ಕೊನೆಗೂ ಮನೆ ಮರಳಿದ ಮಗ: ಶಾರುಖ್ ಖಾನ್ ನಿರಾಳ
ಮುಂಬೈ ಅಕ್ಟೋಬರ್ 30: ಮುಂಬೈ ಡ್ರಗ್ಸ್ ಕೇಸ್ನಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೊನೆಗೂ ಮನೆಗೆ ಮರಳಿದ್ದಾರೆ. ಮಗ ಮನೆಗೆ ಮರಳುತ್ತಿದ್ದಂತೆ ಶಾರುಖ್ ಖಾನ್ ಕೊಂಚ ನಿರಾಳರಾಗಿದ್ದಾರೆ.
ಆರ್ಯನ್ ಖಾನ್ ಇಂದು ಮಧ್ಯಾಹ್ನ ಜೈಲಿನಿಂದ ಬಿಡುಗಡೆಯಾದ ನಂತರ ಮುಂಬೈನ ಬಾಂದ್ರಾದಲ್ಲಿರುವ ಶಾರುಖ್ ಖಾನ್ ಅವರ ಐಕಾನಿಕ್ ಬಂಗಲೆಗೆ ತೆರಳಿದ್ದಾರೆ. ಗೇಟ್ನ ಹೊರಗೆ ಧೋಲ್ ಬಾಜಾ ಮತ್ತು ಪಟಾಕಿಗಳೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಆರ್ಯನ್ ಅವರ ಮನೆಗೆ ಮರಳುತ್ತಿರುವುದನ್ನು ಆಚರಿಸಲು ಅಭಿಮಾನಿಗಳು ಶಾರುಖ್ ಖಾನ್ ಮನೆಯ ಮುಂದೆ ನೆರೆದಿದ್ದಾಗ 'ಹೋಮ್ಗೆ ಸ್ವಾಗತ ಆರ್ಯನ್ ಖಾನ್, ಸ್ಟೇ ಸ್ಟ್ರಾಂಗ್ ಪ್ರಿನ್ಸ್' ಎಂಬ ಪೋಸ್ಟರ್ಗಳನ್ನು ಹಿಡಿದಿದ್ದರು. ಮೂರು ವಾರಗಳ ನಂತರ ಆರ್ಯನ್ ಮನೆಗೆ ಮರಳಿದ್ದರಿಂದ ಮನ್ನತ್ನಲ್ಲಿ ಸದ್ಯ ಸಂಭ್ರಮ ಮನೆ ಮಾಡಿದೆ.
ಅಕ್ಟೋಬರ್ 2ರಂದು ಮುಂಬೈ ಕ್ರೂಸ್ ಮೇಲೆ ದಾಳಿ ಮಾಡಿದ ಎನ್ಸಿಬಿ ಮರುದಿನ ಆರ್ಯನ್ ಖಾನ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಅವರನ್ನು ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿತ್ತು. ಈಗಾಗಲೇ ಅವರಿಗೆ ಜಾಮೀನು ಕೋರಿದ್ದರೂ ಎರಡು ಬಾರಿ ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಆದರೆ ಗುರುವಾರ (ಅ.28) ಆರ್ಯನ್ ಖಾನ್ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ನಿನ್ನೆ ಅವರ ಬಿಡುಗಡೆಯಾಗಬೇಕಿತ್ತು. ಆದರೆ ಜಾಮೀನು ಅರ್ಜಿಯನ್ನು ಜೈಲಾಧಿಕಾರಿಗೆ ತಲುಪಿಸಲು ತಡವಾದ ಕಾರಣ ಇಂದು ಆರ್ಯನ್ ಸೆರೆಮನೆವಾಸದಿಂದ ಹೊರಗೆ ಬಂದಿದ್ದಾರೆ.

ಆರ್ಯನ್ ಏಕಾಂಗಿ
ಆರ್ಯನ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮಗ. ಹೀಗಾಗಿ ಅವರು ಯಾವಾಗಲೂ ಜನಮನದಲ್ಲಿದ್ದಾರೆ. ಆದರೂ ಅವರು ಏಕಾಂತ ವ್ಯಕ್ತಿ ಎಂದು ಹೇಳಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟೊಂದು ಸಕ್ರಿಯವಾಗಿಲ್ಲ. ಹೀಗಿದ್ದರೂ ಅಕ್ಟೋಬರ್ 3ರಿಂದ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. 'ಬಾಲಿವುಡ್ ಸೂಪರ್ಸ್ಟಾರ್ ಎಸ್ಆರ್ಕೆ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ' ಎಂಬ ಸುದ್ದಿಯಿಂದಾಗಿ ತಂದೆ ಶಾರುಖ್ ಖಾನ್, ತಾಯಿ ಗೌರಿ, ಸಹೋದರಿ ಸುಹಾನಾ ಮತ್ತು ಚಿಕ್ಕ ಸಹೋದರ ಅಬ್ರಾಮ್ ನೆಮ್ಮದಿ ಹಾಳಾಗಿತ್ತು. ಅಭಿಮಾನಿಗಳು ಕಳವಳಗೊಂಡಿದ್ದರು. ಆದರೀಗ ಆರ್ಯನ್ ಕುಟುಂಬ ಮಂದಹಾಸ ಬೀರಿದೆ.

ಮನ್ನತ್ನಲ್ಲಿ ಸಂಭ್ರಮ
ಆರ್ಯನ್ ಖಾನ್ ಇಂದು ಮಧ್ಯಾಹ್ನ 12 ಗಂಟೆಗೆ ಮನೆಗೆ ತಲುಪಿದರು. ಮನ್ನತ್ ಹೊರಗೆ ಆರ್ಯನ್ ಆಗಮಿಸುತ್ತಿದ್ದಂತೆ ಜನ ಸಂಭ್ರಮಿಸಿದ್ದಾರೆ. ಆರ್ಯನ್ ಅವರನ್ನು ಅಭಿಮಾನಿಗಳು ಧೋಲ್ ಬಾಜಾ ಮತ್ತು ಪಟಾಕಿಗಳೊಂದಿಗೆ ಮನ್ನತ್ ಹೊರಗೆ ಸ್ವಾಗತಿಸಿದರು. ಇನ್ನು ಕೆಲವರು 'ಮನೆಗೆ ಸ್ವಾಗತ ರಾಜಕುಮಾರ' ಎಂಬ ಪೋಸ್ಟರ್ಗಳನ್ನು ಹಿಡಿದಿದ್ದರು. ಮತ್ತೊಬ್ಬ ಅಭಿಮಾನಿ ಗೇಟ್ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುತ್ತಿರುವುದು ಕಂಡುಬಂದಿತು. ಟ್ವಿಟರ್ನಲ್ಲಿ ಎಸ್ಆರ್ಕೆ ಅವರ ಅಭಿಮಾನಿಗಳು 'ವೆಲ್ಕಮ್ ಹೋಮ್ ಸಿಂಬಾ' ಎಂದು ಪೋಸ್ಟ್ ಮಾಡಿದ್ದಾರೆ. ಎಸ್ಆರ್ಕೆ ಜೊತೆ ಆರ್ಯನ್ ಅವರ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆರ್ಯನ್ ಹೊರಗೆ ಹೋಗುವುದಿಲ್ಲ
ಒಮ್ಮೆ ಮನೆಗೆ ಬಂದರೆ, ಸ್ವಲ್ಪ ಸಮಯದವರೆಗೆ ಆರ್ಯನ್ ಹೊರಗೆ ಹೋಗುವುದಿಲ್ಲ ಎಂದು ಕುಟುಂಬಕ್ಕೆ ಹತ್ತಿರವಿರುವ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಆರ್ಯನ್ ಕೆಲವು ದಿನ ಮನೆಯಿಂದ ಹೊರಗೆ ಕಾಲಿಡುವುದಿಲ್ಲ ಎಂದು ಹೇಳಲಾಗಿದೆ. ಆರ್ಯನ್ಗೆ ಜಾಮೀನು ನೀಡಿದ ಸುದ್ದಿ ಹೊರಬಿದ್ದಾಗ ಎಸ್ಆರ್ಕೆ ಮನ್ನತ್ನಲ್ಲಿ ಇರಲಿಲ್ಲ. "ಎಸ್ಆರ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಾಳಜಿ ಹೊಂದಿದವರಾಗಿದ್ದಾರೆ. ವಾಸ್ತವವಾಗಿ ಘಟನೆ ಬಳಿಕ ಅವರು ತಮ್ಮ ಸಾಮಾನ್ಯ ಕಾರನ್ನು ಸಹ ಬಳಸುತ್ತಿಲ್ಲ. ಎಸ್ಆರ್ಕೆ ಪ್ರಸ್ತುತ ತನ್ನ ಸಾಮಾನ್ಯ BMW ಬದಲಿಗೆ ಹ್ಯುಂಡೈ ಕ್ರೆಟಾದಲ್ಲಿ ಪ್ರಯಾಣಿಸುತ್ತಿದ್ದಾರೆ.

ಆರ್ಥರ್ ರಸ್ತೆ ಜೈಲಿನಿಂದ ಮನ್ನತ್ಗೆ 45 ನಿಮಿಷ
ಆರ್ಥರ್ ರೋಡ್ ಜೈಲು ಮತ್ತು ಎಸ್ಆರ್ಕೆ ಅವರ ಬಂಗಲೆ ಮನ್ನತ್ ನಡುವಿನ ಅಂತರವು ಸುಮಾರು 35 ನಿಮಿಷಗಳು ಮಾತ್ರ. ಎಸ್ಆರ್ಕೆ ಅವರ ಅಂಗರಕ್ಷಕ ರವಿ ಆರ್ಯನ್ ಅವರನ್ನು ಕಾರಿನಲ್ಲಿ ಕರೆದೊಕೊಂಡು ಮನ್ನತ್ ತಲುಪಲು 45 ನಿಮಿಷಗಳನ್ನು ತೆಗೆದುಕೊಂಡರು. ಬೆಂಗಾವಲು ಪಡೆಯಲ್ಲಿ ಒಟ್ಟು 5 ಕಾರುಗಳಿರುವುದು ಕಂಡುಬಂದಿದೆ.

ಮನ್ನತ್ನಲ್ಲಿ ದೀಪಾವಳಿಗೆ ತಯಾರಿ
ಕಳೆದ ಅಕ್ಟೋಬರ್ 29 ರಂದು ಸಂಜೆ ಮನ್ನತ್ ಬೆಳಗುತ್ತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಪ್ರಸಾರಗೊಂಡಿವೆ. ನವೆಂಬರ್ 4 ರಂದು ದೀಪಾವಳಿಯ ಆಚರಿಸಲಾಗುತ್ತದೆ ಜೊತೆಗೆ ನವೆಂಬರ್ 2 ರಂದು SRK ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಎರಡು ಆಚರಣೆಯ ಸಂದರ್ಭದಲ್ಲಿ ಆರ್ಯನ್ ಮನೆಗೆ ಬಂದಿದ್ದು ಮನೆಯಲ್ಲಿ ದೀಪಾವಳಿ ಮತ್ತು ಎಸ್ಆರ್ಕೆ ಹುಟ್ಟುಹಬ್ಬ ಎರಡು ಮೂರು ದಿನಗಳ ಆಚರಣೆ ನಡೆಯಲಿದೆ.












Click it and Unblock the Notifications