ಅಂಬಾನಿಗೆ ಬೆದರಿಕೆ: ಪೊಲೀಸ್ ಕೇಂದ್ರ ಕಚೇರಿಯಲ್ಲೇ ಇತ್ತು ಸ್ಫೋಟಕ ಪ್ರಕರಣದಲ್ಲಿ ಬಳಸಿದ ಕಾರು!
ಮುಂಬೈ, ಮಾರ್ಚ್ 15: ಮುಕೇಶ್ ಅಂಬಾನಿ ಅವರ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಎನ್ಐಎಯಿಂದ ವಿಚಾರಣೆಗೆ ಒಳಗಾಗಿ ಬಂಧಿತರಾಗಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರ ಕುರಿತು ಮತ್ತಷ್ಟು ಸಂಗತಿಗಳು ಬಹಿರಂಗವಾಗಿವೆ. ಅಂಬಾನಿ ಮನೆ ಮುಂದೆ ಜಿಲೆಟಿನ್ ಕಡ್ಡಿಯೊಂದಿಗೆ ಸಿಕ್ಕಿದ್ದ ಸ್ಕಾರ್ಪಿಯೋ ಕಾರ್ಅನ್ನು ಸಚಿನ್ ವಾಜೆ ನೇತೃತ್ವದ ಮುಂಬೈ ಪೊಲೀಸರ ಅಪರಾಧ ತನಿಖಾ ಘಟಕವು (ಸಿಐಯು) ಬಳಸುತ್ತಿರುವ ಬಿಳಿ ಬಣ್ಣದ ವಾಹನ ಹಿಂಬಾಲಿಸಿತ್ತು ಎನ್ನುವುದು ತಿಳಿದುಬಂದಿದೆ.
ಮುಂಬೈ ಪೊಲೀಸರ ಮೋಟಾರ್ ಟ್ರಾನ್ಸ್ಪೋರ್ಟ್ ಇಲಾಖೆಯ ಬಿಳಿ ಬಣ್ಣದ ಇನ್ನೋವಾ ವಾಹನವನ್ನು ನಾಗ್ಪಡದಿಂದ ಶನಿವಾರ ರಾತ್ರಿ ಎನ್ಐಎ ತನ್ನ ವಶಕ್ಕೆ ತೆಗೆದುಕೊಂಡಿದೆ. ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಚಿನ್ ವಾಜೆ ಸಂಬಂಧದ ಕುರಿತಾದ ತನಿಖೆಗಾಗಿ ಅವರನ್ನು ಬಂಧಿಸಿದ ಸಮಯದಲ್ಲಿಯೇ ವಾಹನವನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಮುಕೇಶ್ ಅಂಬಾನಿ ಮನೆ ಸಮೀಪ ಸ್ಫೋಟಕ ಕೇಸ್; ಸಚಿನ್ ಅರೆಸ್ಟ್
ಮುಂಬೈ ಪೊಲೀಸ್ ಕೇಂದ್ರ ಕಚೇರಿಯ ಒಳಗೆ ಈ ವಾಹನವನ್ನು ನಿಲ್ಲಿಸಲಾಗಿತ್ತು. ಈ ವಾಹನವನ್ನು ಸಿಐಯು ಬಳಸುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮುಂದೆ ಓದಿ.
ಇಸ್ರೇಲ್ ರಾಯಭಾರ ಕಚೇರಿ ಸ್ಫೋಟ ಮತ್ತು ಅಂಬಾನಿಗೆ ಬೆದರಿಕೆ ಎರಡಕ್ಕೂ ಒಂದೇ ನಂಟು?
ಕಚೇರಿಯಲ್ಲೇ ಇತ್ತು
ಎನ್ಐಎ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಸಿಐಯು ತನಿಖೆ ನಡೆಸುತ್ತಿತ್ತು. ಆಗ ಅದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡಿದ್ದ ಬಿಳಿ ಬಣ್ಣದ ವಾಹನಕ್ಕಾಗಿ ಹುಡುಕಾಡುತ್ತಿರುವುದಾಗಿ ಹೇಳಿತ್ತು. ಆದರೆ ತಮ್ಮದೇ ಕೇಂದ್ರ ಕಚೇರಿಯ ಆವರಣದಲ್ಲಿ ನಿಲ್ಲಿಸಿದ್ದ ವಾಹನವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲವೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು 'ಇದು ನನಗೆ ತಿಳಿದಿರಲಿಲ್ಲ' ಎಂದಿದ್ದಾರೆ.
ಇನ್ನೋವಾದಲ್ಲಿ ಹೋಗಿದ್ದ ಚಾಲಕ
ಫೆ. 25ರಂದು ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದ ಮುಂದೆ ಸ್ಕಾರ್ಪಿಯೋ ವಾಹನವನ್ನು ಅಪರಿಚಿತ ವ್ಯಕ್ತಿ ನಿಲ್ಲಿಸಿದ್ದಾಗ ಬಿಳಿಯ ಇನ್ನೋವಾ ವಾಹನ ಸ್ವಲ್ಪ ದೂರದ ಹಿಂದೆ ನಿಂತಿತ್ತು. ಸ್ಕಾರ್ಪಿಯೋದಿಂದ ಇಳಿದಿದ್ದ ಚಾಲಕ, ಇನ್ನೋವಾ ಕಾರ್ಗೆ ಹತ್ತಿ ಹೋಗಿದ್ದ. ನಂತರ ಅದು ಟೋಲ್ ಹಾದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ನಿಗೂಢ ಸಾವಿನ ಹಿಂದೆ ಪೊಲೀಸ್ ಅಧಿಕಾರಿ ಕೈವಾಡ?
ವಾಜೆ ತಪ್ಪೊಪ್ಪಿಗೆ
ಇದಕ್ಕೂ ಮುನ್ನ, ಎಸ್ಯುವಿಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಪ್ರಕರಣದಲ್ಲಿ ಸಚಿನ್ ವಾಜೆ ಅವರಿಗೆ ಸಂಬಂಧವಿದೆ ಎಂಬ ಮಾಹಿತಿಗಳು ದೊರಕಿವೆ. ವಿಚಾರಣೆಯ ವೇಳೆ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ವಾಜೆ ಅವರನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯದಲ್ಲಿ ಎನ್ಎಐ ಕೋರಿತ್ತು.
ಅನುಮಾನದಲ್ಲಿ ಬಂಧಿಸಲಾಗಿದೆ
ವಾಜೆ ಅವರನ್ನು ಅನುಮಾನದ ಆಧಾರದಲ್ಲಿ ಮಾತ್ರವೇ ಬಂಧಿಸಲಾಗಿದೆ. ಅದಲ್ಲಿ ಮೇಲ್ನೊಟಕ್ಕೆ ಅವರ ಕೈವಾಡದ ಬಗ್ಗೆ ಯಾವ ಪುರಾವೆಯೂ ಇಲ್ಲ. ಅವರ ಬಂಧನ ಅಕ್ರಮ ಮತ್ತು ಬಂಧನಕ್ಕೆ ಕಾರಣವನ್ನು ವಾಜೆ ಅವರಿಗೆ ವಿವರಿಸಿಲ್ಲ ಎಂದು ವಾಜೆ ಪರ ವಕೀಲರು ವಾದಿಸಿದ್ದರು.
ವಾಜೆಗೆ ಅನಾರೋಗ್ಯ
ಎನ್ಐಎ ವಶದಲ್ಲಿರುವ ವಾಜೆ ಅವರ ಆರೋಗ್ಯದಲ್ಲಿ ಏರಿಳಿತವಾಗಿದೆ ಎನ್ನಲಾಗಿದೆ. ಶನಿವಾರ ರಾತ್ರಿ 11.30ಕ್ಕೆ ಬಂಧನಕ್ಕೆ ಒಳಗಾಗಿದ್ದ ವಾಜೆ ಅವರನ್ನು ಸುಮಾರು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಬಳಿಕ ಎನ್ಐಎ ನ್ಯಾಯಾಲಯ 11 ದಿನಗಳ ಎನ್ಐಎ ವಶಕ್ಕೆ ಒಪ್ಪಿಸಿತ್ತು. 49 ವರ್ಷದ ವಾಜೆ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಜೆಜೆ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.