ಮೈಸೂರು ಅರಮನೆಗೆ ಆಗಮಿಸಿದ ಗಜಪಡೆಯ 2 ನೇ ತಂಡ
ಮೈಸೂರು, ಸೆಪ್ಟೆಂಬರ್ 1 : ವಿಶ್ವವಿಖ್ಯಾತ ದಸರಾ ಮಹೋತ್ಸವ 2017ರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಗುರುವಾರ ನಗರಕ್ಕೆ ಆಗಮಿಸಿದ ಗಜಪಡೆಯ ಎರಡನೇ ತಂಡದ 7 ಆನೆಗಳನ್ನು ಅಂಬಾವಿಲಸ ಅರಮನೆ ಪ್ರವೇಶದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಮಾವುತರು ಕಾವಾಡಿ ಟೀಂಗಳಿಗೆ ಬಾಡಿ ಮಸಾಜ್ ಭಾಗ್ಯ!
ಅರಮನೆಯ ಪೂರ್ವ ದಿಕ್ಕಿನಡೆಗೆ ಇರುವ ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು 7 ಆನೆಗಳ ತಂಡವನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡು ಕೊಂಡಲು ಅವರ ನೇತೃತ್ವದಲ್ಲಿ ಎರಡನೇ ತಂಡದ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ನಂತರ ಅರಮನೆ ಮಂಡಳಿ ವತಿಯಿಂದಲೂ ಸ್ವಾಗತಿಸಲಾಯಿತು.
ದಸರಾ ಮಹೊತ್ಸವಕ್ಕೆ ಆಗಮಿಸಿದ ಎರಡನೇ ತಂಡದ ಗಜಪಡೆಯಲ್ಲಿ ಗೋಪಾಲಸ್ವಾಮಿ (35), ಕೃಷ್ಣ (56), ದ್ರೋಣ (35), ವಿಕ್ರಮ (44), ಗೋಪಿ (35), ಹರ್ಷ (50) ಮತ್ತು ಪ್ರಶಾಂತ (61) ಆನೆಗಳು ಇವೆ. ಗೋಪಾಲಸ್ವಾಮಿ, ಕೃಷ್ಣ, ದ್ರೋಣ ಮತ್ತಿಗೋಡು ಆನೆ ಶಿಬಿರದಿಂದ ಹಾಗೂ ವಿಕ್ರಮ, ಗೋಪಿ, ಹರ್ಷ, ಪ್ರಶಾಂತ ಆನೆಗಳು ದುಬಾರೆ ಆನೆ ಶಿಬಿರದಿಂದ ಆಗಮಿಸಿವೆ. ಎಲ್ಲಾ ಆನೆಗಳು ಗಂಡು ಆನೆಗಳಾಗಿದ್ದು, ನಿರಾತಂಕವಾಗಿ ಲಾರಿಯಿಂದ ಇಳಿದು ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ.
ದಸರಾ ಅಂದ್ರೆ ಕನ್ನಡಮ್ಮನ ಪೂಜೆ, ಆದ್ರೆ ವೆಬ್ ಸೈಟ್ ನಲ್ಲಿ ಕನ್ನಡ ಕೇಳಬೇಡಿ!
ಇದೇ ಸಂದರ್ಭದಲ್ಲಿ ಅರಮನೆ ಮಂಡಳಿ ವತಿಯಿಂದ ನಿತ್ಯ ಬಳಕೆಯ ಕಿಟ್ ಗಳನ್ನು ವಿತರಿಸಲಾಯಿತು. ಆ.12ರಂದು ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಹೊರಟ ಮೊದಲ ಗಜಪಡೆ ಆ.17ರಂದು ಅದ್ಧೂರಿ ಸ್ವಾಗತದೊಂದಿಗೆ ಅರಮನೆ ಪ್ರವೇಶಿಸಿತ್ತು. ಅರ್ಜುನನ ನೇತೃತ್ವದಲ್ಲಿ ಬಂದ ಈ ಎಂಟು ಆನೆಗಳು ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿವೆ. ಸೆ.30ರಂದು ನಡೆಯಲಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 15 ಆನೆಗಳು ಭಾಗಿವಹಿಸಲಿವೆ.