ಜಸ್ಟ್ ಮಿಸ್: ಶ್ರೀಲಂಕಾ ಪ್ರವಾಸದ ಅನುಭವ ಹಂಚಿಕೊಂಡ ಪ್ರವಾಸಿಗರು
ಮೈಸೂರು, ಏಪ್ರಿಲ್ 26: "ಶ್ರೀಲಂಕಾದ ಕೊಲಂಬೊಗೆ ಪ್ರವಾಸದ ಕೊನೆಯ ದಿನ ಹೋಗೋಣವೆಂದು ಪ್ಲಾನ್ ಬದಲಾಯಿಸಿದ್ದರಿಂದ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾದೆವು. ದೇವರು ದೊಡ್ಡವನು ನಮ್ಮನ್ನು ಉಳಿಸಿದ. ಬಾಂಬ್ ಸ್ಫೋಟದ ಶಾಂಗ್ರಿಲಾ ಹೋಟೆಲ್ ನಿಂದ ಕೂಗಳತೆ ದೂರದಲ್ಲಿ ನಮಗೆ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. ಘಟನೆ ನಂತರ ನಾವು ಕೊಲಂಬೊಗೆ ಬರಲಾಗಲಿಲ್ಲ. ಇದರಿಂದ 14 ಮಂದಿ ಪಾರಾಗಿದ್ದೇವೆ" ಇದು ಶ್ರೀಲಂಕಾದಿಂದ ವಾಪಸ್ಸಾದ ನಗರ ಬಿಜೆಪಿ ಮುಖಂಡ ರವಿಶಂಕರ್ ನುಡಿದ ಮಾತುಗಳು.
ಏಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 359 ಮಂದಿ ಸಾವನ್ನಪ್ಪಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಹಲವು ಕನ್ನಡಿಗರು ಲಂಕಾ ನೆಲದಲ್ಲಿ ಪ್ರಾಣ ಬಿಟ್ಟಿದ್ದಾರೆ. ಆದರೆ ಆ ಭೀಕರ ಘಟನೆಯ ಮಧ್ಯೆ ಮೂರು ದಿನಗಳನ್ನು ಕಳೆದ ಮೈಸೂರಿನ ಹದಿನಾಲ್ಕು ಮಂದಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಮೈಸೂರಿನ ಬಿಜೆಪಿ ಮುಖಂಡ, ಮೈಸೂರು ಪೈಂಟ್ಸ್ ಆಂಡ್ ವಾರ್ನಿಶ್ ಸಂಸ್ಥೆ ಮಾಜಿ ಅಧ್ಯಕ್ಷ ರವಿಶಂಕರ್ ಹಾಗೂ ಅವರ ಗೆಳೆಯರು ಮೈಸೂರಿಗೆ ವಾಪಸ್ಸಾಗಿದ್ದಾರೆ. ಎಲ್ಲ ಕಡೆ ತುರ್ತು ಪರಿಸ್ಥಿತಿ ಘೋಷಣೆಯಿಂದ ನಮಗೆ ಅಲ್ಲಿ ಏನು ನಡೆಯುತ್ತಿದೆ ಎಂದು ಅರಿವಾಗಲಿಲ್ಲ. ಮೈಸೂರಿನಿಂದ ಕರೆ ಮಾಡಿದವರು ಹೇಳಿದ ಮೇಲೆಯೇ ಇಷ್ಟು ಭೀಕರ ಘಟನೆ ನಡೆದಿದ್ದು ಅರಿವಾಯಿತು ತಮ್ಮ ಅನುಭವವನ್ನು ಹಂಚಿಕೊಂಡರು.
ಎಂದಿನಂತೆ ಈ ವರ್ಷವೂ ಪ್ರವಾಸಕ್ಕೆ ತೆರಳಿದ್ದೆವು.ಈ ಬಾರಿ ಐದು ಮಂದಿ ಕೊಲಂಬೊ ನಗರದ ಶಾಂಗ್ರಿಲಾ ಹೋಟೆಲ್ ಸಮೀಪದ ಬಿಜೆಯೋ ಹೋಟೆಲ್ ನಲ್ಲಿ ಉಳಿದುಕೊಳ್ಳಬೇಕಿತ್ತು. ಆದರೆ ಕೊಲಂಬೊದಲ್ಲಿದ್ದ ಟೂರ್ ಗೈಡ್ ಬಳಿ ಮಾರ್ಗ ಬದಲಿಸಿ ಎಂದು ಕೇಳಿಕೊಂಡು ಕೊಲಂಬೊ ಬದಲು ಕ್ಯಾಂಡಿ ಪ್ರದೇಶದಲ್ಲಿ ತಂಗಿದೆವು.ಏಪ್ರಿಲ್ 21ರಂದು ನಾವೇನಾದರೂ ಕೊಲಂಬೊದಲ್ಲಿ ಇದ್ದಿದ್ದರೆ, ಆ ಬಾಂಬ್ ಸ್ಫೋಟ ನಡೆದ ಸ್ಥಳದ ಸಮೀಪದಲ್ಲೇ ಇರಬೇಕಾಗಿತ್ತು ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

ಆ ಕರಾಳ ನೆನಪಿನ ಜೊತೆಗೆ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ 14 ಮಂದಿ ಸದಸ್ಯರು ಸದ್ಯಕ್ಕೆ ತಮ್ಮ ತಮ್ಮ ನಿವಾಸಗಳಲ್ಲಿ ಆ ಘಟನೆಯನ್ನು ಮೆಲುಕು ಹಾಕುತ್ತಿರುವುದಲ್ಲದೇ, ತಮ್ಮ ಜೀವ ಉಳಿಸಿದ್ದಕ್ಕಾಗಿ ಪೂಜೆಯ ಮೊರೆ ಹೋಗಿದ್ದಾರೆ.












Click it and Unblock the Notifications