ಮುಕೇಶ್ ಅಂಬಾನಿ ಮನೆ ಎದುರು ಸ್ಫೋಟಕ ಪತ್ತೆ ಪ್ರಕರಣಕ್ಕೆ ಹೊಸ ತಿರುವು
ಮುಂಬೈ, ಮಾರ್ಚ್ 5: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಎಸ್ಯುವಿಯಲ್ಲಿ ಸ್ಫೋಟಕಗಳು ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದ ಸಮೀಪ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಮನ್ಸುಖ್ ಹಿರೇನ್ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ನೌಪಡಾ ಪೊಲೀಸರು ಹೀರೆನ್ ಅವರ ದೇಹವನ್ನು ಶುಕ್ರವಾರ ಪತ್ತೆಹಚ್ಚಿದ್ದಾರೆ.
ಮನ್ಸುಖ್ ಹಿರೇನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಅವರು ಕಾಲ್ವಾ ಕಾಲುವೆಗೆ ಜಿಗಿದು ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 25ರಂದು ಮುಕೇಶ್ ಅಂಬಾನಿ ಅವರ ನಿವಾಸದ ಮುಂದೆ ಸ್ಕಾರ್ಪಿಯೋ ಕಾರೊಂದು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ವಾಹನದಿಂದ 20 ಜಿಲೆಟಿನ್ ಸ್ಫೋಟಕ ಕಡ್ಡಿಗಳನ್ನು ಹಾಗೂ ಬೆದರಿಕೆ ಪತ್ರವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸ್ಕಾರ್ಪಿಯೋ ವಾಹನದ ಮಾಲೀಕರನ್ನು ಹುಡುಕಿದಾಗ ಅದು ಮನ್ಸುಖ್ ಹಿರೇನ್ ಅವರಿಗೆ ಸೇರಿದ್ದು ಎನ್ನುವುದು ಪತ್ತೆಯಾಗಿತ್ತು.

ಕಳ್ಳತನವಾಗಿದ್ದ ಸ್ಕಾರ್ಪಿಯೋ
ಸುಮಾರು ಒಂದು ವರ್ಷದಿಂದ ತಾವು ಸ್ಕಾರ್ಪಿಯೋವನ್ನು ಬಳಸಿರಲಿಲ್ಲ. ಅದನ್ನು ಮಾರಾಟ ಮಾಡುವ ಉದ್ದೇಶದಿಂದ ಇತ್ತೀಚೆಗಷ್ಟೇ ಅದನ್ನು ಓಡಿಸಿದ್ದಾಗಿ ಪೊಲೀಸರಿಗೆ ಹಿರೇನ್ ತಿಳಿಸಿದ್ದರು. ಆದರೆ ಫೆ. 16ರಂದು ಕಾರು ಹಾಳಾಗಿದ್ದರಿಂದ ಮುಲುಂದ್-ಐರೋಲಿ ಲಿಂಕ್ ರೋಡ್ನಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದೆ. ಮರುದಿನ ಆ ಜಾಗಕ್ಕೆ ಹೋದಾಗ ಕಾರು ಕಳ್ಳತನವಾಗಿತ್ತು ಎಂದು ಅವರು ವಿವರಿಸಿದ್ದರು. ತಮ್ಮ ವಾಹನ ಕಳುವಾಗಿದ್ದರ ಬಗ್ಗೆ ಅವರು ವಿಖ್ರೋಲಿ ಪೊಲೀಸರಿಗೆ ದೂರು ನೀಡಿದ್ದರು.

ಎನ್ಐಗೆ ಪ್ರಕರಣ ಒಪ್ಪಿಸಿ
'ಮನ್ಸುಖ್ ಹಿರೇನ್ ಅವರು ಈ ಪ್ರಕರಣದ ಪ್ರಮುಖ ಕೊಂಡಿಯಾಗಿದ್ದು, ಅವರ ಜೀವ ಅಪಾಯದಲ್ಲಿರಬಹುದು ಎಂದು ಅವರ ಮನೆಗೆ ಭದ್ರತೆ ಒದಗಿಸುವಂತೆ ನಾನು ಸದನದಲ್ಲಿ ಒತ್ತಾಯಿಸಿದ್ದೆ. ಆದರೆ ಈಗ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇದು ತೀವ್ರ ಅನುಮಾನಾಸ್ಪದವಾಗಿದೆ. ಇದನ್ನು ನೋಡಿದರೆ ಭಯೋತ್ಪಾದನಾ ಆಯಾಮ ಕಂಡುಬರುತ್ತಿದೆ. ಎನ್ಐಎಗೆ ಈ ಪ್ರಕರಣ ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ತನಿಖಾಧಿಕಾರಿ ಬದಲು ಏಕೆ?
'ಅಲ್ಲಿ ಒಂದಲ್ಲ, ಎರಡು ಕಾರುಗಳನ್ನು ಬಳಸಲಾಗಿತ್ತು. ಒಂದು ಸ್ಕಾರ್ಪಿಯೋ ಮತ್ತೊಂದು ಇನ್ನೋವಾ. ಎರಡೂ ಕಾರುಗಳು ಥಾಣೆಯಿಂದ ಬಂದಿದ್ದವು. ಒಂದೇ ಮಾರ್ಗದಲ್ಲಿ ಬಂದು ಸ್ಥಳಕ್ಕೆ ತಲುಪಿದ್ದವು. ಸಚಿನ್ ವಾಜ್ ಅವರು ಸ್ಥಳಕ್ಕೆ ಬಂದ ಮೊದಲ ಪೊಲೀಸ್ ಅಧಿಕಾರಿಯಾಗಿದ್ದರು. ಅವರನ್ನೇ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ ಮೂರು ದಿನಗಳ ಹಿಂದೆ ಅವರನ್ನು ತನಿಖಾಧಿಕಾರಿ ಹುದ್ದೆಯಿಂದ ತೆಗೆದುಹಾಕಲಾಯಿತು. ಇದು ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ' ಎಂದು ಫಡ್ನವೀಸ್ ಹೇಳಿದ್ದಾರೆ.

ಆರೋಪ ಅಲ್ಲಗಳೆದಿದ್ದ ಜೈಶ್-ಉಲ್-ಹಿಂದ್
'ನೀತಾ ಅತ್ತಿಗೆ ಮತ್ತು ಮುಕೇಶ್ ಅಣ್ಣ ಅವರಿಗೆ, ಇದು ಟ್ರೇಲರ್ ಅಷ್ಟೇ. ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದೆ. ಪಿಕ್ಚರ್ ಇನ್ನೂ ಬಾಕಿ ಇದೆ. ಮುಂದಿನ ಸಲ ಈ ಸಾಮಗ್ರಿಗಳನ್ನು (ಜಿಲೆಟಿನ್ ಕಡ್ಡಿಗಳು) ಅಭಿವೃದ್ಧಿಪಡಿಸಿದ ಸ್ಥಿತಿಯಲ್ಲಿ ನಿಮಗೆ ತಲುಪಿಸಲಾಗುವುದು' ಎಂದು ಸ್ಕಾರ್ಪಿಯೋದ ಚೀಲದಲ್ಲಿ ಪತ್ತೆಯಾಗಿದ್ದ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಇದು ಜೈಶ್-ಉಲ್- ಹಿಂದ್ ತನ್ನ ಕೃತ್ಯ ಎಂದು ಒಪ್ಪಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಹೇಳಿಕೆ ನೀಡಿದ್ದ ಜೈಶ್-ಉಲ್-ಹಿಂದ್, ಇದು ಸುಳ್ಳು ವರದಿ. ಭಾರತೀಯ ಗುಪ್ತಚರ ಸಂಸ್ಥೆಯು ನಕಲಿ ಪೋಸ್ಟರ್ಗಳನ್ನು ಮಾಡಿದೆ ಎಂದು ಅದು ಆರೋಪಿಸಿತ್ತು.












Click it and Unblock the Notifications