ಶಿವಸೇನಾ ಸಂಸದನಿಂದ ಸಂಸದೆ ನವನೀತ್ಗೆ ಬೆದರಿಕೆ: ರಕ್ಷಣೆ ಕೋರಿ ಪತ್ರ
ಮುಂಬೈ, ಮಾರ್ಚ್ 23: ಮಹಾರಾಷ್ಟ್ರದ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಮಾತನಾಡಿದ್ದರ ಪರಿಣಾಮವಾಗಿ ಶಿವಸೇನೆಯ ಸಂಸದ ಅರವಿಂದ್ ಸಾವಂತ್ ಅವರು ಬೆದರಿಕೆ ಹಾಕಿದ್ದಾರೆ ಎಂದು ಸಂಸದೆ ನವನೀತ್ ರಾಣಾ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಶಿವಸೇನಾ-ಕಾಂಗ್ರೆಸ್ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದು, ಗೃಹ ಸಚಿವರ ಮೇಲಿನ 100 ಕೋಟಿ ರೂ. ಡೀಲ್ ಆರೋಪ ಅಲ್ಲಿನ ಸರ್ಕಾರಕ್ಕೆ ಇನ್ನಿಲ್ಲದ ತಲೆನೋವಾಗಿ ಪರಿಣಮಿಸಿದೆ.
ಮಹಾರಾಷ್ಟ್ರ 'ಕಲೆಕ್ಷನ್' ವಿವಾದ: ಲೋಕಸಭೆಯಲ್ಲಿ ಕೋಲಾಹಲ
ಇದೇ ವಿಚಾರವಾಗಿ ಸಂಸದೆ ನವನೀತ್ ರವಿ ರಾಣಾ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದು, ಅವರಿಗೆ ಶಿವಸೇನಾ ಸಂಸದ ಅರವಿಂದ್ ಸಾವಂತ್ ಬೆದರಿಕೆ ಹಾಕಿದ್ದಾರೆಂದು ಹೇಳಿಕೊಂಡಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಸಂಸದೆ ಈ ಮಾಹಿತಿ ನೀಡಿದ್ದಾರೆ. ನಿಮ್ಮನ್ನು ಜೈಲಿಗೆ ಹಾಕುತ್ತೇನೆ ಎಂದು ಹೇಳಿದ್ದಾರೆ ಎಂದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಇದೀಗ ರಕ್ಷಣೆ ನೀಡುವಂತೆ ಕೋರಿ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ.
ಇನ್ನಷ್ಟು ಗಂಭೀರ ಆರೋಪವನ್ನು ಮಾಡಿರುವ ಕೌರ್, ಶಿವಸೇನೆಯ ಲೆಟರ್ ಹೆಡ್ಗಳಲ್ಲಿ ಹಾಗೂ ಫೋನ್ಕರೆಗಳಲ್ಲಿ ನನ್ನ ಮೇಲೆ ಆಸಿಡ್ ದಾಳಿ ಮಾಡುವ ಬೆದರಿಕೆ ಬಂದಿರುವುದಾಗಿ ಹೇಳಿದ್ದಾರೆ.
ಅರವಿಂದ್ ಸಾವಂತ್ ಕೌರ್ ಆರೋಪವನ್ನು ನಿರಾಕರಿಸಿದ್ದು, ಯಾರಾದರೂ ದೈಹಿಕ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದರೆ ಮಹಿಳಾ ಸದಸ್ಯೆಯ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಎಂದರು.
ಮಾರ್ಚ್ 22 ರಂದು ಬರೆದಿರುವ ಪತ್ರದಲ್ಲಿ ಇಂದು ಶಿವಸೇನೆಯ ಸಂಸದ ಅರವಿಂದ್ ಸಾವಂತ್ ನನಗೆ ಬೆದರಿಕೆ ಹಾಕಿದ ರೀತಿ, ಇದು ನನಗೆ ಮಾತ್ರವಲ್ಲ ದೇಶದ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನವಾಗಿದೆ.
ಆದ್ದರಿಂದ ನಾನು ಅರವಿಂದ್ ಸಾವಂತ್ ವಿರುದ್ಧ ಕಟ್ಟುನಿಟ್ಟಿನ ಪೊಲೀಸ್ ಕ್ರಮವನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.