ನಕಲಿ ಟಿಆರ್ ಪಿ ಪ್ರಕರಣ; ರಿಪಬ್ಲಿಕ್ ನೆಟ್ ವರ್ಕ್ ವಿತರಣಾ ಅಧಿಕಾರಿ ಪೊಲೀಸರ ವಶಕ್ಕೆ
ಮುಂಬೈ, ನವೆಂಬರ್ 10: ನಕಲಿ ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ನೆಟ್ ವರ್ಕ್ ವಿತರಣಾ ವಿಭಾಗದ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಅವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ವಾರಗಳಿಂದ ನಕಲಿ ಟಿಆರ್ ಪಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಹಿಂದೆಯೂ ಘನಶ್ಯಾಮ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಅವರನ್ನು ವಶಕ್ಕೆ ಪಡೆಯಲಾಗಿದೆ.
ಬೇಕಿದ್ದರೆ ಬಾಂಬೆ ಹೈಕೋರ್ಟ್ಗೆ ಹೋಗಿ: ರಿಪಬ್ಲಿಕ್ ಟಿವಿಗೆ ಸುಪ್ರೀಂಕೋರ್ಟ್ ಸೂಚನೆ
2018ರಲ್ಲಿ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧಿತರಾಗಿ ಇಂದಿಗೆ ಆರು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಸೋಮವಾರವಾಷ್ಟೆ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಬಾಂಬೆ ಹೈ ಕೋರ್ಟ್ ತಿರಸ್ಕರಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಚಾನೆಲ್ ನ ಸಹಾಯಕ ಉಪಾಧ್ಯಕ್ಷನ ಬಂಧನವೂ ಆಗಿದೆ.
ಹಂಸ್ ಏಜೆನ್ಸಿಯು ಬಾರ್ಕ್ ನೀಡುವಂತಹ ಟಿಆರ್ ಪಿ ಮೇಲೆ ಸಂಶಯ ವ್ಯಕ್ತಪಡಿಸಿ, ದೂರು ದಾಖಲಿಸಿತ್ತು. ಮುಂಬೈನಲ್ಲಿ ಸ್ಥಾಪಿಸಿರುವ 2 ಸಾವಿರ ಟಿಆರ್ ಪಿ ನಿಯಂತ್ರಕ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪದ ಮೇಲೆ ದೂರು ನೀಡಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗದ ರಿಪಬ್ಲಿಕ್ ಟಿ.ವಿ ಮತ್ತು ಅದರ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಬಾಂಬೆ ಹೈಕೋರ್ಟ್ಗೆ ಹೋಗುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಇದೀಗ ಚಾನೆಲ್ ನ ವಿತರಣಾ ವಿಭಾಗದ ಸಹಾಯಕ ಉಪಾಧ್ಯಕ್ಷ ರನ್ನು ವಶಕ್ಕೆ ಪಡೆಯಲಾಗಿದೆ.