಸೂರಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಚಾಲಕ ಸಾವು
ಮೈಸೂರು, ನವೆಂಬರ್ 25: ನಾಗರಹೊಳೆಗೆ ತೆರಳುತ್ತಿದ್ದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಸ್ನೇಹಿತರಿಬ್ಬರು ತೀವ್ರಗಾಯಗೊಂಡಿರುವ ಘಟನೆ ಹುಣಸೂರು-ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ನಡೆದಿದೆ.
ಹುಣಸೂರು ತಾಲೂಕಿನ ಹೊಸಪೆಂಜಹಳ್ಳಿಯ ಸುರೇಶ್ ಗೌಡರ ಪುತ್ರ ರಾಜೇಶ್(30) ಮೃತಪಟ್ಟ ದುರ್ದೈವಿ. ಜತೆಗಿದ್ದ ಗ್ರಾಮದವರೇ ಆದ ರವೀಶ್, ರವಿಗೌಡ ತೀವ್ರ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಮೃತ ರಾಜೇಶ್ ಇನೋವಾ ಕಾರಿನಲ್ಲಿ ಸ್ನೇಹಿತರಾದ ರವೀಶ್ ಮತ್ತು ರವಿಗೌಡ ಅವರೊಂದಿಗೆ ತನ್ನ ಗ್ರಾಮ ಹೊಸಪೆಂಜಹಳ್ಳಿಯಿಂದ ನಾಗರಹೊಳೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹುಣಸೂರು-ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ಚಾಲನೆ ಮಾಡುತ್ತಿದ್ದ ರಾಜೇಶ್ ಅವರ ನಿಯಂತ್ರಣ ತಪ್ಪಿದ ಪರಿಣಾಮ ಕಾರು ನೇರವಾಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಜೇಶ್ ಸ್ಥಳದಲ್ಲೇ ಮೃತಪಟ್ಟರೆ, ರವೀಶ್, ರವಿಗೌಡ ತೀವ್ರ ಗಾಯಗೊಂಡಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತ ರಾಜೇಶ್ ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications