ಮಹಾರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಕಿರಿಕ್ : ಅಶೋಕ್ ಚವಾಣ್ ಸಂಭಾಷಣೆ ಆಡಿಯೋ ಸೋರಿಕೆ
ಮುಂಬೈ, ಮಾರ್ಚ್ 24 : ಮಹಾರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ. ಒಂದು ಕಡೆ ಸಾಲು ಸಾಲಾಗಿ ಹಿರಿಯ ಮುಖಂಡರುಗಳು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇನ್ನೊಂದೆಡೆ ಆಂತರಿಕ ಕಲಹ ತಾರಕ್ಕೇರುತ್ತಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಪಕ್ಷದ ಮುಖ್ಯಸ್ಥ ಅಶೋಕ್ ಚವಾಣ್ ಹಾಗೂ ಬೇಸತ್ತ ಕಾರ್ಯಕರ್ತನೊಬ್ಬನ ಜೊತೆಗಿನ ಸಂಭಾಷಣೆಯ ಆಡಿಯೋ ಈಗ ಬಹಿರಂಗವಾಗಿದ್ದು, ಕಾಂಗ್ರೆಸ್ಸಿಗೆ ಮುಜುಗರ ಉಂಟು ಮಾಡಿದೆ.
ಚಂದ್ರಾಪುರ್ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಕುರಿತ ಈ ಸಂಭಾಷಣೆ ನಡೆಸಲಾಗಿದೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಮುಕುಲ್ ವಾಸ್ನಿಕ್ ಅವರು ಮೂಗು ತೂರಿಸುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಆಡಿಯೋ ಬಗ್ಗೆ ಅಶೋಕ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅದನ್ನು ನಿರಾಕರಿಸಿಯೂ ಇಲ್ಲ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಾಗ ವೈಮನಸ್ಯ ಉಂಟಾಗುವುದು ಸಹಜ ಎಂದಿದ್ದಾರೆ.

ರಾಜೀನಾಮೆ ನೀಡಲು ಬಯಸಿದ್ದೆ : ನನ್ನ ಮಾತು ಯಾರು ಕೇಳುತ್ತಿಲ್ಲ, ಮಾನಸಿಕ ಒತ್ತಡ ಎಷ್ಟು ಹೆಚ್ಚಾಗಿದೆ ಎಂದರೆ ಹುದ್ದೆಗೆ ರಾಜೀನಾಮೆ ನೀಡಲು ಬಯಸಿದ್ದೆ ಎಂದು ಕಾರ್ಯಕರ್ತನ ಬಳಿ ಅಶೋಕ್ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ, ಆಡಿಯೋ ಮುದ್ರಿಕೆಯ ಸತ್ಯಾಸತ್ಯತೆ ಬಗ್ಗೆ ಇನ್ನೂ ದೃಢಪಟ್ಟೀಲ್ಲ.
ಮುಕುಲ್ ವಾಸ್ನಿಕ್ ಅವರಿಗೆ ದೂರು ನೀಡಿ ಎಂದು ಕಾರ್ಯಕರ್ತರಿಗೆ ಅಶೋಕ್ ಹೇಳಿದ್ದಾರೆ. ಆದರೆ, ಕಾರ್ಯಕರ್ತರು ಈ ಮಾತಿನಿಂದ ಕೆರಳಿದ್ದು, ಮುಕುಲ್ ವಾಸ್ನಿಕ್ ಅಂದರೆ ಯಾರು? ಇಲ್ಲಿ ನೀವೆ(ಅಶೋಕ್) ನಮಗೆ ಎಲ್ಲಾ ಎಂದಿದ್ದಾರೆ. ನನಗೆ ಗೊತ್ತಿದೆ. ಆದರೆ, ನಾನ ಹತಾಶನಾಗಿದ್ದೇನೆ. ನಾನು ಒತ್ತಡದಿಂದ ಎಲ್ಲವನ್ನು ತೊರೆಯಲು ಮುಂದಾಗಿದ್ದೇನೆ, ಅದನ್ನು ಮುಕುಲ್ ವಾಸ್ನಿಕ್ ಗೆ ಹೇಳಿ' ಎಂದು ಅಶೋಕ್ ಹೇಳಿದ್ದಾರೆ.
ಎನ್ ಸಿಪಿ ಅಲ್ಲದೆ 54 ಇತರೆ ಪಕ್ಷ, ಸಂಘಟನೆಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ. ನಾನು ನನ್ನ ಪಕ್ಷದ ಕಾರ್ಯಕರ್ತರ ಜತೆ ಆಪ್ತವಾಗಿ ಖಾಸಗಿಯಾಗಿ ನಡೆಸಿದ ಸಂಭಾಷಣೆ ಇದಾಗಿದ್ದು, ಸಾರ್ವಜನಿಕವಾಗಿ ಈ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ. ಎಂದು ಅಶೋಕ್ ಅವರು ಎನ್ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ 24 ಹಾಗೂ ಎನ್ಸಿಪಿ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಮಿಕ್ಕ ಕ್ಷೇತ್ರಗಳನ್ನು ಸಣ್ಣ ಪುಟ್ಟ ಮೈತ್ರಿ ಪಕ್ಷಗಳಿಗೆ ನೀಡಲಾಗಿದೆ.












Click it and Unblock the Notifications