ಬಿಜೆಪಿಯು ಮಹಾರಾಷ್ಟ್ರ ಸರ್ಕಾರವನ್ನು ಕೆಡವಲು ಪರಮ್ಸಿಂಗ್ ಬಳಕೆ ಮಾಡಿಕೊಳ್ಳುತ್ತಿದೆ : ಶಿವಸೇನಾ
ಮುಂಬೈ, ಮಾರ್ಚ್ 22: ಮಹಾರಾಷ್ಟ್ರ ಸರ್ಕಾರವನ್ನು ಕೆಡವಲು ಬಿಜೆಪಿಯು ಪರಮ್ಸಿಂಗ್ರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
ಕಳೆದ ವಾರವಷ್ಟೇ ಪರಮ್ಬೀರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಪತ್ರ ಬರೆದಿದ್ದರು. ಮಹಾರಾಷ್ಟ್ರಕ್ಕೆ ಸಂಖ್ಯಾಬಲವಿದೆ, ಒಬ್ಬ ಅಧಿಕಾರಿ ಮಾಡಿರುವ ಭ್ರಷ್ಟಾಚಾರ ಅರೋಪದಿಂದ ಸರ್ಕಾರ ಬೀಳುವುದಿಲ್ಲ ಎಂದು ಶಿವಸೇನೆ ಹೇಳಿದೆ.
ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆಯುಂಟಾಗಿರುವುದು ನಿಜ, ಆದರೆ ಇದರಿಂದ ಸರ್ಕಾರವೇ ಬೀಳಬಹುದು ಎಂದುಕೊಂಡರೆ ಅದು ತಪ್ಪು ಎಂದು ಸಾಮ್ನಾದಲ್ಲಿ ತಿಳಿಸಲಾಗಿದೆ.

ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ಬಹುಮತವನ್ನು ಹಾಳುಗೆಡವಲು ಪಯತ್ನಿಸಿದರೆ ಮಾತ್ರ ಬೆಂಕಿ ಕಾಣಿಸಿಕೊಳ್ಳಲಿದೆ. ಅನಿಲ್ ದೇಶ್ಮುಖ್ ಅವರು ಮುಂಬೈನ ಬಾರ್ ಹಾಗೂ ಹೋಟೆಲ್ ಗಳಿಂದ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸುವಂತೆ ಪೊಲೀಸರಿಗೆ ಸೂಚಿಸಿದ್ದರು ಎಂದು ಸಿಂಗ್ ಪತ್ರದಲ್ಲಿ ತಿಳಿಸಿದ್ದರು.
ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ ಎಂಬುದನ್ನು ಪ್ರತಿಪಾದಿಸುವ ಮೂಲಕ ಬಿಜೆಪಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಬಿಜೆಪಿ ಸಿಂಗ್ ಅವರನ್ನು ಬಳಸಿಕೊಳ್ಳುತ್ತಿದೆ.
ಈ ಮೊದಲು ಅಂಬಾನಿ ಪ್ರಕರಣದಲ್ಲೂ ಪರಮ್ ಸಿಂಗ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದ ಬಿಜೆಪಿಗೆ ಈಗ ಅವರೇ ಆಪ್ತರಾಗಿದ್ದಾರೆ ಎಂದು ಶಿವಸೇನೆ ಟೀಕಿಸಿದೆ.












Click it and Unblock the Notifications