Breaking; ಶಿವಸೇನೆ ನಾಯಕ ಸಂಜಯ್ ರಾವತ್ 4 ದಿನ ಇಡಿ ವಶಕ್ಕೆ
ಮುಂಬೈ, ಆಗಸ್ಟ್ 01; ಶಿವಸೇನೆ ನಾಯಕ ಸಂಜಯ್ ರಾವತ್ರನ್ನು 4 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಭಾನುವಾರ ಸಂಜಯ್ ರಾವತ್ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು, ಬಳಿಕ ಅವರನ್ನು ಬಂಧಿಸಲಾಗಿತ್ತು.
ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮುಂಬೈ ಕೋರ್ಟ್ಗೆ ಸಂಜಯ್ ರಾವತ್ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಕೋರ್ಟ್ ಆಗಸ್ಟ್ 4ರ ತನಕ ಇಡಿ ವಶಕ್ಕೆ ನೀಡಿದೆ.
ಪಾತ್ರಾ ಚಾವ್ಲ್ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ರನ್ನು ಇಡಿ ವಿಚಾರಣೆ ನಡೆಸುತ್ತಿದೆ. ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದಾಗ ಸಂಜಯ್ ರಾವತ್ ಹಾಜರಾಗಿರಲಿಲ್ಲ. ಆದ್ದರಿಂದ ಭಾನುವಾರ ಇಡಿ ಅವರ ಮುಂಬೈ ನಿವಾಸದ ಮೇಲೆ ದಾಳಿ ಮಾಡಿತ್ತು.

ಮುಂಬೈ ಕೋರ್ಟ್ನಲ್ಲಿ ಸಂಜಯ್ ರಾವತ್ ಪರ ವಕೀಲ ಅಶೋಕ ಮುಂಡರಗಿ ವಾದ ಮಂಡಿಸಿದರು, "ಸಂಜಯ್ ರಾವತ್ ಬಂಧನ ರಾಜಕೀಯ ಪ್ರೇರಿತ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಅವರ ಬಳಲುತ್ತಿದ್ದಾರೆ" ಎಂದರು.
"ಸಂಜಯ್ ರಾವತ್ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿದೆ. ಇದರ ಕುರಿತ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ" ಎಂದು ವಾದ ಮಂಡಿಸಿದರು. ಆದರೆ ಇಡಿ ವಾದವನ್ನು ಒಪ್ಪಿದ ಕೋರ್ಟ್ 4 ದಿನಗಳ ಕಾಲ ಸಂಜಯ್ ರಾವತ್ರನ್ನು ಇಡಿ ವಶಕ್ಕೆ ನೀಡಿದೆ.
ಇಡಿ ಅಧಿಕಾರಿಗಳು ಸೋಮವಾರ ಬೆಳಗ್ಗೆ ಸಂಜಯ್ ರಾವತ್ರನ್ನು ಜೆಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು. ಸಂಜಯ್ ರಾವತ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ 11.50 ಲಕ್ಷ ರೂ. ಹಣ ಸಿಕ್ಕಿದೆ ಎಂಬ ವರದಿಗಳಿವೆ.
ಜೂನ್ 28ರಂದು ಸಂಜಯ್ ರಾವತ್ಗೆ ಇಡಿ ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ನೀಡಲಾಗಿತ್ತು. ಪಾತ್ರಾ ಚಾವ್ಲ್ ಹಗರಣದಲ್ಲಿ 1034 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪವಿದ್ದು, ಇಡಿ ಈ ಕುರಿತು ತನಿಖೆ ಮಾಡುತ್ತಿದೆ.












Click it and Unblock the Notifications