ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?
ಮೈಸೂರು, ಆಗಸ್ಟ್ 17 : ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ರೈತರ ಸರಣಿ ಆತ್ಮಹತ್ಯೆ ಹಿನ್ನಲೆಯಲ್ಲಿ 2015ನೇ ಸಾಲಿನ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಅದರಂತೆ ಲೇಸರ್ ಶೋ, ಯುವ ದಸರಾ, ನಗರದ ದೀಪಾಲಂಕಾರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕತ್ತರಿ ಬೀಳಲಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. [ಸರಳವಾಗಿ ಮೈಸೂರು ದಸರಾ ಆಚರಣೆ : ಸಿದ್ದರಾಮಯ್ಯ]
ಮಳೆ ಕೊರತೆ ಹಿನ್ನಲೆಯಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಆದ್ದರಿಂದ ನಗರದಲ್ಲಿ ದೀಪಾಲಂಕಾರ ರದ್ದುಗೊಳಿಸಲಾಗುತ್ತದೆ. ನಗರದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ ಇರುವುದಿಲ್ಲ. ಕೆಲವು ಕಡೆ ಮಾತ್ರ ದೀಪಾಲಂಕಾರ ಇರಲಿದೆ ಎಂದು ಸಚಿವರು ತಿಳಿಸಿದರು.
ದಸರಾದ ಸಿದ್ಧತೆಗಳ ಕುರಿತು ಬೆಂಗಳೂರಿನಲ್ಲಿ ಒಂದು ಸುತ್ತಿನ ಸಭೆ ನಡೆದಿದೆ. ಆಗಸ್ಟ್ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಲಿದ್ದು, ಅಂದು ಅವರೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಸರಳ ದಸರಾ ಏನಿರುತ್ತೆ?, ಏನಿಲ್ಲ....
ಸರಳವಾಗಿ ಜಂಬೂ ಸವಾರಿ
ಸರಳವಾಗಿ ದಸರಾ ಆಚರಿಸುವುದರಿಂದ ಗಜಪಯಣ ಸ್ವಾಗತವೂ ಅದ್ದೂರಿಯಾಗಿ ಇರುವುದಿಲ್ಲ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯೂ ಸರಳವಾಗಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಸ್ತಬ್ಧ ಚಿತ್ರಗಳನ್ನು ಆಹ್ವಾನಿಸುವುದಿಲ್ಲ
ಜಂಬೂ ಸವಾರಿ ಮೆರವಣಿಗೆಗೆ ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಸ್ತಬ್ಧಚಿತ್ರ ಹಾಗೂ ಕಲಾತಂಡಗಳನ್ನು ಆಹ್ವಾನಿಸುವುದಿಲ್ಲ. ಮೈಸೂರು ಜಿಲ್ಲೆಯ ಸ್ತಬ್ಧಚಿತ್ರ ಹಾಗೂ ಕಲಾತಂಡಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.
ರೈತರಿಂದ ಈ ಬಾರಿಯ ದಸರಾ ಉದ್ಘಾಟನೆ?
ದಸರಾ ಮಹೋತ್ಸವವನ್ನು ರೈತರಿಂದ ಉದ್ಘಾಟನೆ ಮಾಡಿಸುವ ಚಿಂತನೆ ಸರ್ಕಾರದ ಮುಂದಿದೆ. ಸರೋದ್ ವಾದಕ ಪಂ.ರಾಜೀವ ತಾರಾನಾಥ, ಸಾಹಿತಿ ದೇವನೂರ ಮಹಾದೇವ ಅವರ ಹೆಸರುಗಳನ್ನು ಪರಿಶೀಲಿಸಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಧೈರ್ಯ ತುಂಬಲು ರೈತರೊಬ್ಬರಿಂದಲೇ ಉದ್ಘಾಟಿಸಿ ಸಂದೇಶ ಕೊಡಿಸುವ ಕುರಿತು ಚರ್ಚೆ ನಡೆದಿದೆ ಎಂದು ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಯುವ ದಸರಾ, ಲೇಸರ್ ಶೋ ಇಲ್ಲ
ಯುವಕರನ್ನು ದಸರಾಕ್ಕೆ ಸೆಳೆಯುವ ಯುವ ದಸರಾ ಕಾರ್ಯಕ್ರಮ ಈ ಬಾರಿ ಇರುವುದಿಲ್ಲ. ಜಂಬೂಸವಾರಿ ನಂತರ ನಡೆಯುವ ಟಾರ್ಚ್ ಲೈಟ್ ಕೂಡಾ ಸರಳವಾಗಿರುತ್ತದೆ. ಲೇಸರ್ ಶೋ ನಡೆಸುವುದಿಲ್ಲ, ಪಟಾಕಿ ಸುಡುವುದಿಲ್ಲ. ಈ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಸಂಪ್ರದಾಯದಂತೆ ಆಹ್ವಾನಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ ರದ್ದು
ದಸರಾ ಅಂಗವಾಗಿ ನಗರದ ವಿವಿಧ ಭಾಗದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುತ್ತದೆ. ಅಂಬಾವಿಲಾಸ ಅರಮನೆಯ ಮುಂದೆ ಮಾತ್ರ ಜಾನಪದ ಗಾಯನ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಇರುತ್ತವೆ. ಇದಕ್ಕೂ ಸ್ಥಳೀಯ ಕಲಾವಿದರನ್ನು ಕರೆಸಲಾಗುತ್ತದೆ.
ದೀಪಾಲಂಕಾರವಿಲ್ಲ
ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಆದ್ದರಿಂದ ಈ ಬಾರಿಯ ದಸರಾದಲ್ಲಿ ಮೈಸೂರು ನಗರದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡುವುದಿಲ್ಲ ಎಂದು ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.