ವಿಷ ಪ್ರಸಾದ ಸೇವಿಸಿದ 15 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮೈಸೂರು, ಡಿಸೆಂಬರ್ 19 : ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅವರಲ್ಲಿ ಇಂದು ಕೆಲವರನ್ನು ಆರೋಗ್ಯ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ.
ಶಿವಮೂರ್ತಿ, ಪ್ರಭು, ದೇವರಾಜು, ಪುಟ್ಟಸ್ವಾಮಿ, ಪಾಪಾಬಾಯಿ ನಾಯಕ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯಿಂದ ಸರ್ಕಾರಿ ವಾಹನದಲ್ಲಿ ಮನೆಗೆ ಕಳುಹಿಸಲಾಗಿದೆ. ಇಂದು ಕೆ.ಆರ್. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪುಟ್ಟಸ್ವಾಮಿಯನ್ನು ಪೊಲೀಸರ ವಶಕ್ಕೆ ನೀಡಿಲ್ಲ. ನಮ್ಮ ಸಿಬ್ಬಂದಿ ಹಾಗೂ ಸರ್ಕಾರಿ ವಾಹನದಲ್ಲಿ ಮನೆಗೆ ಕಳುಹಿಸಿದ್ದೇವೆ. ಪೊಲೀಸರ ವಶಕ್ಕೆ ನೀಡಿಲ್ಲ ಎಂದು ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ರಘುರಾಂ ಮಾತನಾಡಿ ನಾವು ಬಲವಂತವಾಗಿ ಯಾರನ್ನೂ ಡಿಸ್ಚಾರ್ಜ್ ಮಾಡುತ್ತಿಲ್ಲ. ಪುಟ್ಟಸ್ವಾಮಿಯನ್ನೂ ಪೊಲೀಸರ ವಶಕ್ಕೆ ನೀಡಿಲ್ಲ. ಅವರ ಪತ್ನಿ ನಮ್ಮ ಅಧಿಕಾರಿಗಳ ಜೊತೆ ಕಳುಹಿಸಲಾಗಿದೆ. ಈ ಕ್ಷಣಕ್ಕೆ ವಿವಿಧ ಆಸ್ಪತ್ರೆಗಳಿಂದ 15 ಮಂದಿ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೂ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಡಿಸ್ಚಾರ್ಜ್ ಗೆ ಅವಕಾಶ ನೀಡುತ್ತೇವೆ ಎಂದರು.












Click it and Unblock the Notifications