ಮೈಸೂರಲ್ಲಿ ರಸ್ತೆ ಮೇಲೆಯೇ ಬಂದಿತ್ತು ಹುಲಿ!
ಮೈಸೂರು, ಜುಲೈ 29 : ಜನಜಂಗುಳಿಯ ರಸ್ತೆಯಲ್ಲಿ ಹುಲಿಯ ಗಮನವಾಗಿತ್ತು. ಸಾಮಾನ್ಯವಾಗಿ ಹುಲಿಯನ್ನು ಕಂಡರೆ ಜನರು ಓಡುವುದು ಸಹಜ. ಆದರೆ ಇಲ್ಲಿ ನಡೆದದ್ದೇ ಬೇರೆ. ಹುಲಿಯನ್ನು ನೋಡಲು ಇಲ್ಲಿ ಜನ ಗುಂಪು - ಗುಂಪಾಗಿ ನಿಂತಿದ್ದರು. ಅಷ್ಟೇ ಅಲ್ಲದೇ ಹುಲಿಯ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಅರೇ ಇದೆಲ್ಲಪ್ಪಾ ಅಂತೀರಾ, ಹೌದು. ಮೈಸೂರಿನಲ್ಲಿಯೂ ವ್ಯಾಘ್ರಪ್ರಿಯ ಚಿತ್ರ ಕಲಾವಿದರೋರ್ವರು ಮೈಸೂರು ಮೃಗಾಲಯದ ಎದುರು ತ್ರಿಡಿ ಪೇಟಿಂಗ್ ನಲ್ಲಿ ಹುಲಿ ಚಿತ್ರ ಬರೆದಿದ್ದು, ಇದು ಜನಾಕರ್ಷಣೀಯವಾಗಿದೆ.
ವಿಶ್ವಾದ್ಯಂತ ಜು.29ರಂದು 'ಅಂತಾರಾಷ್ಟ್ರೀಯ ಹುಲಿ ದಿನಾಚರಣೆ'ಯನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಹುಲಿಯ ಚಿತ್ರವನ್ನು ಬಿಡಿಸುವ ಮೂಲಕ ವಿಶೇಷ ಮೆರಗು ನೀಡಿದ್ದಾರೆ ಕಲಾವಿದ ಅನಿಲ್ ಕುಮಾರ್ ಬೋಗಶೆಟ್ಟಿ. ಇನ್ನು ಬೆಳಗ್ಗೆ ಮೃಗಾಲಯದ ಮುಂಭಾಗ ಆಗಮಿಸಿ ಹುಲಿ ಚಿತ್ರ ಬಿಡಿಸುತ್ತಿದ್ದಂತೆ ಅನೇಕ ಪ್ರವಾಸಿಗರು ತದೇಕಚಿತ್ತದಿಂದ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೀಗ ಅಲ್ಲಿ ಸಂಚರಿಸುವ ಸಾರ್ವಜನಿಕರೆಲ್ಲರೂ ನಿಂತು ನಿಂತು ನೋಡಿಹೋಗುತ್ತಿರುವುದಲ್ಲದೇ ಸೆಲ್ಫಿಗಳನ್ನು ತೆಗೆದುಕೊಳ್ಳತೊಡಗಿದ್ದಾರೆ. ತ್ರಿಡಿ ಪೇಂಟಿಂಗ್ ಹುಲಿಯ ಮೇಲೆ ಪುಟಾಣಿಯೋರ್ವಳು ಕುಳಿತಿದ್ದು, ಹುಲಿಯ ಮೇಲೆ ಕುಳಿತು ಸವಾರಿ ಹೊರಟಂತೆ ಭಾಸವಾಗುತ್ತಿತ್ತು. ಹುಲಿಯ ಮೇಲೆ ಕುಳಿತಿದ್ದೇನೆ ಎಂಬ ಸಂತಸ, ಸಂಭ್ರಮ ಆಕೆಯ ಮೊದಗಲ್ಲಿ ಕಂಡು ಬಂದಿತ್ತು.
ಕಾಡುಗಳನ್ನು ಕಡಿದು ವಿನಾಶಗೊಳಿಸುತ್ತಿರುವುದರಿಂದ ಅರಣ್ಯದಲ್ಲಿರುವ ಪ್ರಾಣಿಗಳ ಸಂತತಿಯೂ ಕ್ಷೀಣಿಸತೊಡಗಿದೆ. ಅರಣ್ಯದಲ್ಲಿನ ಪ್ರಾಣಿಗಳ ಸಂರಕ್ಷಣೆಯಾಗಬೇಕು ಅದರಲ್ಲೂ ಮುಖ್ಯವಾಗಿ ಹುಲಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು 2010ರಲ್ಲಿ ಸೇಂಟ್ ಪೀಟರ್ ಬರ್ಗ್ಸ್ ನಲ್ಲಿ ನಡೆದ ಸಭೆಯಲ್ಲಿ ಜುಲೈ 29ರಂದು ಅಂತಾರರಾಷ್ಟ್ರೀಯ ಹುಲಿ ದಿನವನ್ನಾಚರಿಸುವ ತೀರ್ಮಾನ ಕೈಗೊಳ್ಳಲಾಯಿತು.

2022ರ ವೇಳೆ ಹುಲಿ ಸಂತತಿಯನ್ನು ದ್ವಿಗುಣಗೊಳಿಸಬೇಕು ಎಂಬ ಉದ್ದೇಶದಿಂದ ಹುಲಿ ಸಂರಕ್ಷಣಾ ಯೋಜನೆಯನ್ನೂ ಕೂಡ ಆರಂಭಿಸಲಾಗಿದೆ. ಭಾರತ ವಿಶ್ವದಲ್ಲಿಯೇ ಅತಿಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಎನ್ನಲಾಗುತ್ತಿದೆ. ಹುಲಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬ ಸದುದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೋಸ್ಕರ ಹುಲಿ ದಿನಾಚರಣೆ ಆಚರಿಸಲಾಗುತ್ತಿದೆ.
ಪ್ರಾಣಿಪ್ರಿಯ ಕಲಾವಿದ ಅನಿಲ್ ಕುಮಾರ್ ಬೋಗ ಶೆಟ್ಟಿ ಎಂಬವರು ತ್ರಿಡಿ ಪೇಟಿಂಗ್ ನಲ್ಲಿ ಹುಲಿ ಚಿತ್ರವನ್ನು ರಚಿಸಿದ್ದು, ಮಕ್ಕಳು ಹುಲಿಯ ಮೇಲೇರಿ ಕುಳಿತಂತೆ ಭಾಸವಾಗುತ್ತಿದೆ. ಹುಲಿ ಸಂರಕ್ಷಣೆಯಾಗಲಿ ಎಂಬ ಆಶಯವನ್ನು ಚಿತ್ರಕಲಾವಿದರು ವ್ಯಕ್ತಪಡಿಸಿದ್ದಾರೆ. .











Click it and Unblock the Notifications