ಪರಿಸರದ ಜೊತೆ ಆಟವಾಡಬೇಡಿ: ಶಿಂಧೆ ಸರ್ಕಾರಕ್ಕೆ ಉದ್ಧವ್ ಠಾಕ್ರೆ ಎಚ್ಚರಿಕೆ
ಮುಂಬೈ, ಜುಲೈ1: ಆರೆ ಕಾಲೋನಿಯಿಂದ ಮೆಟ್ರೋ 3 ಕಾರ್ ಶೆಡ್ ಅನ್ನು ಸ್ಥಳಾಂತರಿಸುವ ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಏಕನಾಥ್ ಶಿಂಧೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಮುಂಬೈನ ಸೇನಾ ಭವನದಲ್ಲಿ ಮಾತನಾಡಿದ ಠಾಕ್ರೆ, "ಸರ್ಕಾರದ ನಿರ್ಧಾರವು ಆರೆ ಅರಣ್ಯಗಳ ಮೇಲೆ ಪರಿಣಾಮ ಬೀರಲಿದ್ದು, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ" ಎಂದು ಆತಂಕವನ್ನು ವ್ಯಕ್ತಪಡಿಸಿದರು.
ಠಾಕ್ರೆ ನಿರ್ಧಾರ ರದ್ದು; ಸಿಎಂ ಆದ ಬಳಿಕ ಶಿಂಧೆ ಕೈಗೊಂಡ ಮೊದಲ ಹೆಜ್ಜೆ ಇದು
"ನನ್ನ ಮೇಲಿರುವ ಕೋಪವನ್ನು ಮುಂಬೈ ಜನತೆ ಮೇಲೆ ತೋರಿಸಬೇಡಿ. ಮೆಟ್ರೋ ಶೆಡ್ ಪ್ರಸ್ತಾವನೆಯನ್ನು ಬದಲಾಯಿಸಬೇಡಿ. ಮುಂಬೈನ ಪರಿಸರದೊಂದಿಗೆ ಆಟವಾಡಬೇಡಿ" ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಿಂಧೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
2019 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಉದ್ಧವ್ ಠಾಕ್ರೆ ಆರೆ ಕಾಲೋನಿ ಮೂಲಕ ಹಾದುಹೋಗುವ ಕೊಲಾಬಾ-ಬಾಂದ್ರಾ-ಸೀಪ್ಜ್ ಮೆಟ್ರೋ 3 ಕಾರಿಡಾರ್ ನಿರ್ಮಾಣವನ್ನು ತಡೆಹಿಡಿದಿದ್ದರು ಮತ್ತು ಪರ್ಯಾಯ ಸ್ಥಳಗಳನ್ನು ಗುರುತಿಸಲು ಸಮಿತಿಯನ್ನು ನೇಮಿಸಿದ್ದರು. ಅಘಾಡಿ ಸರ್ಕಾರವು ಆರೆ ಕಾಲೋನಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿತ್ತು.
ಠಾಕ್ರೆ ನಿರ್ಧಾರ ರದ್ದು; ಸಿಎಂ ಆದ ಬಳಿಕ ಶಿಂಧೆ ಕೈಗೊಂಡ ಮೊದಲ ಹೆಜ್ಜೆ ಇದು
ಮುಂಬೈನ ಕಂಜುರ್ಮಾರ್ಗ್ನಲ್ಲಿ ಉದ್ದೇಶಿತ ಕಾರ್ ಡಿಪೋ ಫ್ಲಾಟ್ನ ಕುರಿತು ಉದ್ಧವ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಜಗಳಕ್ಕೆ ಕಾರಣವಾಯಿತು. ಇದರಿಂದಾಗಿ ಭೂಗತ ಮೆಟ್ರೋ ಯೋಜನೆ ವಿಳಂಬವಾಯಿತು.
2.5 ವರ್ಷಗಳ ಹಿಂದೆ ಕೇಳಿದ್ದನ್ನು ಈಗ ಮಾಡಿದ್ದಾರೆ
"ಹೊಸ ಸರ್ಕಾರ ರಚಿಸಿದವರು ಶಿವಸೈನಿಕ ಎಂದು ಕರೆಸಿಕೊಳ್ಳುವವರನ್ನು ಸಿಎಂ ಮಾಡಿದ್ದಾರೆ. ನಾನು 2.5 ವರ್ಷಗಳ ಹಿಂದೆ ಇದೇ ಮಾತನ್ನು ಹೇಳುತ್ತಿದ್ದೆ. ಶಿವಸೇನೆ ಮತ್ತು ಬಿಜೆಪಿ ತಲಾ ಅರ್ಧ ಅವಧಿಗೆ ಸಿಎಂ ಸ್ಥಾನವನ್ನು ಹಂಚಿಕೊಳ್ಳಲು ನನ್ನ ಮತ್ತು ಅಮಿತ್ ಶಾ ನಡುವೆ ಅದೇ ಸೂತ್ರವನ್ನು ನಿರ್ಧರಿಸಲಾಯಿತು. ಅಂದು ನನ್ನ ಮಾತಿಗೆ ಒಪ್ಪಿಗೆ ನೀಡಿದ್ದರೆ, ಇಂದು ಏನಾಗುತ್ತಿದೆಯೋ ಅದು ಗೌರವದಿಂದ ನಡೆಯುತ್ತಿತ್ತು," ಎಂದರು.
"ರಾಜ್ಯ ಮತ್ತು ಕೇಂದ್ರದಲ್ಲಿ ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುವಾಗ ಬಿಜೆಪಿ ಏಕೆ ನನ್ನ ಬೇಡಿಕೆಗೆ ಒಪ್ಪಲಿಲ್ಲ?" ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
ಏನಿದು ಮೆಟ್ರೋ 3 ಕಾರ್ ಶೆಡ್ ಯೋಜನೆ?
ರಾಷ್ಟ್ರೀಯ ರೈಲು ಸೇವೆ ಯೋಜನೆಯ ಭಾಗವಾಗಿ ಮೆಟ್ರೋ 3 ಕಾರ್ ಶೆಡ್ ನಿರ್ಮಾಣ ಮಾಡಲು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದಾಗ ನಿರ್ಧರಿಸಲಾಗಿತ್ತು. ಇದು ಆರೆ ಕಾಲೋನಿ ಅರಣ್ಯ ಪ್ರದೇಶದ ಮೂಲಕ ಸಾಗುವ ಯೋಜನೆಯಾಗಿತ್ತು.
ಮಾತ್ರವಲ್ಲದೆ ಈ ಪ್ರದೇಶದಲ್ಲಿ 32 ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟುವ ಯೋಜನೆಯನ್ನು ಫಡ್ನವಿಸ್ ಸರ್ಕಾರ ರೂಪಿಸಿತ್ತು. 8 ಸಾವಿರ ಜನರಿಗೆ ವಸತಿ ಕಲ್ಪಿಸುವ ಯೋಜನೆ ಇದಾಗಿತ್ತು. 365 ಕಾರುಗಳ ಪಾರ್ಕಿಂಗ್ ನಿರ್ಮಾಣ, ಒಂದು ಹೆಲಿಪೋರ್ಟ್ ನಿರ್ಮಾಣ ಕೂಡ ಯೋಜನೆಯ ಭಾಗವಾಗಿದೆ.
ಮುಂಬೈ ನಗರಕ್ಕೆ ಆರೆ ಕಾಲೊನಿ ಯಾಕೆ ಮುಖ್ಯ
ಮುಂಬೈ ಮಹಾನಗರದ ಪರಿಸರ ಸಮತೋಲನ ಕಾಪಾಡಲು ಇರುವ ಅರಣ್ಯ ಪ್ರದೇಶವೇ ಆರೆ ಕಾಲೋನಿ. 16.5 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಈ ಅರಣ್ಯ ಹಲವು ಪ್ರಾಣಿಗಳು, ಪಕ್ಷಿಗಳ ಆವಾಸಸ್ಥಾನವಾಗಿದೆ. ಮುಂಬೈನಂತ ಮಹಾನಗರದ ಆಮ್ಲಜನಕ ಪೂರೈಕೆಯಲ್ಲಿ ಆರೆ ಕಾಲೋನಿ ಪಾತ್ರ ಬಹಳ ಮುಖ್ಯ.
ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ದೇವೇಂದ್ರ ಫಡ್ನವೀಸ್ ಈ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದರು. ಅಭಿವೃದ್ಧಿ ಯೋಜನೆಯ ಭಾಗವಾಗಿ ಸಾವಿರಾರು ಮರಗಳನ್ನು ಕಡಿಯಲು ಪರಿಸರ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಯೋಜನೆಯನ್ನು ಬೇರೆಡೆ ವರ್ಗಾಯಿಸಿದ್ದ ಉದ್ಧವ್ ಸರ್ಕಾರ
ಬಿಜೆಪಿ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಉದ್ಧವ್ ಠಾಕ್ರೆ ಸರ್ಕಾರ, ಮೆಟ್ರೋ 3 ಕಾರ್ ಶೆಡ್ ಯೋಜನೆಯನ್ನು ಆರೆ ಕಾಲೋನಿಯಿಂದ ಬೇರೆಡೆಗೆ ವರ್ಗಾಯಿಸಿತ್ತು. ಮಾತ್ರವಲ್ಲದೇ ಆರೆ ಕಾಲೋನಿಯ ಸಂರಕ್ಷಣೆ ಉದ್ದೇಶದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ಮೀಸಲು ಅರಣ್ಯ ಎಂದು ಘೋಷಿಸಿದ್ದರು.
ಆದರೆ ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಬೆಂಬಲಿಯ ಏಕನಾಥ್ ಶಿಂಧೆ ಸರ್ಕಾರ ಮೊದಲ ದಿನವೇ ಆರೆ ಕಾಲೋನಿಯಿಂದ ಮೆಟ್ರೋ 3 ಕಾರ್ ಶೆಡ್ ಯೋಜನೆಯನ್ನು ಸ್ಥಳಾಂತರ ಮಾಡಿದ್ದ ಉದ್ಧವ್ ಠಾಕ್ರೆ ಸರ್ಕಾರದ ನಿರ್ಧಾರಗಳನ್ನು ಹಿಂಪಡೆದಿದೆ.
Recommended Video