ರಾಣೆಗೆ ಜಾಮೀನು; ನಮ್ಮ ಸಂದೇಶ ಸ್ಪಷ್ಟ ಹಾಗೂ ಗಟ್ಟಿ ಎಂದ ಠಾಕ್ರೆ ಸರ್ಕಾರ
ಮುಂಬೈ, ಆಗಸ್ಟ್ 25: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ 'ಕೆನ್ನೆಗೆ ಬಾರಿಸುತ್ತಿದ್ದೆ' ಎಂದು ಹೇಳಿ ವಿವಾದ ಸೃಷ್ಟಿಸಿ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆಗೆ ಮಂಗಳವಾರ ತಡರಾತ್ರಿ ಜಾಮೀನು ದೊರೆತಿದೆ.
ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಣೆ ವಿರುದ್ಧ ಮಂಗಳವಾರ ಎರಡು ಎಫ್ಐಆರ್ಗಳು ದಾಖಲಾಗಿದ್ದವು. ಎಫ್ಐಆರ್ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ಮಂಗಳವಾರ ಮಧ್ಯಾಹ್ನ್ 2.25ರ ವೇಳೆಗೆ ರಾಣೆ ಬಂಧಿಸಿದ್ದರು. ನಂತರ ತಡರಾತ್ರಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಏನಿದು ಪ್ರಕರಣ? ಮಂಗಳವಾರ ಬೆಳಿಗ್ಗೆಯಿಂದ ಮಹಾರಾಷ್ಟ್ರದಲ್ಲಿ ಈ ಸಂಬಂಧ ಏನು ರಾಜಕೀಯ ಬೆಳವಣಿಗೆಗಳಾದವು? ಮುಂದಿದೆ ವಿವರ...
ಠಾಕ್ರೆ ವಿರುದ್ಧ ಏನು ಹೇಳಿದ್ದರು ರಾಣೆ?
ಸೋಮವಾರ ರತ್ನಗಿರಿ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ, ಈಚೆಗೆ ಮೋದಿ ಸಂಪುಟ ಸೇರಿದ್ದ ರಾಣೆ, ಉದ್ಧವ್ ಠಾಕ್ರೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಠಾಕ್ರೆ ಆಗಸ್ಟ್ 15ರಂದು ರಾಜ್ಯದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷಗಳ ಲೆಕ್ಕವನ್ನೇ ಮರೆತಿದ್ದರು. ಮುಖ್ಯಮಂತ್ರಿಯಾದವರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣ ಸಮಯದಲ್ಲಿ, ಸ್ವಾತಂತ್ರ್ಯ ದೊರೆತು ಎಷ್ಟು ವರ್ಷವಾಯಿತು ಎಂಬುದರ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಆ ಸಮಯ ಆ ಸ್ಥಳದಲ್ಲಿದ್ದಿದ್ದರೆ ಅವರಿಗೆ ಸರಿಯಾಗಿ ಕೆನ್ನೆಗೆ ಬಾರಿಸುತ್ತಿದ್ದೆ' ಎಂದಿದ್ದರು.

ಶಿವಸೇನೆ ವ್ಯಾಪಕ ಟೀಕೆ: ಈ ಹೇಳಿಕೆಗೆ ಆಡಳಿತರೂಢ ಶಿವಸೇನೆಯಿಂದ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದವು. ಮುಂಬೈ ಹಾಗೂ ಇತರ ಸ್ಥಳಗಳಲ್ಲಿ ರಾಣೆ ವಿರುದ್ಧ ಹಲವು ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಬಾಲಠಾಕ್ರೆ ನೇತೃತ್ವದ ಪಕ್ಷದೊಂದಿಗೆ ಆರಂಭಿಕ ಅವಧಿಯಲ್ಲಿದ್ದ ನಾರಾಯಣ್ ರಾಣೆ, ಐದು ದಶಕಗಳ ಹಿಂದೆ ಚೆಂಬೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದುದನ್ನು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿತ್ತು.
ಎರಡು ಎಫ್ಐಆರ್ ದಾಖಲು: ರಾಣೆ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಪುಣೆ ಹಾಗೂ ನಾಸಿಕ್ನಲ್ಲಿ ದೂರು ದಾಖಲಿಸಲಾಗಿತ್ತು. ಶಿವಸೇನೆ ಸ್ಥಳೀಯ ಮುಖ್ಯಸ್ಥರ ದೂರಿನ ಮೇರೆಗೆ ನಾಸಿಕ್ ಸೈಬರ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಕೇಂದ್ರ ಸಚಿವರ ಬಂಧನಕ್ಕೆ ಪೊಲೀಸ್ ಕಮಿಷನರ್ ಆದೇಶಿಸಿ ಡಿಸಿಪಿ ಸಂಜಯ್ ಬಾರ್ಕುಂಡ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಯುವಸೇನೆಯ ದೂರಿನ ಮೇರೆಗೆ ಪುಣೆ ನಗರದ ಚತುರ್ ಶೃಂಗಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 153 ಹಾಗೂ 505ರ ಅಡಿಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿತ್ತು. ಆನಂತರ ರಾಣೆ ಬಂಧನವಾಗಿತ್ತು.

ಕಾನೂನು ಎಲ್ಲರಿಗಿಂತ ದೊಡ್ಡದು
ರಾಣೆಗೆ ಜಾಮೀನು ದೊರೆತ ನಂತರ ಮಹಾರಾಷ್ಟ್ರ ಸರ್ಕಾರ ಪ್ರತಿಕ್ರಿಯಿಸಿದ್ದು, 'ಕಾನೂನಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಸಂದೇಶ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ರಾಣೆ ಜಾಮೀನು ಪಡೆದರೂ ತೊಂದರೆಯಿಲ್ಲ. ಕೇಂದ್ರ ಸಚಿವರ ವಿರುದ್ಧ ಪ್ರಕರಣ ಮುಂದುವರೆಸುವ ಉದ್ದೇಶ ನಮಗಿಲ್ಲ. ನಮ್ಮ ಸಂದೇಶ ಗಟ್ಟಿ ಹಾಗೂ ಸ್ಪಷ್ಟವಾಗಿದೆ. ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರದ ಘನತೆ ಕಾಪಾಡುವುದು ನಮ್ಮ ಆದ್ಯತೆ' ಎಂದು ಹೇಳಿದೆ. ನಮ್ಮ ಕಡೆಯಿಂದ ಈ ಪ್ರಕರಣ ಅಂತ್ಯಗೊಂಡಿದೆ. ಅವರ ವಿರುದ್ಧ ಇನ್ನು ಯಾವುದೇ ಕ್ರಮ ಮುಂದುವರೆಯುವುದಿಲ್ಲ ಎಂದು ತಿಳಿಸಿದೆ.
ಶಿವಸೇನೆ-ಬಿಜೆಪಿ ಕಾರ್ಯಕರ್ತರ ಗಲಭೆ
ರಾಣೆಯವರನ್ನು ಮಹಾದ್ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ರಾಣೆ ಬಂಧನಕ್ಕೂ ಮೊದಲು ಕಾನೂನಿನ ಪ್ರಕ್ರಿಯೆ ಅನುಸರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ರಾಣೆ ಪರ ವಕೀಲ ಅನಿಕೇತ್ ವಾದಿಸಿದರು. ಕಸ್ಟಡಿ ವಿಚಾರಣೆ ಅಗತ್ಯವಿಲ್ಲದ ಪ್ರಕರಣಗಳಲ್ಲಿ ಯಾರನ್ನಾದರೂ ಬಂಧಿಸುವ ಮೊದಲು ಸಿಆರ್ಪಿಸಿ ಸೆಕ್ಷನ್ 41ಎ ಅಡಿ ನೋಟೀಸ್ ನೀಡಬೇಕು ಎಂದು ವಾದಿಸಿದ್ದರು.
ರಾಣೆ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡಸಿದ್ದರು. 'ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ತಾನಿರಬೇಕಾದ ಸ್ಥಳವನ್ನು ತೋರಿಸಿದೆ. ಇದು ಸತ್ಯಕ್ಕೆ ದೊರೆತ ಜಯ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದರು.

ಇದೇ ವೇಳೆ ಶಿವಸೇನೆ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪುಣೆಯ ಜೆಎಂ ರಸ್ತೆಯಲ್ಲಿ, ಅಮರಾವತಿಯಲ್ಲಿ ಸಣಸ್ಣಪುಟ್ಟ ಗಲಭೆಗಳು ನಡೆದಿವೆ. ಮುಂಬೈ ಹಾಗೂ ಇತರ ಸ್ಥಳಗಳಲ್ಲಿ ರಾಣೆ ವಿರುದ್ಧ ಹಲವು ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಬಾಲಠಾಕ್ರೆ ನೇತೃತ್ವದ ಪಕ್ಷದೊಂದಿಗೆ ಆರಂಭಿಕ ಅವಧಿಯಲ್ಲಿದ್ದ ನಾರಾಯಣ್ ರಾಣೆ, ಐದು ದಶಕಗಳ ಹಿಂದೆ ಚೆಂಬೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದುದನ್ನು ಪೋಸ್ಟರ್ನಲ್ಲಿ ಉಲ್ಲೇಖಿಸಿ 'ಕೋಳಿ ಕಳ್ಳ' ಎಂದು ಬರೆಯಲಾಗಿತ್ತು. ಇದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಸೆಪ್ಟೆಂಬರ್ 2ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್
ಎಫ್ಐಆರ್ ಸಂಬಂಧ ಸೆಪ್ಟೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ನಾಸಿಕ್ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications