ಮೊದಲು ಲಸಿಕೆ ನನಗೇ ನೀಡಿ: ಶುರುವಾಯ್ತು ರಾಜಕಾರಣಿಗಳ ಲಾಬಿ
ಮುಂಬೈ, ಡಿಸೆಂಬರ್ 1: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕ ಲಸಿಕೆಗಳು ಮಾರುಕಟ್ಟೆಗೆ ಬರಲು ಸಿದ್ಧತೆ ನಡೆಸಿವೆ. ಆದರೆ ಅವುಗಳು ಎಷ್ಟು ಪರಿಣಾಮಕಾರಿಯಾಗಬಲ್ಲವು ಎನ್ನುವುದು ಇನ್ನೂ ಖಾತರಿಯಾಗಿಲ್ಲ. ಆದರೆ ಈಗಲೇ ಅನೇಕ ರಾಜಕೀಯ ಮುಖಂಡರು ಲಸಿಕೆ ಪಡೆದುಕೊಳ್ಳಲು ನಾಮುಂದು ತಾಮುಂದು ಎಂದು ಆತುರ ತೋರಿಸುತ್ತಿದ್ದಾರೆ.
ಕೋವಿಡ್ ವಿರುದ್ಧ ಸುಮಾರು ಒಂದು ವರ್ಷದಿಂದ ಹೋರಾಡುತ್ತಿರು ಆರೋಗ್ಯ ಕಾರ್ಯಕರ್ತರಲ್ಲಿ ಅನೇಕರು ಸೋಂಕಿಗೆ ಬಲಿಯಾಗಿದ್ದಾರೆ. ಮೊದಲು ಅವರ ಆರೋಗ್ಯಕ್ಕೆ ಖಾತರಿ ಸಿಕ್ಕರೆ ಉಳಿದಂತೆ ಜನರ ರಕ್ಷಣೆ ಸಾಧ್ಯ ಎನ್ನುವುದು ಕೇಂದ್ರ ಸರ್ಕಾರದ ಹೇಳಿದೆ. ಉಳಿದಂತೆ ಹೆಚ್ಚು ಆರೋಗ್ಯ ಸಮಸ್ಯೆ ಉಳ್ಳವರನ್ನು ಕೂಡ ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಬಳಿಕ 65 ವರ್ಷದ ದಾಟಿದವರನ್ನು ಲಸಿಕೆ ನೀಡಲು ಪರಿಗಣಿಸಲಾಗುತ್ತದೆ. ಆದರೆ ರಾಜಕಾರಣಿಗಳು ಇಲ್ಲಿಯೂ ತಮ್ಮ ಲಾಬಿ ನಡೆಸಿದ್ದು, ಜನಸಾಮಾನ್ಯರಿಗೆ ಲಸಿಕೆ ದೂರದ ಮಾತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಸ್ವಯಂಸೇವಕನ ಆರೋಗ್ಯ ಕೆಡಲು ಲಸಿಕೆ ಕಾರಣವಲ್ಲ: ಸೆರಮ್
ಆರೋಗ್ಯ ಕಾರ್ಯಕರ್ತರು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಳ್ಳ ಜನರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಮಹಾರಾಷ್ಟ್ರದಲ್ಲಿ ಅನೇಕ ಪ್ರಭಾವಿ ರಾಜಕಾರಣಿಗಳು ಮತ್ತು ಹಿರಿಯಪೊಲೀಸ್ ಅಧಿಕಾರಿಗಳು ಲಸಿಕೆ ಪಡೆದುಕೊಳ್ಳುವ ಮುಂಚೂಣಿ ವ್ಯಕ್ತಿಗಳಲ್ಲಿ ಸೇರಿದ್ದಾರೆ. ಮುಂದೆ ಓದಿ.
ರಾಜಕಾರಣಿಗಳ ಒತ್ತಡ
ಲಸಿಕೆ ಬಳಕೆಯು ದೇಶದಲ್ಲಿ ಆರಂಭವಾದಾಗ ಯಾರಿಗೆ ಮೊದಲು ಲಸಿಕೆ ನೀಡಬೇಕು ಎಂಬ ಪಟ್ಟಿಯನ್ನು ಸಿದ್ಧಮಾಡುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಆದರೆ ಕೆಲವು ರಾಜಕಾರಣಿಗಳು ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರನ್ನು ಅದರಲ್ಲಿ ಸೇರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ನಿಂದ ಪಟ್ಟಿ ಸಿದ್ಧತೆ
ಲಸಿಕೆಯನ್ನು ಮೊದಲಿಗೆ ಪಡೆದುಕೊಳ್ಳಬೇಕಾದ ಮುಂಚೂಣಿ ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ವಿವರಗಳನ್ನು ಒಳಗೊಂಡ ಪಟ್ಟಿ ಸಿದ್ಧಪಡಿಸುವಂತೆ ಸೆಪ್ಟೆಂಬರ್ನಲ್ಲಿ ಮಹಾರಾಷ್ಟ್ರ ಸರ್ಕಾರ ಜಿಲ್ಲಾ ಮತ್ತು ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿತ್ತು.
ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?
ರಾಜಕಾರಣಿಗಳು ಈ ವ್ಯಾಪ್ತಿಯಲ್ಲಿಲ್ಲ
'ನಿಯಮಗಳ ಪ್ರಕಾರ ರಾಜಕಾರಣಿಗಳು 'ಮುಂಚೂಣಿ ಸಿಬ್ಬಂದಿ'ಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೆ ಅವರು ತಾವು ದಿನವೂ ಸಾಮಾನ್ಯ ಜನರನ್ನು ಭೇಟಿ ಮಾಡುತ್ತಿದ್ದು, ಅತ್ಯಧಿಕ ಅಪಾಯದ ಸ್ಥಿತಿಯಲ್ಲಿರುವುದರಿಂದ ತಾವು ಕೂಡ ಮುಂಚೂಣಿ ಸಿಬ್ಬಂದಿಯಾಗುತ್ತೇವೆ ಎಂದು ವಾದಿಸುತ್ತಿದ್ದಾರೆ. ಜತೆಗೆ ತಮ್ಮ ಕುಟುಂಬದವರನ್ನೂ ಆ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಡ ಹೇರುತ್ತಿದ್ದಾರೆ' ಎಂದು ಗ್ರೇಟರ್ ಮುಂಬೈ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರಿಂದಲೂ ಒತ್ತಡ
ಇದೇ ರೀತಿಯ ಒತ್ತಡಗಳು ನಾಗಪುರ ಮತ್ತು ಪುಣೆಯಲ್ಲಿಯೂ ನಡೆಯುತ್ತಿದೆ. 'ಈಗ ಎಂದಲ್ಲ, ಸೆರಮ್-ಆಕ್ಸ್ಫರ್ಡ್ ಸಂಸ್ಥೆಗಳ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುವಾಗಲೂ ನಮಗೆ ಅನೇಕ ಕರೆಗಳು ಬಂದಿವೆ. ರಾಜಕಾರಣಿಗಳು ಮಾತ್ರವಲ್ಲ, ಅನೇಕ ಹಿರಿಯ ಐಪಿಎಸ್ ಅಧಿಕಾರಿಗಳು ಸಹ ಪ್ರತಿಯೊಬ್ಬರಿಗಿಂತ ಮುನ್ನವೇ ಲಸಿಕೆ ಡೋಸ್ ಪಡೆದುಕೊಳ್ಳಲು ಮೂರನೇ ಹಂತದ ಪ್ರಯೋಗದ ಭಾಗವಾಗಲು ಬಯಸಿದ್ದರು' ಎಂದು ಪುಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.