ಮುಂಬೈ: ಕ್ಯಾಬ್ ಚಾಲಕನ ಕೊಲೆ, ನಾಲ್ವರ ಬಂಧನ
ಮುಂಬೈ ಮೇ 31: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕ್ಯಾಬ್ ಚಾಲಕನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ ಬಾಲಕನೊಬ್ಬನನ್ನು ವಶಕ್ಕೆ ಪಡೆಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕಲ್ವಾ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವೆಂಕಟ್ ಅಂಡಾಳೆ, "ಥಾಣೆ ಜಿಲ್ಲೆಯ ಖಾರ್ಡಿ ಗ್ರಾಮದಲ್ಲಿ ಭಾನುವಾರ ಕ್ಯಾಬ್ ಚಾಲಕನ ಶವ ಪತ್ತೆಯಾಗಿತ್ತು. ಅಲ್ಲದೇ ಸಮೀಪದಲ್ಲೇ ಕಾರ್ ಕೂಡ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸಮೀಪದ ಮುಂಬೈ ನಿವಾಸಿ ಮೊಹಮ್ಮದ್ ಅಲಿ ಅನ್ಸಾರಿ (27) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು,'' ಎಂದು ಮಾಹಿತಿ ನೀಡಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಕೃತ್ಯ:
ಗ್ರಾಹಕರ ಸೋಗಿನಲ್ಲಿ ಆರೋಪಿಗಳು ಕ್ಯಾಬ್ ಬುಕ್ ಮಾಡಿದ್ದಾರೆ. ಮಾರ್ಗಮಧ್ಯೆ ಮೂತ್ರ ವಿರ್ಸನೆಯ ನೆಪ ಹೇಳಿ ಖಾರ್ಡಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕ್ಯಾಬ್ ನಿಲ್ಲಿಸಿದ್ದಾರೆ. ಈ ವೇಳೆ ಕ್ಯಾಬ್ ಚಾಲಕ ಮೊಹಮ್ಮದ್ ಅಲಿ ಅನ್ಸಾರಿ ಅವರ ಮೇಲೆ ಆರೋಪಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಫೋನ್ ಮತ್ತು 2,500 ರು.ಗಳನ್ನು ಕಸಿದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮೊಹಮ್ಮದ್ ಅಲಿ ಅನ್ಸಾರಿ ಅವರನ್ನು ಹತ್ಯೆ ಮಾಡಿ, ಶವವನ್ನು ಖಾರ್ಡಿ ಗ್ರಾಮದ ಸೇತುವೆ ಕೆಳೆಗೆ ಹಾಕಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್ ಚಾಲಕನ ಮೇಲೆ ಹಲ್ಲೆ:
ಪ್ರಕರಣ ಸಂಬಂಧ ಶಿಲ್-ದೈಗಾರ್ ಪೊಲೀಸರ ಮೂರು ತಂಡಗಳನ್ನು ರಚಿಸಿ, ತನಿಖೆ ಆರಂಭಿಸಲಾಯಿತು. ಪ್ರಕರಣದ ಜಾಡು ಹಿಡುದು ಹೊರಟ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ದೊರೆಯಿತು. ಈ ಆರೋಪಿಗಳು ಥಾಣೆಯ ದಿವಾ ಪ್ರದೇಶದಿಂದ ಬದಲ್ ಪುರಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಾರೆ. ಮಾರ್ಗ ಮಧ್ಯೆ ಮೂತ್ರ ವಿರ್ಸಜನೆಯ ನೆಪ ಹೇಳಿ ಕ್ಯಾಬ್ ನಿಲ್ಲಿಸಿದ್ದಾರೆ. ನಂತರ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನಿಂದ ಮೊಬೈಲ್ ಮತ್ತು ನಗದು ಹಣ ದೋಚಿದ್ದಾರೆ. ನಂತರ ಶವವನ್ನು ಸೇತುವೆ ಕೆಳೆಗೆ ಎಸೆದು ಪರಾರಿಯಾಗಿದ್ದಾರೆ.

ಪೊಲೀಸರು ಘಟನೆ ನಡೆದ 10 ಗಂಟೆಗಳಲ್ಲಿ ಪ್ರಕರಣವನ್ನು ಬೇಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಥಾಣೆಯ ನಿವಾಸಿಗಳಾದ ಹಸ್ರೂಲ್ ಅಲಿಂ ಶೇಖ್(36), ಓಂಕಾರ್ ಕಾಸೇಕರ್(21), ಪ್ರಶಾಂತ್ ಪೆರಿಯಾಸ್ವಾಮಿ(19) ಹಾಗೂ ಮುಂಬೈ ಸಮೀಪದ ಭಾಂಡಪ್ ಗ್ರಾಮದ ನಿವಾಸಿ ಆತೀಶ್ ಬೋಸ್ಲೇ(21) ಬಂಧಿತ ಆರೋಪಿಗಳು. ಅಲ್ಲದೇ ಪ್ರಕರಣ ಸಂಬಂಧ ಒಬ್ಬ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ದೈಗಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications