ಎನ್ಸಿಪಿಗೆ ಬೇಕಾಗಿರುವ ಎಂಎನ್ಎಸ್ ಮೈತ್ರಿ ಕಾಂಗ್ರೆಸ್ಸಿಗೆ ಏಕೆ ಬೇಡ
ಮುಂಬೈ, ಅಕ್ಟೋಬರ್ 01 : ಲೋಕಸಭೆ ಚುನಾವಣೆಗೆ ತಿಂಗಳಗಣನೆ ಆರಂಭವಾಗಿರುವಾಗ ದೇಶದೆಲ್ಲೆಡೆ ಯಾವ ಪಕ್ಷದ ಜೊತೆ ಯಾರು ಮೈತ್ರಿ ಮಾಡಿಕೊಂಡರೆ ಉತ್ತಮ ಫಲಸು ಪಡೆಯಲು ಸಾಧ್ಯ ಎಂಬ ಕುರಿತು ಭರ್ಜರಿ ಚರ್ಚೆ, ಚಟುವಟಿಕೆಗಳು ನಡೆದಿವೆ.
ಕಳೆದ ಬಾರಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಕೆಲ ಅಂಗಪಕ್ಷಗಳ ಒಂದೆಡೆಯಾದರೆ, ಮೋದಿಯನ್ನು ಈ ಬಾರಿ ಸೋಲಿಸಲೇಬೇಕೆಂದು ಎಲ್ಲ ವಿರೋಧಿ ಪಕ್ಷಗಳು ಎಲ್ಲ ರಾಜ್ಯಗಳಲ್ಲಿ ಭಾರೀ ಕಸರತ್ತು ನಡೆಸಿವೆ.
ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ಬಳಸುತ್ತಿರುವ ಕಾಂಗ್ರೆಸ್!
ಮಹಾರಾಷ್ಟ್ರದಲ್ಲಿ ಆರಂಭದಲ್ಲಿಯೇ ತೊಡಕು ಕಂಡುಬಂದಿದೆ. ಮೋದಿಯವರನ್ನು ವಿರೋಧಿಸುತ್ತಿರುವ ಎಲ್ಲ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಬೇಕು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಜೊತೆ ಮೈತ್ರಿಯ ಹಸ್ತ ಕೈಚಾಚಿದ್ದರೆ, ಎಂಎನ್ಎಸ್ನ ಕಡುವಿರೋಧಿಯಾಗಿರುವ ಕಾಂಗ್ರೆಸ್ ಅಜೀಬಾತ್ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿ, ಎನ್ಸಿಪಿಯನ್ನು ಪೇಚಿಗೆ ಸಿಲುಕಿಸಿದೆ.
'ಕೈ'ಗೆ ಶಿವ, ಕೇಸರಿ ರಾಮ, ಎಸ್ ಪಿಗೆ ವಿಷ್ಣು: ಪಕ್ಷಗಳಿಂದ ದೇವರ ಮೊರೆ
"ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಕೆಡವಲೇಬೇಕೆಂದು ಎಲ್ಲ ವಿರೋಧ ಪಕ್ಷಗಳು ಒಗ್ಗೂಡುತ್ತಿವೆ. ಈ ಒಕ್ಕೂಟದಲ್ಲಿ ಎಂಎನ್ಎಸ್ ಅನ್ನು ತೆಗೆದುಕೊಳ್ಳಬೇಕೆಂದು ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ. ಮೋದಿ ವಿರೋಧಿ ಬಣ ಬಲಿಷ್ಠವಾಗಿರಬೇಕಾದರೆ, ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು, ಪ್ರತಿ ಮತವೂ ಮುಖ್ಯವಾಗುತ್ತದೆ, ಪ್ರತಿ ಮತದಾರನೂ ಮುಖ್ಯವಾಗುತ್ತಾನೆ" ಎಂದು ಎನ್ಸಿಪಿಯ ವಕ್ತಾರ ನವಾಬ್ ಮಲಿಕ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕಡ್ಡಿ ಮುರಿದಂತೆ ಮಾತಾಡಿರುವ ಕಾಂಗ್ರೆಸ್
"ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆಯೊಂದಿಗೆ ಕೈಜೋಡಿಸುವ ಪ್ರಮೇಯವೇ ಇಲ್ಲ. ಎಂಎನ್ಎಸ್ ನಲ್ಲಿನ ರಾಜಕೀಯ ಕಾಂಗ್ರೆಸ್ಸಿನ ತತ್ತ್ವ ಸಿದ್ಧಾಂತಗಳಿಗೆ ತದ್ವಿರುದ್ಧವಾಗಿದೆ. ಅವರಿಗೆ ಸಂವಿಧಾನದಲ್ಲಿ ನಂಬಿಕೆಯೇ ಇಲ್ಲ. ಅವರಿಗೆ ಬರೀ ಜಾತಿ, ಸಮುದಾಯ ಆಧಾರಿತ ರಾಜಕೀಯದಲ್ಲಿ ಮಾತ್ರ ನಂಬಿಕೆಯಿದೆ. ಅವರಿಂದಾಗಿ ಹಲ್ಲೆಗಳಾಗುತ್ತಲಿವೆ. ಇನ್ನು ಇಂಥವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಾದರೂ ಹೇಗೆ?" ಎಂದು ಮುಂಬೈನ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಅವರು ಮೈತ್ರಿಯ ಬಗ್ಗೆ ಕೈತೊಳೆದುಕೊಂಡಿದ್ದಾರೆ.
ಮೈತ್ರಿಗೆ ಹಿಂದೇಟು ಹಾಕಲು ಅನೇಕ ಕಾರಣ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಒಪ್ಪದಿರುವುದಕ್ಕೆ ಇನ್ನೂ ಹಲವಾರು ಕಾರಣಗಳಿವೆ. ಎಂಎನ್ಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಉತ್ತರ ಪ್ರದೇಶ, ದೆಹಲಿ, ಬಿಹಾರ, ರಾಜಸ್ತಾನದಲ್ಲಿಯೂ ಕಾಂಗ್ರೆಸ್ಸಿಗೆ ಹೊಡೆತ ಬೀಳಲಿದೆ ಎಂಬುದು ಕಾಂಗ್ರೆಸ್ಸಿನ ವಾದ. ಆದರೆ, ಈ ಮಹಾಯುದ್ಧದಲ್ಲಿ ವಿಜಯ ಸಾಧಿಸಬೇಕಾದರೆ ಸಣ್ಣಪುಟ್ಟ ಪಕ್ಷಗಳನ್ನು ಕಡೆಗಣಿಸಬಾರದು ಎಂಬ ಸಂದೇಶವನ್ನು ಕಾಂಗ್ರೆಸ್ಸಿಗೆ ಇತರ ಸಣ್ಣಪುಟ್ಟ ಪಕ್ಷಗಳು ರವಾನಿಸಿವೆ. ಇದು, ಕಾಂಗ್ರೆಸ್ಸಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ನರೇಂದ್ರ ಮೋದಿಯವರ ಡಿಕ್ಟೇಟರ್ ಶೈಲಿ ಮತ್ತು ರೈತರ ಅಭ್ಯದಯಕ್ಕಾಗಿ ಬಿಜೆಪಿ ನೀಡಿದ್ದ ಭರವಸೆಗಳು ಸುಳ್ಳಾಗಿರುವುದರಿಂದ ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಭರಿಪ ಬಹುಜನ ಮಹಾಸಂಘ ತಿಳಿಸಿದೆ.
BSP ಜೊತೆ ಮೈತ್ರಿಗೆ ಕಾಂಗ್ರೆಸ್ ನಿಂದಲೇ ಹೈಕಮಾಂಡ್ ಗೆ ಒತ್ತಡ
ಲೋಕಸಭೆಯಲ್ಲಿ ಎಂಎನ್ಎಸ್ ಸಾಧನೆ ಶೂನ್ಯ
ಹಾಗೆ ನೋಡಿದರೆ, ಮಹಾರಾಷ್ಟ್ರ ನವನಿರ್ಮಾಣ ಸಮಿತಿ ಕಳೆದ ಲೋಕಸಭೆ ಚುನಾವಣೆಯಲ್ಲಾಗಲಿ, ವಿಧಾನಸಭೆ ಚುನಾವಣೆಯಲ್ಲಾಗಲಿ ಅಂತಹ ಮಹತ್ ಸಾಧನೆಯನ್ನೇನೂ ಮಾಡಿಲ್ಲ. ಲೋಕಸಭೆಯಲ್ಲಿ ಒಂದೂ ಸ್ಥಾನ ಗೆಲ್ಲದಿದ್ದರೆ, ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಲೋಕಸಭೆಯಲ್ಲಿ ಒಂಬತ್ತು ಅಭ್ಯರ್ಥಿಗಳು ಡೆಪಾಸಿಟ್ ಕಳೆದುಕೊಂಡಿದ್ದರೆ, ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದು. 2009ರ ಚುನಾವಣೆಯಲ್ಲಿ 13 ಸೀಟು ಎಂಎನ್ಎಸ್ ಗಳಿಸಿತ್ತು. ಆದರೆ, ಮೋದಿ ಮತ್ತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಎಂಎನ್ಎಸ್ ಗಟ್ಟಿ ದನಿ ಎತ್ತಿದೆ. ರಾಜ್ ಠಾಕ್ರೆ ತಾವು ಎಂಥ ಮೋದಿ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಎಂಎನ್ಎಸ್ ಅನ್ನು ಮೈತ್ರಿಯಲ್ಲಿ ಸೇರಿಸಿಕೊಳ್ಳಲು ಎನ್ಸಿಪಿ ಉತ್ಸುಕತೆ ತೋರಿಸುತ್ತಿದೆ.
ಆಂತರಿಕ ಸಮೀಕ್ಷೆ : ಎನ್ಡಿಎಗೆ 360ಕ್ಕೂ ಅಧಿಕ ಸ್ಥಾನ!
ಬಿಜೆಪಿ ಸರಕಾರದ ಕಡುವಿರೋಧಿಯಾಗಿರುವ ರಾಜ್
ಎಲ್ಲಕ್ಕಿಂತ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಜನದನಿಯಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ತಮ್ಮ ನಿಲುವೇನೆಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. 2014ರ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ನರೇಂದ್ರ ಮೋದಿಯವರನ್ನು ಅಪಾರವಾಗಿ ಹೊಗಳಿದ್ದ ರಾಜ್ ಠಾಕ್ರೆ ಅವರು, ಕಳೆದ ಕೆಲ ತಿಂಗಳುಗಳಿಂದ ನರೇಂದ್ರ ಮೋದಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಶಿವಾಜಿ ಪಾರ್ಕ್ ನಲ್ಲಿ ಮಾಡಿದ್ದ ಭಾಷಣದಲ್ಲಿ, ಮೋದಿ ಸರಕಾರದ ಸುಳ್ಳು ಭರವಸೆಗಳಿಂದ ಜನ ರೋಸಿಹೋಗಿದ್ದಾರೆ, ಮೋದಿಮುಕ್ತ ಭಾರತಕ್ಕಾಗಿ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡಿದ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷವೇ ಎಂಎನ್ಎಸ್ ಜೊತೆ ಮೈತ್ರಿಗೆ ಹಿಂದೇಟು ಹಾಕುತ್ತಿದೆ.