ಹುಚ್ಚುತನದ ಪರಮಾವಧಿ, ವಾಟ್ಸಪ್ ಗ್ರೂಪ್ ಕಥೆ ನೋಡಿ
ಉಲ್ಹಾಸನಗರ(ಮಹಾರಾಷ್ಟ್ರ), ಮೇ.31: ಸಾಮಾಜಿಕ ಜಾಲ ತಾಣಗಳ ಪೈಕಿ ಬಹುಬೇಗ ಜನಪ್ರಿಯತೆ ಗಳಿಸುತ್ತಿರುವ ವಾಟ್ಸಪ್ ನಿಂದಾಗಿ ಸ್ನೇಹ ಹೆಚ್ಚಾಗುವ ಬದಲು ಸ್ನೇಹಿತರ ನಡುವೆ ಕಿಚ್ಚು ಹಚ್ಚಿದ ಘಟನೆ ನಡೆದಿದೆ.
30 ವರ್ಷ ವಯಸ್ಸಿನ ಗಾರ್ಮೆಂಟ್ ಅಂಗಡಿ ಮಾಲೀಕ ಬಂಟಿ ಕುರ್ಸೇಜಾ ಎಂಬುವರಿಗೆ ಅವರು ಹುಟ್ಟು ಹಾಕಿದ ವಾಟ್ಸಪ್ ಗ್ರೂಪಿನ ಸದಸ್ಯರೇ ಚಾಕು ಚುಚ್ಚಿ ಗಾಯಗೊಳಿಸಿದ್ದಾರೆ. ಇತ್ತೀಚೆಗೆ ಬಂಟಿ ಅವರು ತಮ್ಮ ಗ್ರೂಪ್ ನಿಂದ ಇಬ್ಬರನ್ನು ಕಿತ್ತು ಹಾಕಿದ್ದರು. ಇದರಿಂದ ಕೋಪಗೊಂಡ ಅವರಿಬ್ಬರು ಚಾಕುವಿನಿಂದ ಬಂಟಿಗೆ ಚುಚ್ಚಿ, ಗೂಸಾ ಕೊಟ್ಟಿದ್ದಾರೆ.
ಅನಿಲ್ ಮುಖಿ ಹಾಗೂ ನರೇಶ್ ರೊಹ್ರಾ ಎಂಬುವರು ತಮ್ಮ ವಾಟ್ಸಪ್ ಗ್ರೂಪಿನ ಅಡ್ಮಿನ್ ಬಂಟಿಗೆ ಉಲ್ಹಾಸನಗರದಲ್ಲಿ ಹೊಡೆದಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಂಧಿತರ ಪೈಕಿ ಒಬ್ಬ ಮಾಜಿ ಕಾರ್ಪೊರೇಟರ್ ರೊಬ್ಬರ ಮಗ ಎಂದು ತಿಳಿದು ಬಂದಿದೆ.

ವಾಟ್ಸಪ್ ನಲ್ಲಿ ಬಂಟಿ ಅವರು 'Jai Ho' ಎಂಬ ಹೆಸರಿನಲ್ಲಿ ಗ್ರೂಪ್ ಮಾಡಿದ್ದರು. ತಮ್ಮ ಗಾರ್ಮೆಂಟ್ ಇಂಡಸ್ಟ್ರಿ ಬಗ್ಗೆ ಮಾಹಿತಿ ಹಂಚಿಕೆ ಮಾಡಿಕೊಳ್ಳುವುದು ಇವರ ಉದ್ದೇಶವಾಗಿತ್ತು.ಈ ಗುಂಪಿನ ಸದಸ್ಯರಾಗಿದ್ದ ಆರೋಪಿ ಅನಿಲ್ ಹಾಗೂ ನರೇಶ್ ಎಂಬುವವರಿಗೂ ಬಂಟಿಗೂ ಈ ಮುಂಚೆ ಹಣಕಾಸು ವಿಷಯದಲ್ಲಿ ಮನಸ್ತಾಪವಾಗಿತ್ತು.
ಇದಕ್ಕೆ ಸೇಡು ತೀರಿಸಿಕೊಳ್ಳಲು ಬಂಟಿ ಶುರು ಮಾಡಿದ್ದ ಗ್ರೂಪಿನಲ್ಲಿ ಪೋರ್ನೋಗ್ರಾಫಿ ಚಿತ್ರಗಳನ್ನು ಹಾಕಿದ್ದಾರೆ. ಈ ಬಗ್ಗೆ ಅನಿಲ್ ಹಾಗೂ ನರೇಶ್ ಗೆ ಬಂಟಿ ಎಚ್ಚರಿಕೆ ನೀಡಿದ್ದಾರೆ. ಅದರೆ, ಇದಕ್ಕೆ ಕ್ಯಾರೆ ಎನ್ನದ ಇಬ್ಬರು ಮತ್ತೆ ಮತ್ತೆ ಅದೇ ರೀತಿ ಚಿತ್ರಗಳು, ವಿಡಿಯೋಗಳನ್ನು ಹಂಚಿದ್ದಾರೆ. ಸಿಟ್ಟಿಗೆದ್ದ ಬಂಟಿ ಇಬ್ಬರನ್ನು ಗ್ರೂಪಿನಿಂದ ಕಿತ್ತು ಹಾಕಿದ್ದಾರೆ. ನಂತರ ಇಬ್ಬರು ಬಂಟಿಗೆ ಗೂಸಾ ಕೊಟ್ಟಿದ್ದಾರೆ.
ಈ ಮುಂಚೆ ಆರೋಪಿಗಳಿಂದ ಒಂದಷ್ಟು ಲಕ್ಷ ರು ಸಾಲ ಮಾಡಿಕೊಂಡಿದ್ದ ಬಂಟಿಗೆ ಸಾಲವನ್ನು ಹಿಂತಿರುಗಿಸಲು ಆಗಿರಲಿಲ್ಲ. ಅವರಿಬ್ಬರಿಗೆ ಸಾಲಕ್ಕಿಂತ ಬಂಟಿ ಮಾನ ಕಳೆಯುವುದೇ ಉದ್ದೇಶವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಉಲ್ಹಾಸ್ ನಗರ ಪೊಲೀಸರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications