ಕಿಂಗ್ ಮೇಕರ್ ಪವಾರ್ ಯೋಜನೆ, ದಲಿತರ ಮತಬ್ಯಾಂಕ್ ಸೇಫ್!
ಮುಂಬೈ, ಜನವರಿ 24: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಎನ್ಸಿಪಿ ಮುಖ್ಯಸ್ಥ ಕಿಂಗ್ ಮೇಕರ್ ಶರದ್ ಪವಾರ್ ಈಗೇನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ದಲಿತರ ಮತ ಬ್ಯಾಂಕ್ ಭದ್ರಪಡಿಸಲು ಯೋಜನೆ ರೂಪಿಸುವುದರಲ್ಲಿ ಪವಾರ್ ನಿರತರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸುಮಾರು 1.5 ಕೋಟಿ ದಲಿತರಿದ್ದು, ಎನ್ಸಿಪಿ-ಕಾಂಗ್ರೆಸ್ ಕಡೆ ಒಲವು ಕಡಿಮೆಯಾಗಿದ್ದರಿಂದ 288ರಲ್ಲಿ 31ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿತ್ತು. ದಲಿತರು ಒಟ್ಟಾರೆ 50 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಹೀಗಾಗಿ, ದಲಿತರಿಗೆ ಪ್ರಾಮುಖ್ಯತೆ ನೀಡಲು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಗಮನವನ್ನು ಸಮಾಜದ ಶೋಷಿತ, ದಮನಿತ 12 ಕೋಟಿ ಜನತೆ ಮೇಲೆ ಇರಿಸುವಂತೆ ಮಾಡಿದ್ದಾರೆ.
ವಸತಿ ಸಚಿವ ಜಿತೇಂದ್ರ ಅವಧ್ ಅವರು ಇತ್ತೀಚೆಗೆ ಪ್ರಮುಖ ನಿರ್ಣಯವನ್ನು ಪ್ರಕಟಿಸಿದ್ದು, ಅಂಬೇಡ್ಕರ್ ವಾದಿ, ಜಾನಪದ ಕವಿ, ಸಾಮಾರ್ಜಿಕ ಕಾರ್ಯಕರ್ತ ಅನ್ನಬಾವ್ ಸಾಥೆ ಸ್ಮಾರಕವನ್ನು ಚಿರಾಗ್ ನಗರದಲ್ಲಿ ನಿರ್ಮಿಸಲಾಗುತ್ತದೆ. ವಿಶ್ವ ಖ್ಯಾತ ಕಾದಂಬರಿ ಫಕೀರಾ ಸೇರಿದಂತೆ 35 ಕಾದಂಬರಿಗಳನ್ನು ಹೊರತರಲಾಗಿದೆ.
ವಿವಿಧ ಯೋಜನೆಗಳಿಗೆ ಚಾಲನೆ
ದಲಿತ ಹಾಗೂ ಸಾಮಾಜಿಕ ನಾಯಕರಿಗೆ ಸಂಬಂಧಿಸಿದ ಪ್ರದೇಶಗಳ ಅಭಿವೃದ್ಧಿ, ದಾದರ್ ನ ಇಂದು ಮಿಲ್ಸ್ ನಲ್ಲಿ ಅಂಬೇಡ್ಕರ್ ಸ್ಮಾರಕ ಸ್ಥಾಪನೆಗಾಗಿ ನೀಡಿದ್ದ ಅನುದಾನ ಮೊತ್ತವನ್ನು 700 ಕೋಟಿ ರು ನಿಂದ 1100 ಕೋಟಿ ರು ಗೇರಿಸಿ ಡಿಸಿಎಂ ಅಜಿತ್ ಪವಾರ್ ಅವರು ಪ್ರಮುಖ ಘೋಷಣೆಯನ್ನು ಪ್ರಕಟಿಸಿದರು. ಅಂಬೇಡ್ಕರ್ ಅವರ 100 X 350 ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ನಂತರ ದೇಶದ ಎರಡನೇ ದೊಡ್ಡ ಪ್ರತಿಮೆ ಎನಿಸಲಿದೆ.
ಭೀಮಾ ಕೊರಂಗಾವ್ ಪ್ರಕರಣ
ಭೀಮಾ ಕೊರಂಗಾವ್ ಪ್ರಕರಣ: ಕಳೆದ ತಿಂಗಳು ಭೀಮಾ ಕೊರಂಗಾವ್ ಘಟನೆಯ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಅಜಿತ್ ಪವಾರ್ ಅವರು ಈ ಪ್ರಕರಣದಲ್ಲಿ ದಲಿತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
ಏಪ್ರಿಲ್ -ಮೇ 2019ರಲ್ಲಿ ಅಜಿತ್ ಪವಾರ್ ಅವರು ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ದಲಿತರು ಕಡೆಗಣಿಸಿದ್ದರಿಂದ ಎನ್ಸಿಪಿ 8 ಸ್ಥಾನಗಳನ್ನು ಅತಿ ಕಡಿಮೆ ಅಂತರದಿಂದ ಕಳೆದುಕೊಂಡಿತ್ತು. ದಲಿತರ ವೋಟುಗಳು ಡಾ. ಅಂಬೇಡ್ಕರ್ ಮರಿ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾಡಿ ಪಾಲಾಗಿತ್ತು. ವಿಬಿಎಗೆ 41 ಲಕ್ಷ ದಲಿತ ಮತಗಳು ಸಿಕ್ಕಿತ್ತು. ಕಾಂಗ್ರೆಸ್- ಎನ್ಸಿಪಿ ನಡುವೆ ಮತ ವಿಭಜನೆಯಾಗಿ 8 ಸ್ಥಾನಗಳು ಬಿಜೆಪಿಗೆ ಉಡುಗೊರೆಯಾಗಿ ಸಿಕ್ಕಿತ್ತು.
ಎನ್ಸಿಪಿ ವಕ್ತಾರ ಸಂಜಯ್ ತತ್ಕರೆ ಮಾತನಾಡಿ
ಎನ್ಸಿಪಿ ವಕ್ತಾರ ಸಂಜಯ್ ತತ್ಕರೆ ಮಾತನಾಡಿ, ಅನಾವುಯಾವುದೇ ಸಮುದಾಯವನ್ನು ಮತಬ್ಯಾಂಕ್ ಎಂದು ಪರಿಗಣಿಸುವುದಿಲ್ಲ. ಆದರೆ, ಸಮಾಜದಲ್ಲಿ ಯಾವ ಸಮುದಾಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬುದನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು, ದಲಿತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೆ ಸಾಮಾಜಿಕ ನ್ಯಾಯವನ್ನು ಸಲ್ಲಿಸಲಾಗುವುದು, ಸಮುದಾಯಗಳ ನಡುವಿನ ಅಂತರವನ್ನು ತೊಡೆದು ಹಾಕಲಾಗುವುದು ಎಂದಿದ್ದಾರೆ.
ಮರಾಠಾ, ಮುಸ್ಲಿಂ ಹಾಗೂ ದಲಿತ ಸಮುದಾಯಕ್ಕೆ ಆದ್ಯತೆ
ಮರಾಠಾ, ಮುಸ್ಲಿಂ ಹಾಗೂ ದಲಿತ ಸಮುದಾಯಕ್ಕೆ ಆದ್ಯತೆ ನೀಡುವುದು ಎನ್ಸಿಪಿಯ ಗುರಿಯಾಗಿದೆ. ಕಳೆದ ಚುನಾವಣೆಯಲ್ಲಿ ಮರಾಠ, ಮುಸ್ಲಿಂ ಸಮುದಾಯದವರು ಕೈ ಹಿಡಿದರೂ ದಲಿತರು ಎನ್ಸಿಪಿ ಕೈಬಿಟ್ಟಿದ್ದರು. ಪವಾರ್ ಅವರ ಆದ್ಯತೆಯಿಂದ ಸಾಮಾಜಿಕ ಕಾರ್ಯಕ್ರಮಗಳು ಹೆಚ್ಚಾಗಲಿವೆ ಎಂದು ರಾಜಕೀಯ ತಜ್ಞ ಪ್ರತಾಪ್ ಅಸಾಬೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.