ಗೆಳತಿಯ ಕ್ಷಮೆ ಕೋರುವ ಪ್ರೇಮ ಬರಹದಿಂದ ಈತ ಪೊಲೀಸರ ಅತಿಥಿಯಾದ
ಮುಂಬೈ, ಆಗಸ್ಟ್ 19: ಯುವ ವ್ಯಾಪಾರಿಯೊಬ್ಬ ಮುನಿಸಿಕೊಂಡ ಗೆಳತಿಯ ಮನವೊಲಿಸುವ ಸಲುವಾಗಿ ಮಹಾರಾಷ್ಟ್ರದ ಪಿಂಪ್ರಿ ಚಿಂಚ್ ವಾಡ್ ಪ್ರದೇಶದಲ್ಲಿ ಮಾಡಿದ ಸಾಹಸವು ಪೊಲೀಸರ ಅತಿಥಿ ಆಗುವಂತೆ ಮಾಡಿದೆ. ಆದರೂ ಆತನ ಬಗ್ಗೆ ಸಾಕಷ್ಟು ಪ್ರಚಾರ ಆಗಿ, ಸುದ್ದಿಯೂ ಆಗಿದ್ದಾನೆ. ಅಷ್ಟಕ್ಕೂ ಆತನ ಸಾಹಸವೇನು ಅಂತೀರಾ?
ತನ್ನ ಗೆಳತಿ ಜತೆಗೆ ಸಣ್ಣದೊಂದು ಮುನಿಸು ಏರ್ಪಟ್ಟು, ಜಗಳ ಆಯಿತು ಅನ್ನೋ ಕಾರಣಕ್ಕೆ ಆಕೆ ಬರುವ ದಾರಿಯುದ್ದಕ್ಕೂ ಕ್ಷಮೆಯನ್ನು ಕೋರಿ ಮುನ್ನೂರಕ್ಕೂ ಹೆಚ್ಚು ಬ್ಯಾನರ್ಸ್ ಮತ್ತು ಹೋರ್ಡಿಂಗ್ ಹಾಕಿದ್ದಾನೆ. ಪುಣೆ ಹತ್ತಿರದ ಪಿಪ್ರಿ ಚಿಂಚ್ ವಾಡ್ ನ ಜನರಿಗೆ ಶುಕ್ರವಾರ ಬೆಳಗ್ಗೆ ಕಂಡಿದ್ದು ಈತನ ಸಾಹಸವೇ.
ನೆನಪಿದೆಯಾ ಮೊದಲ ಲವ್ ಲೆಟರ್ ಬರೆದ ಸಿಹಿ ಸಿಹಿ ಘಳಿಗೆ?!
ಬ್ಯಾನರ್ಸ್ ಹಾಗೂ ಹೋರ್ಡಿಂಗ್ಸ್ ನಲ್ಲಿ ಹುಡುಗಿಯ ಹೆಸರು ಹಾಕಿ, ಐ ಯಾಮ್ ಸಾರಿ ಎಂಬ ಒಕ್ಕಣೆ ಹಾಕಿ, ಅದರೊಳಗೆ ಒಂದು ಹೃದಯದ ಸಂಕೇತವನ್ನು ಬೇರೆ ಹಾಕಿದ್ದನಂತೆ. ತನ್ನ ಗೆಳತಿ ಸಲುವಾಗಿ ಆಕೆ ಬರುಬಹುದಾದ ಪ್ರದೇಶಗಳ ಟ್ರಾಫಿಕ್ ಹೆಚ್ಚಿರುವ ಕಡೆ ಇಂಥ ಮುನ್ನೂರಕ್ಕೂ ಹೆಚ್ಚು ಬ್ಯಾನರ್- ಹೋರ್ಡಿಂಗ್ಸ್ ನ ಹಾಕಿದ್ದವನು ಸ್ಥಳೀಯ ವ್ಯಾಪಾರಿ- ಇಪ್ಪತ್ತೈದು ವರ್ಷದ ನೀಲೇಶ್ ಖೇಡ್ಕರ್.
ಕಾನೂನು ಬಾಹಿರವಾಗಿ ಹೋರ್ಡಿಂಗ್ಸ್
ಈ ವಿಷಯ ಗೊತ್ತಾದ ಕೂಡಲೇ ಪಿಂಪ್ರಿ ಚಿಂಚ್ ವಾಡ್ ನ ಸ್ಥಳೀಯ ಸಂಸ್ಥೆಯಿಂದ ಪೊಲೀಸರಿಗೆ ದೂರು ನೀಡಲಾಯಿತು. ಕಾನೂನು ಬಾಹಿರವಾಗಿ ಹೋರ್ಡಿಂಗ್ಸ್ ಗಳನ್ನು ಹಾಕಿದ್ದಕ್ಕೆ ಹಾಗೂ ಸಾರ್ವಜನಿಕ ಆಸ್ತಿಯನ್ನು ಕುರೂಪಗೊಳಿಸಿದ ಆರೋಪದ ಮೇಲೆ ದೂರು ನೀಡಲಾಯಿತು.
ಸಹಾಯ ಮಾಡಿದ ಗೆಳೆಯನ ಮೂಲಕ ಪತ್ತೆ
ಶುಕ್ರವಾರ ಬೆಳಗ್ಗೆ ದೂರು ಬರುತ್ತಿದ್ದ ಹಾಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. "ನಮಗೆ ಮೊದಲಿಗೆ ವಿಲಾಸ್ ಶಿಂಧೆಯ ಮಾಹಿತಿ ಸಿಕ್ಕಿತು. ಅವನೇ ಖೇಡ್ಕರ್ ಗೆ ಹೋರ್ಡಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಪ್ರಿಂಟ್ ಮಾಡಿಸಲು ಸಹಾಯ ಮಾಡಿದ್ದ. ಅವನ ಮೂಲಕ ಈ ಕೆಲಸ ಮಾಡಿದ್ದ ಖೇಡ್ಕರ್ ನನ್ನು ಪತ್ತೆ ಮಾಡಿದೆವು" ಎಂದು ಪೊಲೀಸರು ತಿಳಿಸಿದ್ದಾರೆ.
ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು
'ಕ್ರಿಯೇಟಿವ್' ಐಡಿಯಾ ಬಂದಿದೆ
ತನ್ನ ಗೆಳತಿ ಜತೆ ಜಗಳ ಆಡಿದ್ದ ಖೇಡ್ಕರ್ ಗೆ ಕ್ಷಮೆ ಕೇಳಬೇಕಾಗಿತ್ತು. ಈ ಸಂಗತಿಯನ್ನು ವಿಲಾಸ್ ಶಿಂಧೆ ಬಳಿ ಹೇಳಿಕೊಂಡಿದ್ದಾನೆ. ಆಗ ಅವನಿಗೆ ಈ 'ಕ್ರಿಯೇಟಿವ್' ಐಡಿಯಾ ಬಂದಿದೆ. ಶುಕ್ರವಾರದಂದು ಮುಂಬೈನಿಂದ ಆ ಯುವತಿ ಈ ಪ್ರದೇಶಕ್ಕೆ ಬರುವುದು ಗೊತ್ತಾಗಿದೆ. ಆದ್ದರಿಂದ ಆಕೆ ಸಾಗಬಹುದಾದ ಮಾರ್ಗದುದ್ದಕ್ಕೂ ಗುರುವಾರ ರಾತ್ರಿ ಹಾಗೂ ಶುಕ್ರವಾರ ಶ್ರಮಪಟ್ಟು ಮುನ್ನೂರಕ್ಕೂ ಹೆಚ್ಚು ಹೋರ್ಡಿಂಗ್ಸ್ ಹಾಕಲಾಗಿದೆ.
ನೀಲೇಶ್ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು?
ಹಾಗಿದ್ದರೆ ನೀಲೇಶ್ ಖೇಡ್ಕರ್ ವಿರುದ್ಧ ಕ್ರಮ ಕೈಗೊಳ್ಳಬಹುದಾ? ಕೇಸು ಹಾಕಿ, ಕೋರ್ಟ್ ಗೆ ಅಲೆದಾಡುವಂತೆ ಮಾಡಲಾಗುತ್ತದಾ ಎಂದು ಪೊಲೀಸರನ್ನು ಕೇಳಿದರೆ, ಪಿಪ್ರಿ ಚಿಂಚ್ ವಾಡ್ ನ ಸ್ಥಳೀಯ ಸಂಸ್ಥೆಯಿಂದ ಏನು ನಿರ್ಧಾರ ಕೈಗೊಳ್ಳುತ್ತಾರೋ ಅವರಿಗೇ ಬಿಟ್ಟಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ನೀಲೇಶ್ ಹಾಗೂ ಆತನ ಗೆಳತಿ ಮಧ್ಯದ ಮುನಿಸು ಮುಗಿಯಿತಾ ಎಂಬುದು ಗೊತ್ತಾಗಿಲ್ಲ.