ನೇರವಾಗಿ ಮೋದಿ ಸರಕಾರದ ವಿರುದ್ದ ತೊಡೆತಟ್ಟಿದ ಉದ್ಧವ್ ಠಾಕ್ರೆ!
ಗಳಸ್ಯ ಕಂಠಸ್ಯದಂತಿದ್ದ ಬಿಜೆಪಿ ಮತ್ತು ಶಿವಸೇನೆಯ ನಡುವಿನ ಸುಮಧರ ಬಾಂಧವ್ಯ ಕಳೆದ ಮಹಾರಾಷ್ಟ್ರದ ಚುನಾವಣೆಯ ನಂತರ ಹದೆಗೆಟ್ಟಿತು. ಅಧಿಕಾರ ಹಂಚಿಕೆಯಲ್ಲಿನ ಗೊಂದಲದಿಂದಾಗಿ, ತಮ್ಮ ಸೈದ್ದಾಂತಿಕ ವಿರೋಧಿಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಶಿವಸೇನೆ ಸರಕಾರವನ್ನು ರಚಿಸಿತ್ತು.
ಇದಾದ ನಂತರದ, ಕಳೆದ ತಿಂಗಳು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆಯವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಪ್ರಧಾನಿ ಜೊತೆಗಿನ ನಲವತ್ತು ನಿಮಿಷಗಳ ಸಭೆಯ ನಂತರ, "ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ವೈಯಕ್ತಿಕ ಸಂಬಂಧಗಳನ್ನು ಗೌರವಿಸುತ್ತೇವೆ" ಎನ್ನುವ ಹೇಳಿಕೆಯನ್ನು ಶಿವಸೇನೆ ನೀಡಿತ್ತು.
ಇದು, ಹಳೆಯ ಮಿತ್ರರು ಮತ್ತೆ ಒಂದಾಗುತ್ತಾರಾ ಎನ್ನುವ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ತುರ್ತಾಗಿ ಠಾಕ್ರೆಯವರ ಜೊತೆ ಮಾತುಕತೆ ನಡೆಸಿದ್ದರು. ನಾನು ಎಲ್ಲೂ ಹೋಗುವುದಿಲ್ಲ ಎಂದು ಠಾಕ್ರೆ ಸ್ಪಷ್ಟ ಪಡಿಸಿದ್ದರು. ಇದಾದ ನಂತರ, ಬಿಜೆಪಿ-ಶಿವಸೇನೆಯ ನಡುವೆ ಆರೋಪ/ಪ್ರತ್ಯಾರೋಪಗಳು ನಡೆಯುತ್ತಲೇ ಇದ್ದವು.
ಈಗ, ನೇರವಾಗಿ ನರೇಂದ್ರ ಮೋದಿ ಸರಕಾರದ ವಿರುದ್ದ ತೊಡೆತಟ್ಟಿರುವ ಉದ್ಧವ್ ಠಾಕ್ರೆ ಸರಕಾರ, ಕೇಂದ್ರ ಸಚಿವರನ್ನೇ ವಶಕ್ಕೆ ಪಡೆಯುವ ಮೂಲಕ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ. ಮಂಗಳವಾರದ (ಆಗಸ್ಟ್ 24) ಈ ವಿದ್ಯಮಾನದಿಂದಾಗಿ, ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರದ ನಡುವೆ ಯಾವರೀತಿ ಸಂಬಂಧ ಇರಬಹುದು ಎನ್ನುವುದನ್ನು ಗ್ರಹಿಸಬಹುದಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹತ್ತೊಂಬತ್ತು ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದರು
2024ರ ಸಾರ್ವತ್ರಿಕ ಚುನಾವಣೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಪೂರ್ವತಯಾರಿ ಎನ್ನುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹತ್ತೊಂಬತ್ತು ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದರು. ಅದರಲ್ಲಿ ಉದ್ಧವ್ ಠಾಕ್ರೆ ಕೂಡಾ ಭಾಗವಹಿಸಿದ್ದರು. ಆ ಮೂಲಕ, ಬಿಜೆಪಿ ಜೊತೆ ಮತ್ತೆ ಒಂದಾಗುವ ಯಾವ ಆಲೋಚನೆಯೂ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದರು.

ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರ ಪೊಲೀಸರ ವಶಕ್ಕೆ
ಈಗ, ಮತ್ತೊಂದು ಸುತ್ತಿನ ಜಿದ್ದಿಗೆ ಬಿದ್ದಿರುವ ಠಾಕ್ರೆ ಸರಕಾರ, ಕೇಂದ್ರ ಸಣ್ಣ, ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆಯವರನ್ನು ಮಹಾರಾಷ್ಟ್ರ ಪೊಲೀಸರು ರತ್ನಗಿರಿ ಜಿಲ್ಲೆಯಲ್ಲಿ ತಮ್ಮ ವಶಕ್ಕೆ ಪಡೆದಿದ್ದಾರೆ. "ಠಾಕ್ರೆ ಆಗಸ್ಟ್ 15ರಂದು ರಾಜ್ಯದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷಗಳ ಲೆಕ್ಕವನ್ನೇ ಮರೆತಿದ್ದರು. ಅವರು ತಮ್ಮ ಭಾಷಣ ಸಮಯದಲ್ಲಿ, ಸ್ವಾತಂತ್ರ್ಯ ದೊರೆತು ಎಷ್ಟು ವರ್ಷವಾಯಿತು ಎಂಬುದರ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಆ ಸಮಯ ಆ ಸ್ಥಳದಲ್ಲಿದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ" ಎನ್ನುವ ಹೇಳಿಕೆಯನ್ನು ರಾಣೆ ನೀಡಿದ್ದರು. ಈ ಕಾರಣಕ್ಕಾಗಿ ರಾಣೆಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜನಾಶೀರ್ವಾದ ಸಭೆಯಲ್ಲಿ ರಾಣೆ, ಠಾಕ್ರೆ ವಿರುದ್ದ ಅಸಂವಿಧಾನಿಕ ಪದ ಬಳಕೆ
ಮೊದಲು ಕಾಂಗ್ರೆಸ್, ನಂತರ ಶಿವಸೇನೆ, ಇದಾದ ನಂತರ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷ ಎನ್ನುವ ಹೆಸರಿನಲ್ಲಿ ಪಾರ್ಟಿ ಕಟ್ಟಿ, ಕೊನೆಗೆ, ಬಿಜೆಪಿ ಜೊತೆ ವಿಲೀನಗೊಳಿಸಿದ್ದರು. ಮಾಜಿ ಮುಖ್ಯಮಂತ್ರಿಯೂ ಆಗಿರುವ ನಾರಾಯಣ ರಾಣೆ, ಈಗ ರಾಜ್ಯಸಭಾ ಸದಸ್ಯರು. ಜನಾಶೀರ್ವಾದ ಸಭೆಯಲ್ಲಿ ರಾಣೆ, ಠಾಕ್ರೆ ವಿರುದ್ದ ಮಾತನಾಡಿದ್ದರು. ರಾಣೆಯವರ ಹೇಳಿಕೆ ಅಸಂವಿಧಾನಿಕ ಪದವಾಗಿದ್ದರೂ, ಕೇಂದ್ರ ಸಚಿವರೊಬ್ಬರನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ, ಠಾಕ್ರೆ ಸರಕಾರ ನೇರವಾಗಿ ತೊಡೆತಟ್ಟಿದೆ. (ಚಿತ್ರ : ಪಿಟಿಐ)
Recommended Video

ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರದ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ
ಮಹಾರಾಷ್ಟ್ರ ಸರಕಾರದ ಈ ನಿರ್ಧಾರದಿಂದಾಗಿ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬೀದಿ ಜಗಳಕ್ಕೆ ಇದು ಕಾರಣವಾಗಿದೆ. ಠಾಕ್ರೆ ಸರಕಾರದ ಈ ಕ್ರಮವನ್ನು ಮೋದಿ ಸರಕಾರ ಯಾವ ರೀತಿ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಒಟ್ಟಿನಲ್ಲಿ, ಈ ವಿದ್ಯಮಾನ, ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರದ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ.












Click it and Unblock the Notifications