ಬಂಧನದ ವೇಳೆ ಪೊಲೀಸರಿಂದ ಹಿಂಸೆ: ಅರ್ನಬ್ ಗೋಸ್ವಾಮಿ ಆರೋಪ
ಮುಂಬೈ, ನವೆಂಬರ್ 7: ಆತ್ಮಹತ್ಯೆಗೆ ಪ್ರಚೋದನೆ ನೀಡಿದ 2018ರ ಪ್ರಕರಣದಲ್ಲಿ ಇತರೆ ಇಬ್ಬರು ಆರೋಪಿಗಳೊಂದಿಗೆ ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವ್ ಸಂಪಾದಕ ಅರ್ನಬ್ ಗೋಸ್ವಾಮಿ, ತಮ್ಮ ಜಾಮೀನು ಅರ್ಜಿಯಲ್ಲಿ ಮುಂಬೈ ಪೊಲೀಸರು ತಮಗೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅರ್ನಬ್ ಗೋಸ್ವಾಮಿ ಅವರ ಪರ ವಕೀಲ ಹರೀಶ್ ಸಾಳ್ವೆ ಅವರು ಬಾಂಬೆ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂಎಸ್ ಕಾರ್ನಿಕ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.
ತಮ್ಮನ್ನು ಬಂಧಿಸುವ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮನ್ನು ಭಾರವಾದ ಬೂಟ್ನಿಂದ ಒದ್ದಿದ್ದಾರೆ. ಎಡಗೈ ಮೇಲೆ ಅರ್ಧ ಅಡಿಯಷ್ಟು ಉದ್ದ ಆಳವಾದ ಹೊಡೆತ ಬಿದ್ದಿದೆ. ಜತೆಗೆ ತಮ್ಮ ಬೆನ್ನುಹುರಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ಜಾಮೀನು ಅರ್ಜಿಯಲ್ಲಿ ಆರೋಪ ಮಾಡಿದ್ದಾರೆ.

ತಮ್ಮನ್ನು ಸುತ್ತುವರಿದಿದ್ದ ಪೊಲೀಸ್ ಅಧಿಕಾರಿಗಳು ದ್ರವವೊಂದನ್ನು ಬಲವಂತವಾಗಿ ಕುಡಿಸಿದರು. ಅದನ್ನು ಕುಡಿದ ಬಳಿಕ ತಾವು ಅಸ್ವಸ್ಥರಾಗಿದ್ದಾಗಿ ಕೂಡ ದೂರಿದ್ದಾರೆ.
ಅನ್ವಯ್ ನಾಯ್ಕ್ ಎಂಬ ಒಳಾಂಗಣ ವಿನ್ಯಾಸಕಾರ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯ ಕಚೇರಿ ವಿನ್ಯಾಸಕ್ಕೆ ಮಾಡಿದ ಕೆಲಸಕ್ಕೆ 83 ಲಕ್ಷ ರೂ ಸೇರಿದಂತೆ ಮೂವರಿಂದ 5.40 ಕೋಟಿ ರೂ ಬಾಕಿ ಇತ್ತು ಎಂದು ಅವರು ಡೆತ್ ನೋಟ್ನಲ್ಲಿ ಬರೆದಿದ್ದರು. ಈ ಪ್ರಕರಣವನ್ನು ಕಳೆದ ವರ್ಷ ಪೊಲೀಸರು ಅಂತ್ಯಗೊಳಿಸಿದ್ದರೂ, ಅನ್ವಯ್ ನಾಯ್ಕ್ ಮಗಳು ಮತ್ತು ಪತ್ನಿಯ ಮನವಿ ಮೇರೆಗೆ ಮೇ ತಿಂಗಳಲ್ಲಿ ಪ್ರಕರಣವನ್ನು ಮರು ತನಿಖೆಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿಸಿತ್ತು.












Click it and Unblock the Notifications