ಮುಂಬೈ ಸಂಸದ ಕನ್ನಡಿಗ ಗೋಪಾಲ್ ಶೆಟ್ಟಿ ಸಂದರ್ಶನ

ಮುಂಬೈ ಮಹಾನಗರದ ಎಲ್ಲಾ ಆರು ಲೋಕಸಭಾ ಕ್ಷೇತ್ರವನ್ನು ಬಿಜೆಪಿ - ಶಿವಸೇನೆ ಗೆದ್ದುಕೊಂಡಿದೆ. ಆಡಳಿತ ವಿರೋದಿ ಮತ್ತು ನರೇಂದ್ರ ಮೋದಿ ಅಲೆಯೆದುರು ಕಾಂಗ್ರೆಸ್ - ಎನ್ಸಿಪಿ ಮೈತ್ರಿಕೂಟ ಧೂಳೀಪಟವಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಮುಂಬೈ ಮಹಾನಗರದ ವ್ಯಾಪ್ತಿಯಲ್ಲಿ ಬರುವ ಎರಡು ಕ್ಷೇತ್ರಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ರಾಜ್ ಠಾಕ್ರೆಯ ಎಂಎನ್ಎಸ್ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಆದಾಗ್ಯೂ, NDA ಮೈತ್ರಿಕೂಟದ ಈ ಸಾಧನೆ ಗಮನಾರ್ಹ.

ಮುಂಬೈ ಮಹಾನಗರದ ವಿಜೇತ ಸಂಸದರಲ್ಲಿ ಕನ್ನಡಿಗ ಗೋಪಾಲ ಶೆಟ್ಟಿ ಕೂಡಾ ಒಬ್ಬರು. ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಅವರನ್ನು 446,582 ಅಂತರದಿಂದ ಸೋಲಿಸಿ ಆಯ್ಕೆಯಾದ ಶೆಟ್ಟಿಯವರು ಮುಂಬೈ ಬೊರಿವಿಲಿ ಕ್ಷೇತ್ರದ ಹಾಲಿ ಶಾಸಕರು ಕೂಡಾ. ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ಮುಂಬೈಗೆ ಬಂದು ಎಷ್ಟು ವರ್ಷವಾಯಿತು? ನೀವು ಮುಂಬೈಗೆ ಬಂದಾಗ ನಿಮ್ಮ ಆಕಾಂಕ್ಷೆ ಏನಿತ್ತು?
ಶೆಟ್ಟಿ: ನಾನು ಮುಂಬೈಗೆ ಬಂದು 54 ವರ್ಷವಾಯಿತು. ಮುಂಬೈ ಬಂದಾಗ ಕಡುಬಡತನ ನನ್ನನ್ನು ಕಾಡುತ್ತಿತ್ತು. ತಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಕ್ಲರ್ಕ್ ಆಗಿದ್ದರು. ಇಲ್ಲಿಗೆ ಬಂದಾಗ ನನಗೆ ನೆಲೆಸಲು ಮನೆಯೂ ಇರಲಿಲ್ಲ. ತುಂಬಾ ಬಡ ಕುಟುಂಬದಿಂದ ಬಂದ ನಾನು ಇಂದು ಈ ಮಟ್ಟಕ್ಕೆ ಬೆಳೆಯ ಬೇಕಾದರೆ ನನ್ನಲ್ಲಿ ಇದ್ದ ಆತ್ಮಸ್ಥೈರ್ಯ ಕಾರಣ, ಹಾಗಾಗಿ ಜನರಿಗೂ ಹತ್ತಿರದವನಾದೆ.

ಪ್ರ: ನಿಮ್ಮ ಕುಟುಂಬದ ಹಿನ್ನೆಯ ಬಗ್ಗೆ?
ಶೆಟ್ಟಿ: ನಾನು ದಕ್ಷಿಣಕನ್ನಡದ ಮೂಲ್ಕಿ ಮೂಲದವನು. ನನಗೆ ನಾಲ್ಕು ಜನ ಸಹೋದರರು ಮತ್ತು ನಾಲ್ಕು ಸಹೋದರಿಯರು. ನನಗೆ ಕನ್ನಡ ಬರುತ್ತದೆ. ಕರ್ನಾಟಕದಲ್ಲಿನ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಈಗಲೂ ಸತತ ಸಂಪರ್ಕದಲ್ಲಿದ್ದೇನೆ. ನಮ್ಮದು ದೈವಭಕ್ತ ಕುಟುಂಬ. ತುಳುನಾಡಿನ ಧಾರ್ಮಿಕ ಸಂಪ್ರದಾಯದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ಬಂದಿರುವ ಕುಟುಂಬ ನಮ್ಮದು.

ಪ್ರ: ಶಿವಸೇನೆ, ಎಂಎನ್ಎಸ್ ಮುಂಬೈನಲ್ಲಿ ನೆಲೆಸಿರುವ ಇತರ ಭಾಷಿಗರ ವಿರುದ್ದ ಮಸಿಯುತ್ತಲೇ ಇರುತ್ತವೆಯಲ್ಲಾ?
ಶೆಟ್ಟಿ: ಇದು ಬರೀ ಮುಂಬೈಗೆ ಮಾತ್ರ ಸೀಮಿತವಲ್ಲ. ಎಲ್ಲಾ ರಾಜ್ಯಗಳಲ್ಲಿ ಇರುವಂತದ್ದು. ನಾನೀಗ ಕರ್ನಾಟಕ ಮೂಲದವನು, ಆದರೆ ಮರಾಠಿಗರಿಗೆ ಒಗ್ಗಿಕೊಂಡು 54ವರ್ಷದಿಂದ ಬದುಕುತ್ತಿಲ್ಲವೇನೂ? ನಾವು ಎಲ್ಲಿ ಇರುತ್ತೇವೋ, ಅಲ್ಲಿನ ಭಾಷಾ, ಸಂಸ್ಕೃತಿಗೆ ಹೊಂದಿಕೊಂಡು ಬದುಕಬೇಕು. ಆದರೆ ಉತ್ತರಭಾರತೀಯರ ಮೇಲೆ, ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆದಿದ್ದಕ್ಕೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಇತ್ತೀಚಿನ ದಿನಗಳಲ್ಲಿ ಅಂತಹ ಘಟನೆಗಳು ಮರುಕಳಿಸುತ್ತಿಲ್ಲ.

ಪ್ರ: ಬಿಜೆಪಿಗೆ ಈ ರೀತಿಯ ಅಭೂತಪೂರ್ವ ಜಯಕ್ಕೆ ಕಾರಣ? ಈ ರೀತಿಯ ಜಯವನ್ನು ಊಹಿಸಿದ್ದೀರಾ?
ಶೆಟ್ಟಿ: ಜಯ ನಿರೀಕ್ಷಿಸಿಸಿದ್ದೆವು. 260-270 ಸ್ಥಾನ ಬರಬಹುದೆಂದು ಅಂದಾಜಿಸಿದ್ದೆವು. ಈ ರೀತಿಯ ಜಯ ಖಂಡಿತ ನಿರೀಕ್ಷಿಸಿರಲಿಲ್ಲ. ಇದು ಪ್ರಮುಖವಾಗಿ ಆಡಳಿತ ವಿರೋಧಿ ಅಲೆ. ಮಹಾರಾಷ್ಟ್ರ ಸರಕಾರದಲ್ಲಿನ ಭಾರೀ ಭ್ರಷ್ಟಾಚಾರ, ಹಲವು ಬಾರಿ ಮುಖ್ಯಮಂತ್ರಿಗಳು ಬದಾಲಾಗಿದ್ದು. ಈ ರೀತಿಯಲ್ಲಿ ಪಟ್ಟಿ ಮಾಡಲು ಹೊರಟರೆ ತುಂಬಾ ಉದ್ದ ಇದೆ. ಇದಕ್ಕೆಲ್ಲಕ್ಕಿಂತ ಪ್ರಮುಖವಾಗಿ ನರೇಂದ್ರ ಮೋದಿ ಅಲೆ.

ಪ್ರ: ಮಹಾರಾಷ್ಟ್ರದಲ್ಲಿ ಯುಪಿಎ ಮೈತ್ರಿಕೂಟ ನೆಲಕಚ್ಚಲು ಸಿಎಂ ಕಾರಣವೆಂದು ಎನ್ಸಿಪಿ ಹೇಳುತ್ತಿದೆ. ಈ ಬಗ್ಗೆ?
ಶೆಟ್ಟಿ: ಈ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ. ಕಾಂಗ್ರೆಸ್ಸಿನ ದುರಾಡಳಿತದ ಬಗ್ಗೆ ನಾವೇನೂ ಜನರಿಗೆ ಮನವರಿಕೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನರು ಪಾಠ ಕಲಿಸಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಇಲ್ಲಿ ಅಸೆಂಬ್ಲಿ ಚುನಾವಣೆ ನಡೆಯುತ್ತದೆ. ಅಲ್ಲಿಯವರೆಗೆ ಅವರು ಎಂಜಾಯ್ ಮಾಡಿಕೊಂಡಿರಲಿ.

Mumbai North BJP MP and Kannadiga Gopal Shetty interview

ಪ್ರ: ನಿಮ್ಮ ರಾಜಕೀಯ ಜೀವನದ ಬಗ್ಗೆ?
ಶೆಟ್ಟಿ: ನಾನು ಸಂಸದನಾಗಿಯೇ ಮುಂದುವರಿಯುತ್ತೇನೆ. ನಮ್ಮ ನಾಯುಕರು ನೀಡುವ ಜವಾಬ್ದಾರಿಯನ್ನು ಪಾಲಿಸುತ್ತೇನೆ. ರಾಜಕೀಯದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡವನು ನಾನಲ್ಲ.

ಪ್ರ: ಮುಂಬೈ ಜನರಿಗೆ ಏನು ಭರವಸೆ ನೀಡುತ್ತೀರಾ?
ಶೆಟ್ಟಿ: ಭಾರೀ ಅಂತರದಿಂದ ನನಗೆ ಜಯ ಸಿಕ್ಕಿದೆ. ಈಗಾಗಲೇ ಹೇಳಿದಂತೆ ಬಡ ಕುಟುಂಬದದಿಂದ ಬಂದವನು ನಾನು. ಜನರ ಸಮಸ್ಯೆಯನ್ನು ಅರ್ಥಮಾಡಿಕೊಂಡು, ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ. ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸುತ್ತೇನೆ.

ಪ್ರ; ಶಿವಸೇನೆ ಮತ್ತು ಎಂಎನ್ಎಸ್ ಒಟ್ಟಾಗುವ ಸಾಧ್ಯತೆ ಇದೆಯಾ?
ಶೆಟ್ಟಿ: ಮುಂದಿನ ದಿನಗಳಲ್ಲಿ ಒಂದಾಗಬಹುದು. ಈ ಬಗ್ಗೆ ಬಿಜೆಪಿಯವನಾಗಿ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ.

(Image courtesy:gopalshetty.com)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+