ಮಹಾರಾಷ್ಟ್ರದಲ್ಲಿ ಕುತೂಹಲ ಮೂಡಿಸಿದ ರಾಜಕೀಯ ಬೆಳವಣಿಗೆ: ಶಿವಸೇನಾ-ಎನ್ಸಿಪಿ ಮೈತ್ರಿ?
ಮುಂಬೈ, ನವೆಂಬರ್ 6: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 13 ದಿನಗಳು ಕಳೆದರೂ ಸರ್ಕಾರ ರಚನೆಯ ಕಸರತ್ತು ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ನಡುವೆ ಸಹಮತ ವ್ಯಕ್ತವಾಗಿಲ್ಲ. ಮುಖ್ಯಮಂತ್ರಿ ಗಾದಿಗೆ 50:50ರ ಹಂಚಿಕೆ ಆಗಬೇಕು ಎಂದು ಶಿವಸೇನಾ ಬಿಗಿಪಟ್ಟು ಹಿಡಿದಿದೆ. ಅದಕ್ಕೆ ಬಿಜೆಪಿ ನಾಯಕತ್ವ ಒಪ್ಪಿಗೆ ಸೂಚಿಸಿಲ್ಲ.
ಈ ನಡುವೆ ಅಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಯ ಸೂಚನೆ ದೊರೆತಿದೆ. ಬಿಜೆಪಿ ಜತೆಗೆ ಮಾಡಿಕೊಂಡಿದ್ದ ಚುನಾವಣಾ ಪೂರ್ವ ಮೈತ್ರಿಗೆ ತಿಲಾಂಜಲಿ ಇಟ್ಟು ಶಿವಸೇನಾ, ವಿರೋಧಿ ಪಾಳೆಯದ ಎನ್ಸಿಪಿ ಜತೆಗೂಡಿ ಸರ್ಕಾರ ರಚನೆಗೆ ಆಲೋಚನೆ ನಡೆಸಿದೆ ಎನ್ನಲಾಗಿದೆ. ಶಿವಸೇನಾ ಮುಖಂಡ ಸಂಜಯ್ ರಾವತ್ ಅವರು ಎನ್ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೊದಲು ಬಿಜೆಪಿಗೆ ಡಿವೋರ್ಸ್ ಕೊಡಿ: ಶಿವಸೇನೆಗೆ NCP ಸಲಹೆ
ಶಿವಸೇನಾ ಮತ್ತು ಎನ್ಸಿಪಿ ನಾಯಕರು ಒಂದೇ ವಾರದಲ್ಲಿ ಎರಡು ಬಾರಿ ಭೇಟಿಯಾಗಿದ್ದಾರೆ. ಇದು ಔಪಚಾರಿಕ ಭೇಟಿ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಆದರೆ ಸರ್ಕಾರ ರಚನೆಯ ಉದ್ದೇಶದಿಂದಲೇ ಈ ಪಕ್ಷಗಳು ಮಾತುಕತೆ ನಡೆಸಿವೆ ಎಂದು ಮೂಲಗಳು ಹೇಳಿವೆ.
ಬಿಜೆಪಿಗೆ ಕೈ, ಎನ್ಸಿಪಿ ಜತೆ ದೋಸ್ತಿ?
ಬುಧವಾರ ಬೆಳಿಗ್ಗೆ ಶರದ್ ಪವಾರ್ ನಿವಾಸಕ್ಕೆ ಆಗಮಿಸಿದ ಸಂಜಯ್ ರಾವತ್ ಅವರೊಂದಿಗೆ ರಾಜ್ಯ ರಾಜಕಾರಣದ ಕುರಿತಾಗಿ ಮಾತುಕತೆ ನಡೆಸಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಈ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮೂಲಕ ಸರ್ಕಾರ ರಚನೆಗೆ ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ಇದು ಶಿವಸೇನಾದ ಮಿತ್ರಪಕ್ಷ ಬಿಜೆಪಿಗೆ ಆಘಾತ ಉಂಟುಮಾಡಿದೆ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರಿಂದ ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಸರ್ಕಾರ ರಚನೆ ಮಾಡುವುದು ಖಚಿತ ಎಂಬುದನ್ನು ತಲೆಕೆಳಗಾಗಿಸಲು ಶಿವಸೇನಾ ಹೊರಟಿದೆ ಎಂದು ವಿಶ್ಲೇಷಿಸಲಾಗಿದೆ.
ಮೈತ್ರಿ ನಡೆದರೂ ಬಹುಮತಕ್ಕೆ ಸಾಲುವುದಿಲ್ಲ
ಇದಕ್ಕೂ ಮೊದಲು ದೆಹಲಿಗೆ ತೆರಳಿದ್ದ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 288 ಸದಸ್ಯರ ವಿಧಾನಸಭೆ ಇರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ 145 ಸೀಟುಗಳ ಅಗತ್ಯವಿದೆ. ಬಿಜೆಪಿ 105, ಶಿವಸೇನಾ 56, ಎನ್ಸಿಪಿ 54 ಮತ್ತು ಕಾಂಗ್ರೆಸ್ 44 ಸೀಟುಗಳನ್ನು ಹೊಂದಿವೆ. ಶಿವಸೇನಾ ಮತ್ತು ಎನ್ಸಿಪಿ ಮೈತ್ರಿ ಮಾಡಿಕೊಂಡರೂ 110 ಸೀಟುಗಳು ಮಾತ್ರ ಸಿಗಲಿವೆ. ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸರ್ಕಾರ ರಚಿಸಲು ಶಿವಸೇನಾ, ಕಾಂಗ್ರೆಸ್ ಬೆಂಬಲ ಸಹ ಪಡೆಯುವುದು ಅನಿವಾರ್ಯವಾಗಿದೆ.
"ಅವರು ಮನಸ್ಸು ಮಾಡಿದರೆ 2 ತಾಸಿನಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗತ್ತೆ"
ಶರದ್ ಪವಾರ್ ಕಳವಳ
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನಾ ಮುಖಂಡ ಸಂಜಯ್ ರಾವತ್, ಪವಾರ್ ಅವರು ರಾಜ್ಯ ಮತ್ತು ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಅವರು ಇಂದಿನ ಮಹಾರಾಷ್ಟ್ರ ರಾಜಕಾರಣದ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಜತೆ ಸಣ್ಣ ಚರ್ಚೆ ನಡೆಯಿತು ಎಂದು ತಿಳಿಸಿದರು. ಆದರೆ ಸರ್ಕಾರ ರಚನೆಯ ಪ್ರಸ್ತಾಪದ ಕುರಿತು ಹೇಳಿಕೆ ನೀಡಲಿಲ್ಲ.
ಕಾಂಗ್ರೆಸ್ ಶಾಸಕರ ಬೆಂಬಲ?
ಕಾಂಗ್ರೆಸ್ ಮತ್ತು ಎನ್ಸಿಪಿ ಜತೆಯಾಗಿ ವಿಧಾನಸಭೆ ಚುನಾವಣೆ ಎದುರಿಸಿದ್ದವು. ಆದರೆ ಸರ್ಕಾರ ರಚನೆ ವಿಚಾರದಲ್ಲಿ ಶಿವಸೇನಾ ಜತೆಗೆ ಸೇರುವ ಎನ್ಸಿಪಿ ಪ್ರಸ್ತಾಪಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹಮತ ಹೊಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಉಂಟಾಗಿದ್ದು, ದೊಡ್ಡ ಸಂಖ್ಯೆಯ ಕಾಂಗ್ರೆಸ್ ಶಾಸಕರು ಎನ್ಸಿಪಿ-ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಶಿವಸೇನೆ ಪತ್ರ
ಮೈತ್ರಿಯಿಂದ ಹೊರಬನ್ನಿ: ಸೇನಾಗೆ ಷರತ್ತು
ಶಿವಸೇನಾ ಜತೆ ಸರ್ಕಾರ ರಚಿಸಲು ಎನ್ಸಿಪಿ ಒಪ್ಪಿಗೆ ನೀಡಿದ್ದರೂ ಕೆಲವು ಷರತ್ತು ಮುಂದಿಟ್ಟಿದೆ. ಬಿಜೆಪಿ ಅಥವಾ ಎನ್ಡಿಎ ಮೈತ್ರಿಕೂಟದಿಂದ ಹೊರಬಂದರೆ ಮಾತ್ರ ಅದರೊಂದಿಗೆ ಸೇರಿ ಸರ್ಕಾರ ರಚಿಸಬಹುದು ಎಂದು ಹೇಳಿದೆ. ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ. ಅದಕ್ಕೂ ಮೊದಲು ಎನ್ಡಿಎ ಸರ್ಕಾರದಲ್ಲಿರುವ ಶಿವಸೇನಾದ ಏಕೈಕ ಕೇಂದ್ರ ಸಚಿವ ಅರವಿಂದ್ ಸಾವಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು. ಮೈತ್ರಿ ಮುರಿದುಕೊಂಡಿರುವುದು ಖಾತರಿಯಾದ ಬಳಿಕವೇ ಎನ್ಸಿಪಿ ಮೈತ್ರಿಗೆ ಕೈಜೋಡಿಸಲಿದೆ ಎಂದು ಖಡಕ್ಕಾಗಿ ಹೇಳಿದೆ ಎನ್ನಲಾಗಿದೆ.
ಅಹ್ಮದ್ ಪಟೇಲ್-ಗಡ್ಕರಿ ಭೇಟಿ
ಮಹಾರಾಷ್ಟ್ರದಲ್ಲಿನ ಈ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್, ಬುಧವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಆದರೆ ಈ ಭೇಟಿ ವೇಳೆ ಮಹಾರಾಷ್ಟ್ರ ರಾಜಕಾರಣದ ಒಂದೇ ಒಂದು ಸಂಗತಿಯನ್ನೂ ಚರ್ಚಿಸಿಲ್ಲ ಎಂದು ಅಹ್ಮದ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ನಿತಿನ್ ಗಡ್ಕರಿ ಅವರಿಗೂ ಮಹಾರಾಷ್ಟ್ರ ರಾಜಕಾರಣಕ್ಕೂ ಸಂಬಂಧವಿಲ್ಲ. ನಾನು ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.