Get Updates
Get notified of breaking news, exclusive insights, and must-see stories!

ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ವೈಭವೋಪೇತ 11ನೇ ಕುಂಭಮೇಳಕ್ಕೆ ಚಾಲನೆ

ಮೈಸೂರು, ಫೆಬ್ರವರಿ 17: ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳಕ್ಕೆ ಪೂಜಾ ವಿಧಿವಿಧಾನದಿಂದ ಚಾಲನೆ ಸಿಕ್ಕಿದೆ.

ಇಂದಿನಿಂದ ಮೂರು ದಿನಗಳವರೆಗೆ ಕುಂಭಮೇಳ ನಡೆಯಲಿದೆ. ಸನಾತನ ಧರ್ಮ, ಸಂಸ್ಕೃತಿಗಳ ತವರು ಉತ್ತರ ಭಾರತದ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕ ಭಾಗದ ನದಿ ಸಂಗಮ ಕ್ಷೇತ್ರದಲ್ಲಿ ಶತಮಾನಗಳಿಂದ ಕುಂಭಮೇಳ ಉತ್ಸವ ಆಚರಣೆಯಲ್ಲಿದೆ. ಈ ಮೇಳಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.

ದೇವತೆಗಳು, ಅಸುರರ ನಡುವೆ ಸಮುದ್ರ ಮಥನ ನಡೆದ ವೇಳೆ ಕ್ಷೀರಸಾಗರದ ಗರ್ಭದಲ್ಲಿರುವ ಅಮೃತ ಕಳಶವನ್ನು ದೇವತೆಗಳ ವೈದ್ಯ ಧನ್ವಂತರಿ ಮೇಲೆತ್ತಿ ತರುವಾಗ ಅದನ್ನು ಅಪಹರಿಸಲು ಅಸುರರು ಯತ್ನಿಸುತ್ತಾರೆ. ಆಗ ಅಮೃತ ಬಿಂದು ಈ ಪುಣ್ಯ ಕ್ಷೇತ್ರಗಳಲ್ಲಿ ಬಿಳುತ್ತದೆ.

ಈ ಘರ್ಷಣೆಯಲ್ಲಿ ಅಮೃತ ಕಳಶ ಕೆಳಗೆ ಬೀಳುವುದನ್ನು ಚಂದ್ರನು ತಡೆಗಟ್ಟಿದರೆ, ಅದು ಒಡೆದು ಹೋಗುವುದನ್ನು ಸೂರ್ಯನು ತಡೆಗಟ್ಟಿದ. ಬೃಹಸ್ಪತಿ ಕುಂಭದ ರಕ್ಷಣೆ ಮಾಡಿದ. ಹೀಗಾಗಿ ಮೂರು ಗ್ರಹಗಳ ವಿಶಿಷ್ಟ ಸ್ಥಿತಿಯಿಂದಾಗಿ ಕುಂಭ ಒಡೆಯುವ ಬದಲು ಬಿಂದುಗಳು ಚೆಲ್ಲಿದ ಪರಿಣಾಮ ಕುಂಭಮೇಳ ಎಂಬ ಹೆಸರು ಬಂದಿದೆ.

ಗುರು ಗ್ರಹವು ಕುಂಭರಾಶಿಗೆ ಬಂದಾಗ ಸ್ನಾನ ಮೇಳ ನಡೆಯುತ್ತದೆ. ಕುಂಭಯೋಗದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಹಸ್ರ ಗೋವುಗಳನ್ನು ದಾನ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.

ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಕುಂಭಮೇಳವನ್ನು ದಕ್ಷಿಣ ಭಾರತದ ಜನರಿಗೂ ಸಿಗುವಂತೆ ಮಾಡುವ ನಿಟ್ಟಿನಲ್ಲಿ ನಾಡಿನ ಪೀಠಾಧಿಪತಿಗಳಾದ ಕೈಲಾಸಾಶ್ರಮದ ತಿರುಚ್ಚಿ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲ ಗಂಗಾಧರನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಅವರು ನಿರ್ಧರಿಸಿ 1989ರಲ್ಲಿ ಪ್ರಥಮ ಬಾರಿಗೆ ತಿ.ನರಸೀಪುರ ಪಟ್ಟಣದ ಕಾವೇರಿ, ಕಪಿಲಾ ಸ್ಫಟಿಕ ಸರೋವರಗಳ ಸಂಗಮದಲ್ಲಿ ಪ್ರಾರಂಭಿಸಿದ್ದರು.

ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು

ಸುಮಾರು 10 ಎಕರೆ ಪ್ರದೇಶಗಳಲ್ಲಿ ಧಾರ್ಮಿಕ ಕುಟೀರಗಳು, ಸಭಾ ಮಂಟಪ, ಹೋಮ, ಯಾಗ ಯಜ್ಞಾದಿಗಳ ಜತೆಗೆ ಮಹೋದಯ ಪುಣ್ಯಕಾಲದಲ್ಲಿ ಮೇಳ ಸ್ನಾನವನ್ನು ಆಯೋಜಿಸಲಾಗಿತ್ತು. 1992, 1995, 1998, 2001, 2004, 2007, 2010, 2013, 2016ರಲ್ಲಿ ಕುಂಭಮೇಳಗಳು ನಡೆದಿದ್ದವು. ಈ ವರ್ಷ 11ನೇ ಕುಂಭಮೇಳ ನಡೆಯುತ್ತಿದೆ.

ತಿ.ನರಸೀಪುರವೇ ಏಕೆ?

ತಿ.ನರಸೀಪುರವೇ ಏಕೆ?

ಉತ್ತರ ಭಾರತದ ಪ್ರಯಾಗದಲ್ಲಿ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿಯ ತ್ರಿವೇಣಿ ಸಂಗಮವಿದೆ. ವಿಷ್ಣು ಪ್ರತಿಷ್ಠಾ ವಟಾ ವೃಕ್ಷ ಹಾಗೂ ರುದ್ರಪಾದವಿದೆ. ಅದೇ ರೀತಿ ತಿರುಮಕೂಡಲಿನಲ್ಲಿ ಕಪಿಲಾ, ಕಾವೇರಿ ಹಾಗೂ ಗುಪ್ತಗಾಮಿನಿ ಸ್ಫಟಿಕ ಸರೋವರ ತ್ರಿವೇಣಿ ಸಂಗಮವಿದೆ. ಬ್ರಹ್ಮ ಪ್ರತಿಷ್ಠಾ ಅಶ್ವಥ ವೃಕ್ಷವಿದೆ. ಇಲ್ಲಿ ರುದ್ರಪಾದವಿದೆ. ವಿಷ್ಣುಪಾದವು ನೀರಿನಲ್ಲಿ ಲೀನವಾಗಿದೆ ಎಂಬ ನಂಬಿಕೆ ಇದೆ. ಮತ್ತೊಂದು ವಿಶೇಷವೆಂದರೆ ಪುಣ್ಯ ಸ್ನಾನ ಕೈಗೊಳ್ಳುವ ಮುನ್ನಾ ದೈವಾನುಮತಿ ದೊರಕುತ್ತದೆ ಎಂಬ ಪ್ರತೀತಿ ಇದೆ. ಗರುಡವೊಂದು ವೃಕ್ಷದಿಂದ ಹಾರಿ ಮೂರು ಪ್ರದಕ್ಷಿಣೆ ಹಾಕಿದರೆ ಅದು ಸ್ನಾನಕ್ಕೆ ಸೂಚನೆ. ಮೊದಲಿಗೆ ಸಾಧು ಸಂತರು ಸ್ನಾನ ಕೈಗೊಂಡ ನಂತರ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಇಂತಹ ಹೋಲಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತಿರಮಕೂಡಲಿನಲ್ಲಿ ಕಳೆದ ಮೂರು ದಶಕಗಳಿಂದ ಕುಂಭಮೇಳ ನಡೆಸಲಾಗುತ್ತಿದೆ.

ಇದು ಸಾಲದೆಂಬಂತೆ ಕಾಶಿಗಿಂತ ಒಂದು ಗುಲಗಂಜಿ ತೂಕ ಜಾಸ್ತಿ ಎಂಬ ಖ್ಯಾತಿ ಇರುವ ಗುಂಜಾನರಸಿಂಹಸ್ವಾಮಿ, ಅಗಸ್ತ್ಯ ಮುನಿಗಳು ಸ್ಥಾಪಿಸಿದ ಅಗಸ್ತ್ಯೇಶ್ವರ, ಕಾವೇರಿ ನದಿ ದಡದಲ್ಲಿ ಆನಂದೇಶ್ವರ, ತ್ರಿಕೋನಾಕಾರದಲ್ಲಿದ್ದರೆ, ಚೌಡೇಶ್ವರಿ, ಹನುಮಂತೇಶ್ವರ, ವ್ಯಾಸರಾಯ ಮಠದ ಸನ್ನಿಧಿಗಳು ಕ್ಷೇತ್ರವನ್ನು ಪವಿತ್ರ ಕ್ಷೇತ್ರ ಎನ್ನುವಂತೆ ಮಾಡಿರುವುದು ಪುರಾಣ ಇತಿಹಾಸಗಳಲ್ಲಿ ಕಂಡು ಬರುತ್ತದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ

ಧಾರ್ಮಿಕ ಕಾರ್ಯಕ್ರಮಗಳ ವಿವರ

ಫೆ.17, 18 ಹಾಗೂ 19ರಂದು ಪ್ರತಿದಿನ ಬೆಳಗ್ಗೆ ಸಂಕಲ್ಪ ಹೋಮ, ಅಗಸ್ತ್ಯೇಶ್ವರ ದೇಗುಲದಲ್ಲಿ ರುದ್ರಾಭಿಷೇಕ ಪೂಜೆ. ಫೆ.17 ರಂದು ಬೆಳಗ್ಗೆ 9 ಗಂಟೆಗೆ ತ್ರಯೋದಶಿ, ಅಗಸ್ತ್ಯೇಶ್ವರನ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ. ಸಂಜೆ 5ಕ್ಕೆ ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ.

ಫೆ.18 ರಂದು ಬೆಳಗ್ಗೆ 9 ಗಂಟೆಗೆ ಚತುದರ್ಶಿ, ನದಿಪಾತ್ರದಲ್ಲಿ ಪುಣ್ಯಾಹ, ನವಗ್ರಹಹೋಮ, ಸುದರ್ಶನ ಹೋಮ, ರುದ್ರ ಹೋಮ, ಪೂರ್ಣಾಹುತಿ. 11 ಗಂಟೆಗೆ ಧರ್ಮಸಭೆ, ಸಂಜೆ 4 ಗಂಟೆಗೆ ಮಹಾತ್ಮ ಸಂತರ ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 4 ಗಂಟೆಗೆ ರುದ್ರ ಹೋಮ, ಪೂರ್ಣಾಹುತಿ, 7 ಗಂಟೆಗೆ ಗಂಗಾಪೂಜೆ ವಾರಾಣಸಿ ಮಾದರಿಯಲ್ಲಿ ದೀಪಾರತಿ.ಫೆ.19 ರಂದು ಬೆಳಗ್ಗೆ ನದಿ ಪಾತ್ರದಲ್ಲಿ ಚಂಡಿ ಹೋಮ, ಪೂರ್ಣಾಹುತಿ, ಕುಂಬೋದ್ವಾಸನ, ಸಪ್ತ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೊಜನೆ. ಬೆಳಗ್ಗೆ 9.35ರಿಂದ 9.50ರವರೆಗೆ ಹಾಗೂ 11.30ರಿಂದ 12ರವರೆಗೆ ಮಹೋದಯ ಪುಣ್ಯ ಕಾಲದ ಮಹಾಮಾಘ ಸ್ನಾನ. ಧರ್ಮ ಸಭೆ ಇರುತ್ತದೆ.

ಸರ್ವ ತಯಾರಿಯೂ ಸಜ್ಜು

ಸರ್ವ ತಯಾರಿಯೂ ಸಜ್ಜು

ಯಾಗ ಮಂಟಪ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣಗೊಂಡಿದೆ. ಅಗಸ್ತ್ಯೇಶ್ವರ ಸ್ವಾಮಿ, ಗುಂಜಾ ನರಸಿಂಹಸ್ವಾಮಿ ದೇವಾಲಯಗಳ ಮುಂಭಾಗ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ.

ಸೋಪಾನಗಳ ಸ್ವಚ್ಛತೆ, ಬಣ್ಣ ಬಳಿಯುವುದು, ರಸ್ತೆಗಳ ಸ್ವಚ್ಛತೆ, ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಶನಿವಾರ ಸಂಜೆವರೆಗೂ ಮುಂದುವರಿದಿತ್ತು.
ತಾಲ್ಲೂಕು ಹಂತದ ನಿಯೋಜಿತ ಅಧಿಕಾರಿಗಳು ಸ್ಥಳದಲ್ಲಿದ್ದು, ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು. ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯನ್ನು ನಿಗದಿತ ಸ್ಥಳಗಳಿಗೆ ನಿಯೋಜನೆ ಮಾಡಿದರು. ಸೇನೆಯ ಯೋಧರು ತೇಲುವ ಸೇತುವೆ ಮೇಲಿನ ಎರಡು ಬದಿಗಳಲ್ಲಿ ಜನರ ಓಡಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದವರು ವಸ್ತುಪ್ರದರ್ಶನದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ್ದಾರೆ.

ಭಕ್ತರಿಗೆ ಅನ್ನ ದಾಸೋಹ

ಭಕ್ತರಿಗೆ ಅನ್ನ ದಾಸೋಹ

ಕುಂಭಮೇಳ ನಡೆಯುವ ಮೂರು ದಿನಗಳವರೆಗೆ ಸುತ್ತೂರು ಹಾಗೂ ಆದಿಚುಂಚನಗಿರಿ ಮಠಗಳಿಂದ ಭಕ್ತರಿಗೆ ಅನ್ನ ದಾಸೋಹ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೂರನೇ ದಿನದ ಪುಣ್ಯಸ್ನಾನದಲ್ಲಿ ಹಾಗೂ ಧಾರ್ಮಿಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

ಸಂಗಮದ ಮಧ್ಯಭಾಗದಲ್ಲಿ ನಿರ್ಮಿಸಿರುವ ಯಾಗ ಮಂಟಪದಲ್ಲಿ ಅಂಕುರಾರ್ಪಣೆ, ಸಂಕಲ್ಪ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ಹಾಗೂ ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+