ಮುಂಬೈ: ಭಯೋತ್ಪಾದಕರ ಗುಪ್ತ ಸಂದೇಶ ಪತ್ತೆ, ಹೈ ಅಲರ್ಟ್
ಮುಂಬೈ, ಜೂನ್ 04: ನವಿ ಮುಂಬೈನ ಸೇತುವೆಯೊಂದರ ಬಳಿ ಭಯೋತ್ಪಾದಕರದ್ದು ಎನ್ನಲಾಗಿರುವ ಗುಪ್ತ ಸಂದೇಶ ಸಿಕ್ಕಿದ್ದು ಪೊಲೀಸರು ಹೈ ಅಲರ್ಟ್ ಘೋಶಿಸಿದ್ದಾರೆ.
ನವಿ ಮುಂಬೈನ ಉರಾನ್ ಏರಿಯಾದ ಕೋಪ್ಟೆ ಸೇತುವೆಯ ಕಂಬದ ಮೇಲೆ ಚಿತ್ರ ವಿಚಿತ್ರ ಚಿತ್ರಗಳು, ಸಂಕೇತ ಭಾಷೆಯ ಪದಗಳು, ವಿಳಾಸಗಳು ಇನ್ನಿತರ ಕೆಲವು ಬಿಡಿ-ಬಿಡಿ ಮಾಹಿತಿಯ ಜೊತೆಗೆ ಐಎಸ್ ಉಗ್ರ ಸಂಘಟನೆಯನ್ನು ಹೊಗಳಿರುವ ಬರಹವೂ ಇದೆ.
ಭಯೋತ್ಪಾದಕರ ಗುಪ್ತ ಸಂದೇಶ ಇದಾಗಿದೆ ಎಂದು ಅಂದಾಜಿಸಲಾಗಿದ್ದು, ಗುಪ್ತ ಸಂಕೇತಗಳನ್ನು ಭೇದಿಸಲು ಪೊಲೀಸರು ಶತ ಪ್ರಯತ್ನ ಮಾಡುತ್ತಿದ್ದಾರೆ.
ಕಂಬದ ಮೇಲೆ ಬರೆದಿರುವ ಸಂದೇಶದಲ್ಲಿ 'ಐಎಸ್ಗಾಗಿ ಹೋರಾಡುತ್ತಿರುವ ಸೈನಿಕರೆ' ಎಂದು ಬರೆಯಲಾಗಿದೆ. ಐಎಸ್ ಉಗ್ರ ಸಂಘಟನೆಯ ಮುಖಂಡ ಅಬು ಬಕರ್ ಅಲ್ ಬಾಗ್ದಾದಿ, ಹಫೀಜ್ ಸಯೀದ್ ಹೆಸರನ್ನೂ ಸಹ ಬರೆಯಲಾಗಿದೆ. ಇವೆಲ್ಲವೂ ಪೊಲೀಸರ ಅನುಮಾನವನ್ನು ಹೆಚ್ಚಿಸಿವೆ.

ಅರವಿಂದ್ ಕೇಜ್ರಿವಾಲ್, ಧೋನಿ ಹೆಸರು ಇದೆ
ಗುಪ್ತ ಸಂದೇಶದ ಮಧ್ಯೆ ರಾಕೆಟ್ ಅನ್ನು ಹೋಲುವ ಚಿತ್ರವೂ ಇದೆ. ವಿಚಿತ್ರವೆಂದರೆ ಸಂದೇಶದಲ್ಲಿ ಅರವಿಂದ ಕೇಜ್ರಿವಾಲ್ ಹೆಸರು, ಎಂ.ಎಸ್.ಧೋನಿ ಹೆಸರು, ಅಬು ಬಕರ್ ಅಲಿಯಾಸ್ ಬಾಗ್ದಾದಿಯ ಹೆಸರೂ ಸಹ ಇದೆ.

ಸಾಕ್ಷ್ಯಗಳ ಸಂಗ್ರಹ ಕಾರ್ಯ ನಡೆಯುತ್ತಿದೆ
ಸ್ಥಳೀಯರ ಪ್ರಕಾರ, ಈ ಸೇತುವೆಯ ಕೆಳಭಾಗದಲ್ಲಿ ಸಾಮಾನ್ಯವಾಗಿ ಹಲವು ಯುವಕರು ಮದ್ಯ ಪಾನ ಮಾಡುತ್ತಿರುತ್ತಾರೆ ಎಂದಿದ್ದಾರೆ. ಸ್ಥಳೀಯವಾಗಿ ದೊರಕುವ ಬಿಯರ್ ಬಾಟಲಿಗಳು ಮತ್ತಿತರೆ ವಸ್ತುಗಳನ್ನು ಸಾಕ್ಷಿಗಳಾಗಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಉನ್ನತಾಧಿಕಾರಿ ಹೇಳಿದ್ದಾರೆ.

ಯಾವ ವ್ಯಕ್ತಿಯ ಮೇಲೆ ದಾಳಿ ಮಾಡಬೇಕು ಎಂದಿದೆ
ಸಂದೇಶದಲ್ಲಿ ಯಾವ ವ್ಯಕ್ತಿಯ ಮೇಲೆ ಹೇಗೆ ದಾಳಿ ಮಾಡಬೇಕು ಎಂಬುದನ್ನು ಬರೆಯಲಾಗಿದೆ.ಇದೊಂದು ಗುಪ್ತ ಸಂದೇಶ ಆಗಿರುವ ಸಾಧ್ಯತೆ ಇರುವ ಕಾರಣ ನಾವು ಯಾವುದೇ ಅವಕಾಶ ತೆಗೆದುಕೊಳ್ಳುವುದಿಲ್ಲ, ಭದ್ರತೆಯನ್ನು ಹೆಚ್ಚು ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತದೆ
ಆ ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ಅಪರಾಧಿ ಯಾರೇ ಆಗಲಿ ಆದಷ್ಟು ಶೀಘ್ರವಾಗಿ ಬಂಧಿಸಲಾಗುವುದು. ಅಲ್ಲದೆ ಈ ಸಂದೇಶಗಳಲ್ಲಿ ಅಡಕವಾಗಿರಬಹುದಾದ ಗುಪ್ತ ಸಂಕೇತವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications