'ಸುಮ್ಮನಿರಿ, ಇಲ್ಲವಾದ್ರೆ ಉದ್ಧವ್ ಠಾಕ್ರೆ ರಾಜೀನಾಮೆ ಕೊಡ್ತಾರೆ'
ಮುಂಬೈ, ಜನವರಿ 13: ಭಾರಿ ಹೈಡ್ರಾಮಾ, ನಿರೀಕ್ಷೆಗಳೊಟ್ಟಿಗೆ ಅಸ್ಥಿತ್ವಕ್ಕೆ ಬಂದಿರುವ ಮಹಾರಾಷ್ಟ್ರ ತ್ರಿ ಪಕ್ಷ ಮೈತ್ರಿ ಸರ್ಕಾರಕ್ಕೆ ಆರಂಭದಲ್ಲೇ ಅಂಕು-ಡೊಂಕು ರಸ್ತೆಯಲ್ಲಿ ಸಾಗಿದೆ.
ಇತ್ತೀಚೆಗಷ್ಟೆ ನಡೆದ ಸಂಪುಟ ವಿಸ್ತರಣೆಯಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಶಿವಸೇನಾ ಮೈತ್ರಿ ಪಕ್ಷವಾಗಿರುವ ಎನ್ಸಿಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ಸದಸ್ಯರು ತಗಾದೆ ತೆಗೆದಿದ್ದಾರೆ.
ತಗಾದೆ ತೆಗೆದಿರುವ ಶಾಸಕರನ್ನು ನಿಯಂತ್ರಿಸುವ ಕಾರ್ಯವನ್ನು ಸ್ಥಳೀಯ ಮುಖಂಡರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದ್ದು, ಆ ಕಾರ್ಯದಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಅತೃಪ್ತರಾಗಿರುವ ಕಾಂಗ್ರೆಸ್ ಮತ್ತು ಎನ್ಸಿಪಿ ಶಾಸಕರನ್ನುದ್ದೇಶಿಸಿ ಮಾತನಾಡಿರುವ ಹಿರಿಯ ಕಾಂಗ್ರೆಸ್ಸಿಗ ಯಶವಂತರಾವ್ ಗಡಕ್, 'ಹೀಗೆ ಅತೃಪ್ತಿ ಮುಂದುವರೆಸಿ ಸರ್ಕಾರಕ್ಕೆ ಇರುಸು-ಮುರುಸು ಉಂಟು ಮಾಡಿದರೆ, ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿ ಬಿಡುತ್ತಾರೆ' ಎಂದಿದ್ದಾರೆ.
'ಉದ್ಧವ್ ಠಾಕ್ರೆ ರಾಜಕಾರಣಿ ಅಲ್ಲ, ಅವರದ್ದು ಕಲಾವಿದನ ಮನಸ್ಸು, ಈ ರೀತಿಯ ಅಧಿಕಾರ ಲೋಲುಪತೆ ಅವರಿಗೆ ಬೇಸರ ಉಂಟು ಮಾಡಿದರೆ ರಾಜೀನಾಮೆ ನೀಡಿಬಿಡುತ್ತಾರೆ, ಸ್ಥಾನ ಸಿಗದ ಬಗ್ಗೆ ದೂರು ಹೇಳುವುದನ್ನು ನಿಲ್ಲಿಸಿ' ಎಂದು ಅವರು ಮನವಿ ಮಾಡಿದ್ದಾರೆ.
ಹಲವು ಸುತ್ತಿನ ಮಾತು-ಕತೆ ಬಳಿಕ ಕೆಲವು ದಿನಗಳ ಹಿಂದಷ್ಟೆ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಆದರೆ ಸೂಕ್ತ ರೀತಿಯಲ್ಲಿ ಖಾತೆಗಳ ಹಂಚಿಕೆ ಆಗಿಲ್ಲ. ಶಿವಸೇನಾ ಶಾಸಕರಿಗೆ ಪ್ರಬಲ ಖಾತೆಗಳು ದೊರಕಿವೆ ಎಂದು ಕಾಂಗ್ರೆಸ್ ಮತ್ತು ಎನ್ಸಿಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications