ಮೈಸೂರು ಕೋರ್ಟ್ ಸ್ಫೋಟ : ಮಲಯಾಳಂ ಪತ್ರಿಕೆಯಲ್ಲಿತ್ತು ಸ್ಫೋಟಕ
ಮೈಸೂರು, ಆಗಸ್ಟ್ 10 : ಮೈಸೂರು ಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಹೊಸ ದಿಕ್ಕು ಸಿಕ್ಕಿದೆ. ಮಲಯಾಳಂ ದಿನಪತ್ರಿಕೆಯಲ್ಲಿ ಸುಧಾರಿತ ಸ್ಪೋಟಕ ಸಾಧನಗಳನ್ನು ಸುತ್ತಿಡಲಾಗಿತ್ತು. ಈ ಬಗ್ಗೆ ಈಗ ತನಿಖೆ ಆರಂಭಗೊಂಡಿದ್ದು, ಪತ್ರಿಕೆಯ ಚೂರುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಆಗಸ್ಟ್ 1ರಂದು ಸಂಜೆ ಮೈಸೂರು ಕೋರ್ಟ್ ಹಿಂಭಾಗದ ಶೌಚಾಲಯದಲ್ಲಿ ಸ್ಫೋಟ ನಡೆದಿತ್ತು. ಸ್ಫೋಟಗೊಂಡ ಜಾಗದಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು ಮಲಯಾಳಂ ದಿನಪತ್ರಿಕೆಯ ಚೂರುಗಳನ್ನು ವಶಕ್ಕೆ ಪಡೆದಿದ್ದಾರೆ, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.[ಮೈಸೂರು ಸ್ಫೋಟದಲ್ಲಿ ಹೊಸ ಸಂಘಟನೆ ಹೆಸರು]
ಆಂಧ್ರಪ್ರದೇಶದ ಚಿತ್ತೂರು, ಕೇರಳದ ಕೊಲ್ಲಂ ಮತ್ತು ಮೈಸೂರಿನಲ್ಲಿ ನಡೆದ ಬಾಂಬ್ ಸ್ಫೋಟದ ನಡುವೆ ಸಾಮ್ಯತೆ ಇದೆ. ಮೂರು ಕಡೆ ಕೋರ್ಟ್ ಅಕ್ಕಪಕ್ಕದಲ್ಲಿಯೇ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಸಾಮ್ಯತೆ ಇರುವುದರಿಂದ ಮೈಸೂರು ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ.[ಮೈಸೂರು ಕೋರ್ಟ್ ಬಳಿ ಸ್ಫೋಟ]
ದಕ್ಷಿಣ ಭಾರತದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಅಲ್-ಉಮಾ 'ಬೇಸ್ ಮೂಮೆಂಟ್' ಎಂದು ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡಿದೆ. ಈ ಅಲ್-ಉಮಾ ಸಂಘಟನೆ ಅಲ್ ಖೈದಾ ಉಗ್ರ ಸಂಘಟನೆಯ ಒಂದು ಭಾಗವಾಗಿದೆ. ಚಿತ್ತೂರು ಕೋರ್ಟ್ ಸ್ಫೋಟದ ಹೊಣೆ ಹೊತ್ತುಕೊಂಡು ಬೇಸ್ ಮೂಮೆಂಟ್ ಕಳುಹಿಸಿದ್ದ ಪತ್ರದಲ್ಲಿ ಒಸಮಾ ಬಿನ್ ಲಾಡೆನ್ ಚಿತ್ರವಿತ್ತು.[ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?]
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುವ ಈ ಸಂಘಟನೆಯ ಸದಸ್ಯರು ಬೇಸ್ ಮೂಮೆಂಟ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡು, ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಮೈಸೂರು ಸ್ಫೋಟ ಪ್ರಕರಣಕ್ಕೂ ಇತರ ರಾಜ್ಯಗಳ ಸ್ಫೋಟಕ್ಕೂ ಸಾಮ್ಯತೆ ಇರುವುದರಿಂದ ತನಿಖೆಯನ್ನು ಎನ್ಐಗೆ ವಹಿಸುವುದು ಸೂಕ್ತ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ.