ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ
ಮೈಸೂರು, ಜನವರಿ 4: ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಜನವರಿ 4ರಿಂದ ಫೆಬ್ರವರಿ 2ರವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಇಲ್ಲಿನ ಹಕ್ಕಿಗಳಿಗೆ ಅವಿನ್ ಇನ್ ಫ್ಲುಯೆಂಜಾ ಎಚ್5 ಎನ್ 8 ಎಂಬ ಸೋಂಕು ಕಾಣಿಸಿಕೊಂಡಿದ್ದು, ಇದನ್ನು ಹತ್ತಿಕ್ಕುವ ಸಲುವಾಗಿ ವೈದ್ಯಕೀಯ ಉಪಚಾರ ನಡೆಸಲಾಗುತ್ತಿದೆ.
ಸೋಂಕು ತಹಬದಿಗೆ ಬರುವ ತನಕ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸುವುದು ಅನಿವಾರ್ಯವಾಗಿದೆ ಎಂದು ಮೃಗಾಲಯ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ. ಕೆಲ ಸಮಯದ ಹಿಂದೆಯೇ ರೋಗದ ಸುಳಿವು ಲಭ್ಯವಾಗಿತ್ತು. ಹೀಗಾಗಿ ಮೃಗಾಲಯ ಮತ್ತು ರಂಗನತಿಟ್ಟಿನಿಂದ ಹಕ್ಕಿಗಳ ಹಿಕ್ಕೆಗಳು ಸೇರಿದಂತೆ ಕೆಲವು ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ಪ್ರಾಣಿಗಳ ಆರೋಗ್ಯ ಮತ್ತು ಪಶು ಜೈವಿಕ ಸಂಸ್ಥೆ(ಐಎಎಚ್ ಮತ್ತು ವಿಬಿ)ಗೆ ಕಳುಹಿಸಲಾಗಿತ್ತು.[ಕಬಿನಿ ಹಿನ್ನೀರಲ್ಲಿ 4 ಅಡಿ ಉದ್ದದ ದಂತವಿರುವ ದೈತ್ಯ ಗಾತ್ರದ ಆನೆ]
ಈ ಮಧ್ಯೆ ಡಿಸೆಂಬರ್ 28ರಂದು ಸ್ಪಾಟ್ ಬಿಲೀಡ್ ಮತ್ತು 3 ಗ್ರೆಲಾಗ್ ಗೂಸ್ ಗಳು ಸಾವನ್ನಪ್ಪಿದ್ದವು. ಇವುಗಳ ಮರಣೋತ್ತರ ಪರೀಕ್ಷೆ ನಡೆಸಿ, ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದಿರುವ ವರದಿಯಲ್ಲಿ ಹಕ್ಕಿಗಳಿಗೆ ಅವಿನ್ ಇನ್ ಫ್ಲುಯೆಂಜಾ- ಎಚ್5 ಎನ್ 8 ಸೋಂಕು ಇರುವುದು ಪತ್ತೆಯಾಗಿದೆ,
ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡಿರುವ ಮೃಗಾಲಯ ಆಡಳಿತ ಮಂಡಳಿ, ಮೃಗಾಲಯದಲ್ಲಿರುವ ಪಕ್ಷಿ ಮತ್ತು ಪ್ರಾಣಿಗಳಿಗೆ ವೈದ್ಯೋಪಚಾರ ಸೇರಿದಂತೆ ಕ್ರಿಮಿನಾಶಕ ಸಿಂಪಡಣೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಿದೆ. ಆದ್ದರಿಂದ ಸಾರ್ವಜನಿಕರ ಪ್ರವೇಶವನ್ನು ಜನವರಿ 4ರಿಂದ ಫೆಬ್ರವರಿ 2ರವರೆಗೆ ನಿರ್ಬಂಧಿಸಿದೆ.
ಕಾಯಿಲೆ ಭೀಕರತೆಯನ್ನು ಅರಿತು ಸೋಂಕು ಹರಡದಂತೆ ತಡೆಯಲು ಈಗಾಗಲೇ ಇಲ್ಲಿನ ಸಿಬ್ಬಂದಿ ಕೈ-ಕಾಲಿಗೆ ಗ್ಲೌಸ್ ಮತ್ತು ಕವಚಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೃಗಾಲಯದಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಪಕ್ಷಿಧಾಮ ರಂಗನತಿಟ್ಟಿನಲ್ಲಿಯೂ ಆತಂಕ ಆರಂಭವಾಗಿದೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ಇಲ್ಲಿಗೆ ದೇಶ ವಿದೇಶಗಳ ಹಕ್ಕಿಗಳು ಬರುವುದರಿಂದ ಸೋಂಕು ಹರಡುವ ಸಾಧ್ಯತೆಗಳು ಹಚ್ಚಿವೆ. ಕೆಲ ಸಮಯದ ಹಿಂದೆ ದಕ್ಷಿಣ ಕೊಡಗಿನಲ್ಲಿ ಹಕ್ಕಿಗಳು ಕುಳಿತಲ್ಲೇ ಬಿದ್ದು ಸಾಯುತ್ತಿದ್ದ ದೃಶ್ಯಗಳು ಕಂಡು ಬಂದಿತ್ತು. ಒಟ್ಟಾರೆ ಹಕ್ಕಿ ಜ್ವರದ ಭಯ ಆರಂಭವಾಗಿದ್ದು, ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.