'ಹನಿಮೂನ್ ವೇಳೆ ಸೆಕ್ಸ್ ನಿರಾಕರಣೆ ಕ್ರೌರ್ಯವಲ್ಲ'
ಮುಂಬೈ, ಮಾ.9: ಹನಿಮೂನ್ ವೇಳೆಯಲ್ಲಿ ನಿಮ್ಮ ಸಂಗಾತಿ ಸಂಭೋಗಕ್ಕೆ ನಿರಾಕರಿಸುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದಂಪತಿಗಳ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬದಿಗೊತ್ತಿ ಈ ನಿರ್ಣಯವನ್ನು ಬಾಂಬೆ ಹೈಕೋರ್ಟ್ ನೀಡಿದೆ. ಅಷ್ಟೇ ಅಲ್ಲ, ಪತ್ನಿ ಒಮ್ಮೊಮ್ಮೆ ತನ್ನ ಕಚೇರಿಗೆ ಪ್ಯಾಂಟು, ಶರ್ಟು ತೊಟ್ಟು ಹೋಗುವುದಾಗಲೀ, ಅಥವಾ ಕಚೇರಿ ಕಾರ್ಯ ನಿಮಿತ್ತ ಬೇರೆ ಊರಿಗೆ ಪ್ರಯಾಣ ಮಾಡುವುದಾಗಲೀ ಯಾವುದು ಕ್ರೌರ್ಯ ಎನಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ದಂಪತಿಗಳ ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಉಚ್ಚನ್ಯಾಯಪೀಠದ ನ್ಯಾ. ವಿ.ಕೆ. ತಾಹಿಲ್ ರಮಣಿ ಮತ್ತು ನ್ಯಾ ಪಿ.ಎನ್. ದೇಶಮುಖ್ ಅವರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಗಂಡ ನೀಡಿದ ದೂರಿನ ಮೇರೆಗೆ 29 ವರ್ಷದ ಮಹಿಳೆ ವಿರುದ್ಧ ವಿಚ್ಛೇದನಕ್ಕೆ ಅನುಮತಿ ನೀಡಿದ್ದ ಕೆಳಗಿನ ಫ್ಯಾಮಿಲಿ ಕೋರ್ಟ್ ಆದೇಶವನ್ನು ಬಾಂಬೆ ಹೈಕೋರ್ಟ್ ತಳ್ಳಿಹಾಕಿದೆ. ಗಂಡ ಮತ್ತು ಹೆಂಡತಿ ಒಟ್ಟಿಗೆ ಬಾಳಲು ಸಾಕಷ್ಟು ಸಮಯಾವಕಾಶ ನೀಡದೇ ಬಹಳ ಬೇಗ ವಿಚ್ಛೇದನದ ತೀರ್ಮಾನಕ್ಕೆ ಬರುವುದು ಸಮಂಜಸವಲ್ಲ ಎಂದೂ ಕೂಡಾ ನ್ಯಾಯಾಲಯ ತಿಳಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2009ರಲ್ಲಿ ಮದುವೆಯಾದ ನವದಂಪತಿ ಮಧುಚಂದ್ರಕ್ಕಾಗಿ ಮಹಾಬಲೇಶ್ವರ ತಾಣಕ್ಕೆ ಹೋಗಿದ್ದರು. ಆಗ, ಗಂಡ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ಆದರೆ, ಪತ್ನಿ ಅದಕ್ಕೊಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಗಂಡ ಪ್ರಕರಣವನ್ನು ಕೋರ್ಟ್'ಗೆ ಎಳೆದ. ತನಗೆ ಸೆಕ್ಸ್ ನಿರಾಕರಿಸಿದ ಹೆಂಡತಿ ಮಾಡಿದ್ದು ಕ್ರೌರ್ಯದ ಕೆಲಸ ಎಂದು ವಾದಿಸಿದ.
ಮಹಿಳೆಯ ವಕೀಲರ ಪ್ರಕಾರ, ಹನಿಮೂನ್ ವೇಳೆ ಆಕೆ ಮೂರ್ನಾಲ್ಕು ದಿನ ಋತುಸ್ರಾವದಿಂದ ಬಾಧಿತಳಾಗಿದ್ದಳು. ಆಗಷ್ಟೇ ಆಕೆ ಗಂಡನೊಂದಿಗೆ ಸೆಕ್ಸ್ ಮಾಡಲು ಒಪ್ಪಲಿಲ್ಲವಂತೆ. ಹೀಗಾಗಿ, ಈಕೆ ಮಾಡಿದ್ದು ಸ್ವಲ್ಪವೂ ಕ್ರೌರ್ಯವಲ್ಲ. ಅಷ್ಟೇ ಅಲ್ಲ, ಆಕೆಯ ಪ್ರತಿಕ್ರಿಯೆ ತೀರಾ ಸಹಜವೇ ಆಗಿತ್ತು ಎಂದು ಮಹಿಳೆಯ ವಕೀಲರು ಮಾಡಿದ್ದ ವಾದವನ್ನ ಮುಂಬೈ ಹೈಕೋರ್ಟ್ ಪುರಸ್ಕರಿಸಿದೆ. ಈ ಮೂಲಕ ಡಿಸೆಂಬರ್ 2012ರಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನ ಮಂಜೂರು ಆದೇಶವನ್ನು ತಳ್ಳಿ ಹಾಕಿರುವ ಹೈಕೋರ್ಟ್ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಗಂಡನಿಗೆ ಒದಗಿಸಿದೆ.












Click it and Unblock the Notifications