ಮೈಸೂರು ಜಿಲ್ಲೆಯಲ್ಲಿ 80 ವರ್ಷ ದಾಟಿದ 84,917 ಜನರಿಗೆ ಅಂಚೆ ಮತದಾನಕ್ಕೆ ಅವಕಾಶ
ಮೈಸೂರು, ಏಪ್ರಿಲ್, 04: ವಿಧಾನಸಭೆ ಚುನಾವಣೆ ದಿನದಂದು ಜಿಲ್ಲೆಯಲ್ಲಿ ಯಾರೂ ಮತದಾನದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಸಿಗೆ ಹಿಡಿದಿರುವವರು, 80 ದಾಟಿದ ಹಿರಿಯರು, ವಿಶೇಷಚೇತನರಿಗೆ ಇದೇ ಮೊದಲ ಬಾರಿಗೆ ಅಂಚೆ ಮುಖಾಂತರ ಮತದಾನ ಮಾಡಲು ಅವಕಾಶ ನೀಡಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಬರೋಬ್ಬರಿ 26.22 ಲಕ್ಷಕ್ಕೂ ಅಧಿಕ ಮಂದಿ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಬಹುತೇಕ ಎಲ್ಲಾ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆದರೆ 1.16 ಲಕ್ಷ ಮಂದಿ ಮತದಾರರು ಮನೆ ಬಾಗಿಲಿನಲ್ಲಿಯೇ ಮತದಾನ ಮಾಡಬಹುದು.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿಯೂ ಕಳೆದ ಬಾರಿಗಿಂತಲೂ ಮತದಾನದ ಪ್ರಮಾಣ ಹೆಚ್ಚಾಗಲಿದೆ ಎಂಬುದು ಜಿಲ್ಲಾಡಳಿತದ ಲೆಕ್ಕಾಚಾರವಾಗಿದೆ.
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 84,917 ಮಂದಿ 80 ವರ್ಷ ತುಂಬಿದವರು ಇದ್ದಾರೆ. ಅಲ್ಲದೇ 31,492 ಮಂದಿ ವಿಶೇಷಚೇತನರಿದ್ದಾರೆ. 2,430 ಮಂದಿ ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕಡೇ ದಿನಾಂಕದವರೆಗೂ ಈ ಸಮೀಕ್ಷೆ ಕಾರ್ಯ ಮುಂದುವರಿಯಲಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇವರೆಲ್ಲರೂ ಮತದಾನ ಪಕ್ರಿಯೆಯಲ್ಲಿ ತೊಡಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ ಚುನಾವಣೆ ಆಯೋಗದ ಆದೇಶದಂತೆ 80 ವರ್ಷ ಪೂರೈಸಿದವರು, ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿರುವವರು, ವಿಶೇಷಚೇತನರೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಈಗಾಗಲೇ ಸಮೀಕ್ಷೆಯನ್ನು ಆರಂಭಿಸಲಾಗಿದೆ.

ವಿಶೇಷ ಕಾಳಜಿಯ ವಿವರ ತಿಳಿಯಿರಿ
ಈ ಹಿಂದಿನ ಚುನಾವಣೆಗಳಲ್ಲಿ ವಿಶೇಷಚೇತನರು ಬೇರೆಯವರ ಸಹಾಯದಿಂದ ಮತಗಟ್ಟೆವರೆಗೆ ಬಂದು ಅಲ್ಲಿ ಒದಗಿಸಲಾಗಿದ್ದ ವೀಲ್ ಚೇರ್ ಬಳಕೆ ಮಾಡಿಕೊಂಡು ಮತದಾನ ಮಾಡುತ್ತಿದ್ದರು. ಅಲ್ಲದೇ 80 ವರ್ಷ ದಾಟಿದವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ವಾಹನಗಳಲ್ಲಿ ಮತಗಟ್ಟೆಯವರೆಗೆ ಕರೆತಂದು, ಕೆಲವರು ಅವರನ್ನು ಸ್ವತಃ ಎತ್ತಿಕೊಂಡು ಹೋಗಿ ಮತ ಹಾಕಿಸುತ್ತಿದ್ದರು.
ಅಷ್ಟೇ ಅಲ್ಲದೇ ಹಾಸಿಗೆ ಹಿಡಿದವರೂ ಕೂಡ ನಾನಾ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಮತಗಟ್ಟೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಈ ಮೂರು ವಿಭಾಗದವರು ಸಂಕಷ್ಟಗಳನ್ನು ದಾಟಿ ಮತದಾನ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ಮತದಾನದಿಂದ ಹೊರಗುಳಿಯುತ್ತಿದ್ದರು.
ಆದ್ದರಿಂದ ಸಮಾಜದಲ್ಲಿರುವ ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಪ್ರಜಾಪ್ರಭುತ್ವದ ಯಶಸ್ವಿಗೊಳಿಸಲು ಅಂಚೆ ಮತದಾನ ಮಾಡುವ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿಭಟನೆ ನಡೆಸಿದ್ದ ಹಳ್ಳಿಹಕ್ಕಿ
ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಇತ್ತೀಚೆಗಷ್ಟೇ ಮೈಸೂರು ನಗರದ ನ್ಯಾಯಾಲಯದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಇಂದು ಪ್ರಾಯಶ್ಚಿತ ಸತ್ಯಾಗ್ರಹ ಹೆಸರಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದರು.
ಪ್ರಾಯಶ್ಚಿತ ಸತ್ಯಾಗ್ರಹ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ಸಿನಲ್ಲಿಯೇ ಇದ್ದವನು ನಾನು. ಎಲ್ಲಿದ್ದರೂ, ಹೇಗಿದ್ದರೂ ಎಲ್ಲ ಕಾಲದಲ್ಲಿಯೂ ನನ್ನ ಮನಸ್ಸಿನಲ್ಲಿರುವುದು ಕಾಂಗ್ರೆಸ್ ಮಾತ್ರ ಶಾಸಕ, ಸಚಿವ, ಸಂಸದನಾಗಿ ಸದಾ ಕಾಲವೂ ಜನರೊಟ್ಟಿಗೆ ಬೆರೆತು ಬದುಕಿದ ಹಾಗೂ ಜನರೊಟ್ಟಿಗೇ ಬದುಕಲು ಬಯಸುವ ಜೀವ ನನ್ನದು ಎಂದು ತಿಳಿಸಿದರು.
ಕೆಲವರು ನೀವು ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ ಎಂದು ಹೇಳುತ್ತಿದ್ದಾರೆ. ನಾನು ಸಾಂಸ್ಕೃತಿಕ ಮತ್ತು ಸಾಹಿತ್ಯಕವಾದ ಕೋಟಾದ ಅಡಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯನಾಗಿದ್ದೇನೆಯೇ ಹೊರತು, ಪಕ್ಷದ ಬಲದಿಂದ ಅಲ್ಲ ಎನ್ನುವುದನ್ನು ದೂರುವ ಮಂದಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ನಾನು ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯನಾದುದರಿಂದ ಸ್ವತಂತ್ರನಾಗಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಸೇರಿದವನಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ ಎಂದರು.












Click it and Unblock the Notifications