ಅಂಬಾನಿಗೆ ಬಾಂಬ್ ಬೆದರಿಕೆ: ಇನ್ನೂ ಇಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಸಚಿನ್ ವಾಜೆ
ಮುಂಬೈ, ಏಪ್ರಿಲ್ 14: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ರೋಚಕ ಸಂಗತಿಗಳನ್ನು ಹೊರಗೆಡವುತ್ತಿದೆ. ಸ್ಫೋಟಕ ಇರಿಸಲು ಬಳಸಿಕೊಳ್ಳಲಾಗಿದ್ದ ಎಸ್ಯುವಿ ಮಾಲೀಕ ಮನ್ಸುಖ್ ಹಿರೇನ್ ಅವರ ಕೊಲೆಯ ಪ್ರಕರಣವನ್ನು ಕೂಡ ತನಿಖೆ ನಡೆಸುತ್ತೊರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಇನ್ನೂ ಎರಡು ಕೊಲೆಗಳನ್ನು ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿಸಿದೆ.
ಸಚಿನ್ ವಾಜೆಯ ನಿವಾಸದಲ್ಲಿ ಪಾಸ್ಪೋರ್ಟ್ ಒಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎನ್ಐಎ ಈ ಪ್ರಕರಣವನ್ನು 'ಎನ್ಕೌಂಟರ್ ಆಯಾಮ'ದಿಂದ ನೋಡುತ್ತಿದೆ. ಆಂಟಲಿಯಾ ನಿವಾಸದ ಎದುರಿನ ಬಾಂಬ್ ಬೆದರಿಕೆ ಪ್ರಕರಣಕ್ಕೆ ಈ ಪಾಸ್ಪೋರ್ಟ್ ಮಹತ್ವದ ಸುಳಿವುಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಬಾಂಬ್ ಬೆದರಿಕೆ: ಸಚಿನ್ ವಾಜೆಗೆ ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ
ಪಾಸ್ಪೋರ್ಟ್ ಬಳಕೆದಾರ ವ್ಯಕ್ತಿ ಹಾಗೂ ಆತನೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಲು ಸಚಿನ್ ವಾಜೆ ಬಯಸಿದ್ದರು. ಈ ಮೂಲಕ ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಸ್ಫೋಟಕಗಳನ್ನು ಇರಿಸಿ ಬಾಂಬ್ ಬೆದರಿಕೆ ಹಾಕಿದ ಅಪರಾಧಗಳನ್ನು ಅವರ ತಲೆಗೆ ಕಟ್ಟಲು ಉದ್ದೇಶಿಸಿದ್ದರು ಎಂದು ಎನ್ಐಎ ಆರೋಪಿಸಿದೆ.
ಮೂಲ ಯೋಜನೆ ಪ್ರಕಾರ ಮನ್ಸುಖ್ ಹಿರೇನ್ ಹತ್ಯೆ ಅಲ್ಲದೆ ಸಚಿನ್ ವಾಜೆ, ಇನ್ನಿಬ್ಬರನ್ನು ಮುಗಿಸಿಬಿಡಲು ಸಂಚು ರೂಪಿಸಿದ್ದರು. ಸ್ಫೋಟಕ ಪತ್ತೆಯಾದ ಫೆ. 25ರಂದೇ ಇಬ್ಬರನ್ನು ಹತ್ಯೆ ಮಾಡಿ ಪ್ರಕರಣವನ್ನು 'ಬಗೆಹರಿಸಲಾಗಿದೆ' ಎಂದು ಹೇಳಿಕೊಳ್ಳಲು ವಾಜೆ ಉದ್ದೇಶಿಸಿದ್ದರು. ಮಾರ್ಚ್ 17ರಂದು ನಡೆಸಿದ ಪರಿಶೀಲನೆ ವೇಳೆ ಸಚಿನ್ ವಾಜೆ ಮನೆಯಲ್ಲಿ ಒಂದು ಪಾಸ್ಪೋರ್ಟ್ ಪತ್ತೆಯಾಗಿತ್ತು.
ಔರಂಗಾಬಾದ್ನಿಂದ ಕಳವು ಮಾಡಲಾದ ಮಾರುತಿ ಈಕೊ ಕಾರ್ ಒಂದನ್ನು ಇಬ್ಬರು ವ್ಯಕ್ತಿಗಳು ತಂದು, ಮುಕೇಶ್ ಅಂಬಾನಿ ಅವರ ಮನೆ ಮುಂದೆ ಸ್ಫೋಟಕವಿರಿಸಿ ನಿಲ್ಲಿಸಬೇಕಿತ್ತು. ಆದರೆ ಅದೃಷ್ಟ ಕೈಕೊಟ್ಟಿದ್ದರಿಂದ ವಾಜೆಯ ಈ ಯೋಜನೆ ಫಲಿಸಲಿಲ್ಲ. ಹೀಗಾಗಿ ಪ್ಲ್ಯಾನ್ ಬಿ ಜಾರಿಗೆ ತಂದ ವಾಜೆ, ಮನ್ಸುಖ್ ಹಿರೇನ್ ಬಳಸುತ್ತಿದ್ದ ಕಾರನ್ನು ಈ ಸಂಚಿಗೆ ಉಪಯೋಗಿಸಿಕೊಂಡರು. ಮಾರುತಿ ಈಕೋ ಕಾರ್ನ ನಂಬರ್ ಪ್ಲೇಟ್ ಮಿಥಿ ನದಿಯಲ್ಲಿ ಪತ್ತೆಯಾಗಿತ್ತು.
ಭ್ರಷ್ಟಾಚಾರ ಪ್ರಕರಣ: ಸಿಬಿಐನಿಂದ ಅನಿಲ್ ದೇಶ್ಮುಖ್ ಆಪ್ತ ಸಹಾಯಕರ ವಿಚಾರಣೆ
ಮನ್ಸುಖ್ ಹಿರೇನ್ ಕಾರನ್ನು ಬಳಸಿಕೊಂಡಿದ್ದರಿಂದ ಯೋಜನೆಯಂತೆಯೇ ಸಚಿನ್ ವಾಜೆ, ಎಟಿಎಸ್ ಪ್ರಕರಣ ಭೇದಿಸುವ ಮುನ್ನವೇ ಹಿರೇನ್ ಅವರನ್ನು ಮುಗಿಸಿಬಿಟ್ಟಿದ್ದರು. ವಾಜೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದರೂ ಯೋಜನೆಯನ್ನು ಅವರು ರೂಪಿಸಿದ್ದ ಬಗೆ ದುರ್ಬಲವಾಗಿತ್ತು ಎಂದು ಎನ್ಐಎ ತಿಳಿಸಿದೆ.
ಸಚಿನ್ ವಾಜೆ ಸ್ಕಾರ್ಪಿಯೋ ಕಾರಿನ ನೋಂದಣಿ ಸಂಖ್ಯೆ ಫಲಕಗಳನ್ನು ಬದಲಿಸಿದ್ದರು. ಅದರ ಚಾಸಿಸ್ ಸಂಖ್ಯೆಯನ್ನೂ ಕೆರೆದು ಅಳಿಸಲು ಪ್ರಯತ್ನಿಸಿದ್ದರು. ಆದರೆ ಕಾರಿನಲ್ಲಿದ್ದ ವಿಮಾ ಕಂಪೆನಿಯೊಂದರ ಸ್ಟಿಕ್ಕರ್, ಅದು ಹಿರೇನ್ ಅವರಿಗೆ ಸೇರಿದ್ದು ಎಂದು ಪತ್ತೆಹಚ್ಚಲು ಎಟಿಎಸ್ಗೆ ಸಹಾಯ ಮಾಡಿತ್ತು. ಹೀಗಾಗಿ ವಾಜೆಯ ಯೋಜನೆ ಹಳಿತಪ್ಪಿತ್ತು.
ಬಾಂಬ್ ಬೆದರಿಕೆ ಹಾಕಿದ್ದವರನ್ನು ಎನ್ಕೌಂಟರ್ ಮಾಡುವ ಮೂಲಕ ಹೀರೋಗಳೆಂದು ಕರೆಸಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಆದರೂ ಮನ್ಸುಖ್ ಹಿರೇನ್ ಅವರ ಕತ್ತು ಹಿಸುಕಿ ಹತ್ಯೆ ಮಾಡಿದವರು ಯಾರು ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ. ಸಚಿನ್ ವಾಜೆ ಮತ್ತು ಇತರೆ ಕೆಲವು ಹಿರಿಯ ಅಧಿಕಾರಿಗಳ ಮೇಲೆ ಎನ್ಐಎ ಅನುಮಾನ ಹೊಂದಿದೆ. ಇದುವರೆಗೂ ಅದಕ್ಕೆ ಸೂಕ್ತ ಪುರಾವೆ ದೊರಕಿಲ್ಲ.