ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣನ ಆರ್ಭಟಕ್ಕೆ ಮುಂಬೈ ತತ್ತರ, ಸೇತುವೆ ಕುಸಿದು 6 ಜನರಿಗೆ ಗಾಯ

By Sachhidananda Acharya
|
Google Oneindia Kannada News

ಮುಂಬೈ, ಜುಲೈ 3: ಮಾಯಾನಗರಿ ಮುಂಬೈನಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ರೈಲು, ರಸ್ತೆ ಸೇರಿದಂತೆ ಸಂಚಾರ ಮಾರ್ಗಗಳು ಬಂದ್ ಆಗಿದ್ದು, ಇಡೀ ಮಹಾನಗರವೇ ಸ್ಥಬ್ಧಗೊಂಡಿದೆ.

ಮಳೆಯಿಂದಾಗಿ ಉಪನಗರ ಅಂಧೇರಿಯಲ್ಲಿ ರೈಲ್ವೇ ಮೇಲ್ಸೇತುವೆ ಕುಸಿದು ಆರು ಜನರು ಗಾಯಗೊಂಡಿದ್ದಾರೆ. ಸೇತುವೆಯಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಸೇತುವೆ ಕುಸಿತದಿಂದ ಅಂಧೇರಿ ಸ್ಥಳೀಯ ರೈಲ್ವೇ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಭಾರೀ ಮಳೆಗೆ ಮುಂಬೈನ ಅಂಧೇರಿಯಲ್ಲಿ ಸೇತುವೆ ಕುಸಿತಭಾರೀ ಮಳೆಗೆ ಮುಂಬೈನ ಅಂಧೇರಿಯಲ್ಲಿ ಸೇತುವೆ ಕುಸಿತ

ರೈಲ್ವೇ ಸೇವೆ ಸ್ಥಗಿತದಿಂದಾಗಿ ರೈಲನ್ನೇ ನೆಚ್ಚಿಕೊಂಡಿದ್ದ ದಿನ ನಿತ್ಯ ಕಚೇರಿಗೆ ತೆರಳುವ ಸಿಬ್ಬಂದಿಗಳು ಇಂದು ಕೆಲಸದ ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ. ಇದಲ್ಲದೆ ಆಹಾರ ಸರಬರಾಜು ಮಾಡುವ ಡಬ್ಬಾವಾಲಾಗಳಿಗೂ ಇಂದು ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ.

ಹೆಚ್ಚುವರಿ ಬಸ್ ಸೇವೆ

ಹೆಚ್ಚುವರಿ ಬಸ್ ಸೇವೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮುಂಬೈ ಪೊಲೀಸ್ ಕಮಿಷನರ್ ಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಬಸ್ ಸೇವೆಯನ್ನು ಹೆಚ್ಚಿಸಲು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೋರೇಶನ್ (ಬಿಎಂಸಿ) ಗೆ ಸೂಚನೆ ನೀಡಿದ್ದಾರೆ.

"7.30 ರ ವೇಳೆಗೆ ಅಂಧೇರಿ ರೈಲು ನಿಲ್ದಾಣದ ಮೇಲ್ಸೇತುವೆ ಕುಸಿದಿರುವ ಪರಿಣಾಮ ರೈಲ್ವೇ ಸೇವೆ ಸ್ಥಗಿತಗೊಂಡಿದೆ. ರೈಲ್ವೇ ಸೇವೆಗಳನ್ನು ಪುನಃಸ್ಥಾಪಿಸಲು ಎಂಜಿನಿಯರ್ ಗಳ ತಂಡ ಸತತ ಪ್ರಯತ್ನ ನಡೆಸುತ್ತಿದೆ," ಎಂದು ಪಶ್ಚಿಮ ರೈಲ್ವೇ (ಡಬ್ಲ್ಯೂಆರ್) ಸಾರ್ವಜನಿಕ ಸಂಪರ್ಕಾಧಿಕಾರಿ ರವೀಂದ್ರ ಭಕರ್ ಪಿಟಿಐಗೆ ತಿಳಿಸಿದ್ದಾರೆ.

ತಪ್ಪಿದ ದುರಂತ

ತಪ್ಪಿದ ದುರಂತ

ಮೇಲ್ಸೇತುವೆ ಮಳೆಯಿಂದಾಗಿ ಕುಸಿಯುವ ವೇಳೆ ಯಾವುದೇ ರೈಲು ಅದರ ಅಡಿಯಲ್ಲಿ ಸಂಚರಿಸುತ್ತಿರಲಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಸೇತುವೆ ಕುಸಿದ ಅವಶೇಷಗಳನ್ನು ತೆರವು ಮಾಡುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಮುಂಬೈ ಪೊಲೀಸರು, ರೈಲ್ವೇ ಪೊಲೀಸರು ಮತ್ತು ಬಿಎಂಸಿಯ ಲೋಕಲ್ ವಾರ್ಡ್ ನ ಸಿಬ್ಬಂದಿಗಳು ನಿರತರಾಗಿದ್ದಾರೆ.

ಇದರ ಅವಶೇಷಗಳಡಿಯಲ್ಲಿ ಜನರು ಸಿಲುಕಿಕೊಂಡಿರಬಹುದು ಎಂದುಕೊಳ್ಳಲಾಗಿದ್ದು, ಆ್ಯಂಬುಲೆನ್ಸ್, ರಕ್ಷಣಾ ವಾಹನ, ನಾಲ್ಕು ಅಗ್ನಿ ಶಾಮಕ ವಾಹನಗಳನ್ನು ಸ್ಥಳದಲ್ಲಿ ಸಿದ್ಧವಾಗಿಟ್ಟುಕೊಳ್ಳಲಾಗಿದೆ.

ರೈಲ್ವೇ ಸೇವೆಗೆ ಮಳೆ ಹೊಡೆತ

ರೈಲ್ವೇ ಸೇವೆಗೆ ಮಳೆ ಹೊಡೆತ

ಬಂದರು ಕಾರಿಡಾರ್ ನಲ್ಲಿ ಬರುವ ಕೇಂದ್ರ ರೈಲ್ವೇ ಸೇವೆಯೂ ಮಳೆಯಿಂದಾಗಿ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಹಲವು ಕಡೆಗಳಲ್ಲಿ ಹಳಿಗಳ ಮೇಲೆ ನೀರು ನಿಂತುಕೊಂಡಿದ್ದೂ ರೈಲ್ವೇ ಸೇವೆ ಸ್ಥಗಿತಗೊಳ್ಳಲು ಕಾರಣವಾಗಿದೆ.

ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳ ಮೇಲೆಯೂ ನೀರು ನಿಂತಿದೆ. ಇದು ವಾಹನ ಸಂಚಾರಕ್ಕೆ ತೊಡಕ್ಕಾಗಿ ಪರಿಣಮಿಸಿದೆ.

ಇಂದು, ನಾಳೆ ಭಾರೀ ಮಳೆ ಸಂಭವ

ಇಂದು, ನಾಳೆ ಭಾರೀ ಮಳೆ ಸಂಭವ

ಥಾಣೆಯಲ್ಲಿ ಇಂದು ಬೆಳಿಗ್ಗೆ 8.30ರಿಂದ ಇಲ್ಲಿಯವರೆಗೆ ಬರೋಬ್ಬರಿ 58.30 ಮಿಲಿಮೀಟರ್ ಮಳೆ ಸುರಿದಿದೆ.

ಇದೇ ರೀತಿ ಮುಂಬೈ ಮತ್ತು ಥಾಣೆಯಲ್ಲಿ ಮಂಗಳವಾರ ಮತ್ತು ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾರಪೂರ್ತಿ ಮಳೆ ಬೀಳಲಿದೆ, ಬುಧವಾರದವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

English summary
A road overbridge (ROB) collapsed on rail tracks in suburban Andheri amid heavy rains in the city this morning bringing local train services of the Western Railway to a halt, an official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X