ಬೀಡುಬಿಟ್ಟ 3 ಆನೆಗಳು, ಮಂಗಲ ಬಳಿ ಮೊಕ್ಕಾಂ ಹೂಡಿದ ಅರಣ್ಯ ಸಿಬ್ಬಂದಿ
ಮೈಸೂರು, ಜನವರಿ 20: ಕಳೆದ ದಿನವಷ್ಟೇ ಯಳಂದೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಆನೆಗಳು ಶನಿವಾರ ಸಂತೇಮರಹಳ್ಳಿ ಭಾಗದ ಮಂಗಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ.
ನಡುಕಲಮೋಳೆ, ಚುಂಗಡಿಪುರ, ಮಹಂತಾಳಪುರ ಹಾಗೂ ಕರಡಿಮೋಳೆ ಮಾರ್ಗವಾಗಿ ಬಂದ ಆನೆಗಳು ಮಂಗಲ ಗ್ರಾಮದ ಜಮೀನೊಂದರಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಗಿಡಗಳ ಪೊದೆಗಳಲ್ಲಿ ಬೀಡು ಬಿಟ್ಟಿವೆ. ಇವುಗಳನ್ನು ಗಮನಿಸಿದ ದನಗಾಹಿಗಳು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯವರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ.

ಆಗ ಸುತ್ತಲಿನ ಜನರನ್ನು ಕಂಡ ಆನೆಗಳು ಸಂಜೆಯವರೆಗೆ ಪೊದೆಯಿಂದ ಹೊರಬರುವುದು ಹೋಗುವುದು ಮಾಡಿದವು. ಈ ಸ್ಥಳದಲ್ಲಿ ನೀರು ಇದ್ದ ಪರಿಣಾಮ ಆನೆಗಳು ಬೀಡು ಬಿಟ್ಟಿದ್ದವು. ಮುಸ್ಸಂಜೆಯ ಸಮಯದಲ್ಲಿ ಕರಡಿಮೋಳೆ ಸನಿಹಕ್ಕೆ ಬಂದವು. ಅವುಗಳನ್ನು ಬಂದ ದಾರಿಯ ಮೂಲಕ ಹಿಂತಿರುಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಯತ್ನಿಸಿದರೂ ಪ್ರಯೋಜನವಾಗಿಲ್ಲ.
ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ ಮಹದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಚಂದ್ರಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ 25 ಸಿಬ್ಬಂದಿ ಮೊಕ್ಕಾಂ ಹೂಡಿ ಆನೆಗಳನ್ನು ಕಾಡಿಗೆ ಕಳುಹಿಸಲು ಶ್ರಮವಹಿಸಿದರು. ಇಂದು ಕೂಡ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಚಂದ್ರಕುಮಾರ್ ತಿಳಿಸಿದರು.












Click it and Unblock the Notifications