'ಪವಾರ್, ಮಾಯಾವತಿ ಸ್ಪರ್ಧಿಸದಿರುವುದು ಎನ್ ಡಿಎ ಗೆಲುವಿನ ಸೂಚನೆ'
ಮುಂಬೈ, ಮಾರ್ಚ್ 22: ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಶರದ್ ಪವಾರ್ ಹಾಗೂ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಎನ್ ಡಿಎ ಖಚಿತ ಗೆಲುವಿನ ಸೂಚನೆ ಎಂದು ಶುಕ್ರವಾರ ಶಿವಸೇನೆ ಹೇಳಿದೆ.
ಇನ್ನು ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಎಸ್ ಪಿ- ಬಿಎಸ್ ಪಿ ಮೈತ್ರಿಯ ಲೆಕ್ಕಾಚಾರವನ್ನು ಹಾಳು ಮಾಡುತ್ತಾರೆ. ಏಕೆಂದರೆ ಅಲ್ಲಿ ಕಾಂಗ್ರೆಸ್ ಹಾಗೂ ಮಾಯಾವತಿ ಅವರು ವೋಟ್ ಬ್ಯಾಂಕ್ ಒಂದೇ ಎಂದು ಹೇಳಲಾಗಿದೆ.
ಚುನಾವಣೆಗೆ ಸ್ಪರ್ಧಿಸದಿದ್ದರೇನಂತೆ, ಮಾಯಾವತಿ ಪ್ರಧಾನಿಯಾಗಬಹುದು!
ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಪವಾರ್ ಹಾಗೂ ಮಾಯಾವತಿ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ನರೇಂದ್ರ ಮೋದಿ ವಿಜಯಿಯಾಗಿ, ಮತ್ತೊಮ್ಮೆ ಪ್ರಧಾನಿ ಆಗಲು ದಾರಿ ಸುಗಮ ಆಗಿದೆ ಎಂಬುದರ ಮುನ್ಸೂಚನೆ ಎನ್ನಲಾಗಿದೆ.
ಶರದ್ ಪವಾರ್ ಜತೆ ಮಾಯಾವತಿ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಇದರ ಪ್ರಾಮುಖ್ಯ ಏನೆಂದರೆ, ಅವರಿಬ್ಬರೂ ಪ್ರಧಾನಿ ರೇಸಿನಿಂದ ಆಚೆ ಉಳಿದರು ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ. ತನ್ನ ಪಕ್ಷ ಬಿಎಸ್ ಪಿ ಪರವಾಗಿ ದೇಶದಾದ್ಯಂತ ಪ್ರಚಾರ ಮಾಡಬೇಕಿರುವುದರಿಂದ ಸ್ಪರ್ಧೆ ಮಾಡುತ್ತಿಲ್ಲ ಎಂದು ಮಾಯಾವತಿ ಈಗಾಗಲೇ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸ್ಪರ್ಧಿಸೋಲ್ಲ, ಮಾಯಾವತಿ ಅಚ್ಚರಿಯ ಹೇಳಿಕೆ!
ಆದರೆ, ಬಿಎಸ್ ಪಿ ಅಸ್ತಿತ್ವ ಇರುವುದು ಉತ್ತರಪ್ರದೇಶದಲ್ಲಿ ಮಾತ್ರ. ಆಕೆ ಸ್ಪರ್ಧೆ ಮಾಡುತ್ತಿಲ್ಲ ಅಂದರೆ ಹೋರಾಟದಿಂದ ಓಡಿಹೋಗುತ್ತಿದ್ದಾರೆ ಅಂತ ಅರ್ಥ. ಇದೇ ದಾರಿಯಲ್ಲೇ ಪವಾರ್ ಅವರು ಕೂಡ ತಪ್ಪಿಸಿಕೊಳ್ಳುವ ಬಗೆ ಕಂಡುಕೊಂಡಿದ್ದಾರೆ. ಶರದ್ ಪವಾರ್ ವಿಪಕ್ಷಗಳನ್ನೆಲ್ಲ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರದೇ ಕುಟುಂಬ ಮತ್ತು ಪಕ್ಷದ ಸದಸ್ಯರನ್ನು ಒಗ್ಗೂಡಿಸಲು ಆಗಿಲ್ಲ. ಆದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಮಾಯಾವತಿ ಅವರು ಬಿಜೆಪಿಗಿಂತ ಕಾಂಗ್ರೆಸ್ ಗೆ ಮುಖ್ಯವಾಗಿ ಹೆದರುತ್ತಾರೆ. ಆಕೆ ಸ್ಪರ್ಧೆ ಮಾಡದಿರುವುದಕ್ಕೆ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರುವುದೇ ಕಾರಣ. ಪವಾರ್, ಮಾಯಾವತಿ ಸ್ಪರ್ಧಿಸುತ್ತಿಲ್ಲ. ಆದ್ದರಿಂದ ಪ್ರಧಾನಿ ಹುದ್ದೆ ಕನಸು ಕಂಡ ಇಬ್ಬರು ಈಗ ಸ್ಪರ್ಧಿಗಳಾಗಿಲ್ಲ. ಇದರಿಂದ ಎನ್ ಡಿಎ ತಾಕತ್ತು ಗೊತ್ತಾಗುತ್ತದೆ ಎಂದು ಹೇಳಲಾಗಿದೆ.