ಮಾವು ಬೆಳೆಗಾರರ ಪಾಲಿಗೆ ಕಹಿಯಾದ ಹಣ್ಣಿನ ರಾಜ!
ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಸೇವಿಸಬಾರದು ಎಂಬ ವದಂತಿಯಿಂದಾಗಿ, ಮೈಸೂರಿನಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಕಡಿಮೆಯಾಗಿ, ಇಂದು ಮಾವು ಬೆಳೆದ ರೈತ ತಾನು ಬೆಳೆದ ಹಣ್ಣನ್ನು ಕೆ.ಜಿ.ಗೆ 30 ರೂ. ನಂತೆ ಮಾರಬೇಕಾಗಿದೆ!
ಮೈಸೂರು, ಮೇ 8: ತನ್ನ ವಿಶಿಷ್ಟ ರುಚಿಯಿಂದಾಗಿ ಹಣ್ಣಿನ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾವಿನ ಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಬಿರು ಬೇಸಿಗೆ ಬೇಗೆಗೆ ಮಾವು ಬೆಳೆದ ರೈತ ಕಂಗಾಲಾಗುವ ಸ್ಥಿತಿ ಎದುರಾಗಿದೆ.
ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಸೇವಿಸಬಾರದು ಎಂಬ ವದಂತಿಯಿಂದಾಗಿ, ಬೇಡಿಕೆ ಕಡಿಮೆಯಾಗಿ, ಇಂದು ಮಾವು ಬೆಳೆದ ರೈತ ತಾನು ಬೆಳೆದ ಹಣ್ಣನ್ನು ಕೆ.ಜಿ.ಗೆ 30 ರೂ. ನಂತೆ ಮಾರಬೇಕಾಗಿದೆ! ಇತ್ತ ಜನರಿಗೆ ತಿನ್ನುವ ಆಸೆಯಿದ್ದರೂ ಖರೀದಿಸುವ ಉತ್ಸಾಹ ಕಾಣುತ್ತಿಲ್ಲ. ಹೀಗಾಗಿ ಮಾವಿನ ಹಣ್ಣಿಗೆ ಉತ್ತಮ ಬೆಲೆ ದೊರೆಯದೆ ರೈತ ಕಂಗಾಲಾಗಿದ್ದಾನೆ.[ಕೊಪ್ಪಳದಲ್ಲಿ ಮೇ 9ರಿಂದ ಲಗ್ಗೆಯಿಡಲಿದ್ದಾನೆ ಹಣ್ಣುಗಳ ರಾಜ!]
ಬಿರು ಬೇಸಿಗೆಯ ಪರಿಣಾಮ ಮಾವನ್ನು ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವ ಕಾರಣ ಹಣ್ಣಿನ ದರದಲ್ಲಿ ಕುಸಿತ ಕಂಡಿದ್ದು, ರೂ.30 ರಿಂದ 50 ರೂ.ಗಳಿಗೆ ಕೆಜಿ ಮಾವು ದೊರಕುತ್ತಿದೆ. ಈ ಬಾರಿ ಸಮರ್ಪಕವಾದ ಮಳೆಯಾಗದ ಕಾರಣ ಸಹಜವಾಗಿ ಮಾವು ಬೆಳೆಯಲ್ಲಿ ಇಳುವರಿ ಕಡಿಮೆಯಾಗಿತ್ತು.
ಹೀಗಾಗಿ ಹಣ್ಣಿನ ಬೆಲೆ ಗಗನಕ್ಕೇರಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಮೊದಲಿಗೆ ಹಣ್ಣಿನ ದರ ಕೂಡ ಕೆಜಿಗೆ 100 ರೂ. ದಾಟಿತ್ತು. ನಂತರದ ದಿನಗಳಲ್ಲಿ ಬೆಲೆ ಸಾಕಷ್ಟು ಕುಸಿತ ಕಂಡಿದೆ.
ರಸಪುರಿ ಮಾವಿಗೆ ಬಾರೀ ಬೇಡಿಕೆ
ಇತ್ತ ಜಿಲ್ಲೆಯಲ್ಲಿ ಪ್ರಮುಖವಾಗಿ ಮೈಸೂರು ತಾಲ್ಲೂಕು, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ. ನಂಜನಗೂಡಿನಲ್ಲಿ ರಸಪುರಿ, ತೋತಾಪುರಿ, ಬಾದಾಮಿ, ಮಲ್ಗೋವ, ಮಲ್ಲಿಕಾ ಹಾಗೂ ಇನ್ನಿತರ ತಳಿಗಳ ಹಣ್ಣನ್ನು ರೈತರು ಬೆಳೆಯುತ್ತಾರೆ. ಅದರಲ್ಲಿ ಬಾದಾಮಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ನಂತರದ ಸ್ಥಾನ ರಸಪೂರಿಯದ್ದು. ಮಾರ್ಚ್ ತಿಂಗಳ ಅಂತ್ಯದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಇದರ ಬೆಲೆ ಕೂಡ ಸಾಕಷ್ಟು ಹೆಚ್ಚಿತ್ತು. ಆರಂಭದಲ್ಲಿ ಜನರು ಕೂಡ ಸಂತಸದಿಂದಲೇ ಹಣ್ಣನ್ನು ಖರೀದಿಸಿದರು. ಹೀಗಾಗಿ ಆರಂಭದಲ್ಲಿ ಮಾವು ಮಾರಿದ ರೈತನಿಗೆ ಕೂಡ ಸಾಕಷ್ಟು ಲಾಭ ಬಂದಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಬೇಸಿಗೆಯಿಂದ ಕಂಗಾಲು:
ಬಿಸಿಲು ಸಾಕಷ್ಟು ಹೆಚ್ಚಿರುವ ಸಂದರ್ಭದಲ್ಲಿ ಮಾವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ. ಅದರಲ್ಲಿಯೂ ದರಕ್ಕೆ ಮಾರಲೂ ಮನಸ್ಸಿಲ್ಲದೆ ರೈತರು ತೊಳಲಾಡಿದ್ದಾರೆ. ಅಂತಿಮವಾಗಿ 25 ರಿಂದ 35 ರೂ. ಗಳಿಗೆ ಕಾಯಿಯನ್ನು ಮಾರಾಟ ಮಾಡಿ ಬಂದಷ್ಟು ಹಣವನ್ನು ರೈತರು ಪಡೆದುಕೊಂಡಿದ್ದಾರೆ. ಕಾಯಿಯನ್ನು ಖರೀದಿಸಿದ ಮಾರಾಟಗಾರರು ಅವುಗಳನ್ನು ಹಣ್ಣು ಮಾಡಿದ ನಂತರ 30 ರಿಂದ 40 ರೂ.ಗಳಿಗೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಮಕ್ಕಳ ಪ್ರಿಯ ಹಣ್ಣಾದ ಮಾವನ್ನು ಬೇಸಿಗೆಯಲ್ಲಿ ತಿನ್ನಲು ಪಾಲಕರೇ ನಿರ್ಬಂಧ ಹೇರುತ್ತಿರುವುದರಿಂದ ಹಣ್ಣಿನ ಬೇಡಿಕೆ ಕಡಿಮೆಯಾಗಿದೆ.[ಮೇ 5ರಿಂದ ಮಾವು-ಹಲಸು ಮೇಳ, ಲಾಲ್ ಬಾಗ್ ಗೆ ಬಂದು ಖುಷಿಯಿಂದ ತಿನ್ನಿ]
ಹಣ್ಣಿದೆ, ಖರೀದಿಸುವವರಿಲ್ಲ!
ಸಾಕಷ್ಟು ಬಲಿತ ಮಾವಿನ ಕಾಯಿಗಳು ನಗರದ ನಂಜನಗೂಡು ರಸ್ತೆಯಲ್ಲಿರುವ ಹಣ್ಣಿನ ಮಾರಾಟ ಮಳಿಗೆಗಳಿಗೆ ಬಂದಿವೆ. ಆದರೆ, ಖರೀದಿದಾರರು ಮಾತ್ರ ಕಡಿಮೆಯಾಗಿದ್ದಾರೆ. ಅದನ್ನು ಇಡಲೂ ಆಗದೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರಾತ್ರಿಯ ವೇಳೆ ದೇವರಾಜ ಮಾರುಕಟ್ಟೆಯ ಸುತ್ತಮುತ್ತ 30 ರೂ.ಗೆ ಕೆಜಿ ರಸಪೂರಿ ಹಣ್ಣು ದೊರೆಯುತ್ತಿದೆ. ಉಳಿದಂತೆ ರೈತರು ಬಡಾವಣೆಯ ಮನೆಗಳ ಬಾಗಿಲಿಗೇ ಬಂದು ಕಡಿಮೆ ಹಣಕ್ಕೆ ಮಾವನ್ನು ಮಾರಾಟ ಮಾಡುತ್ತಿದ್ದಾರೆ.[ಆಹಾ ಎಂಥಾ ಮಾವು, ಹಲಸು...ಬನ್ರೀ ಲಾಲ್ ಬಾಗ್ ಗೆ, ತಿನ್ರೀ ಮನಸಾರೆ]
ಸೂಪರ್ ಮಾರ್ಕೆಟ್ ಗಳಲ್ಲೂ ದರ ಹೆಚ್ಚೇನಿಲ್ಲ
ನಗರದ ವಿವಿಧ ಸೂಪರ್ ಮಾರ್ಕೆಟ್ ಗಳಲ್ಲಿ ಕೂಡ ಮಾವಿನ ಹಣ್ಣುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಸೆಂದೂರ ತಳಿಯ ಮಾವಿನ ಹಣ್ಣನ್ನು ಸೂಪರ್ ಮಾರ್ಕೆಟ್ ಗಳಲ್ಲಿ ಕೆಜಿಗೆ 30 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ಬಾದಾಮಿಗೆ 60, ರಸಪೂರಿ ಹಣ್ಣನ್ನು 40 ರಿಂದ 50 ರೂ.ಗೆ ಮಾರಲಾಗುತ್ತಿದೆ. ಆದರೆ ವಿಶೇಷ ತಳಿಯಾದ ಆಲ್ಫಾನ್ಸೋ ಮಾವು ಮಾತ್ರ ಕೆ.ಜಿ.ಗೆ ರ 100 ರೂ. ನಂತೆ ಮಾರಾಟ ಮಾಡಲಾಗುತ್ತಿದೆ.
ಮಾರುಕಟ್ಟೆಗೇ ಕಳೆಯಿಲ್ಲ
ಪ್ರತಿವರ್ಷ ಈ ಸಮಯದಲ್ಲಿ ಮಾವು ಮಾರುಕಟ್ಟೆಯ ಸುತ್ತ ನೆರೆಗದಿರುತ್ತಿದ್ದ ಜನರ ಗುಂಪು ಈ ವರ್ಷ ಇಲ್ಲ. ಮಳೆಯಾಗಿ, ಬೇಸಿಗೆ ಬಿಸಿಲು ಕೊಂಚ ತಣ್ಣಗಾದರೆ ಹಣ್ಣಿನ ರಾಜನಿಗೆ ಮತ್ತೆ ಬೇಡಿಕೆ ಬಂದೀತು ಎಂಬ ನಿರೀಕ್ಷೆಯಲ್ಲೇ ರೈತರು ದಿನದೂಡೂತ್ತಿದ್ದಾರೆ.[10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು]