ತನಿಖೆಗೆ ಸಚಿನ್ ವಾಜೆ ಅಸಹಕಾರ: ಕೋರ್ಟ್ನಲ್ಲಿ ಎನ್ಐಎ ಆರೋಪ
ಮುಂಬೈ, ಮಾರ್ಚ್ 19: ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ತನ್ನ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಮುಂಬೈನ ಸ್ಥಳೀಯ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ. ಈ ವರೆಗೂ ವಾಜೆ ತಮ್ಮ ವಶದಲ್ಲಿದ್ದರೂ ಅವರ ಅಸಹಕಾರದಿಂದ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅದು ಹೇಳಿದೆ.
ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಹಾಗೂ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುಂಬೈ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಚಿನ್ ವಾಜೆ, ಥಾಣೆಯ ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಎನ್ಐಎ ಪ್ರತಿಕ್ರಿಯೆ ನೀಡಿದ್ದು, ಮುಂದಿನ ವಿಚಾರಣೆ ಮಾರ್ಚ್ 30ರಂದು ನಡೆಯಲಿದೆ.
ಸಚಿನ್ ವಾಜೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಂದರ್ಭದಲ್ಲಿ ವಾಜೆ ಪರ ವಕೀಲರು ವಿಚಾರಣೆಯನ್ನು ವೀಕ್ಷಿಸಲು ಸಾಧ್ಯವಾಗುವಂತೆ, ಆದರೆ ವಿಚಾರಣಾ ಸ್ಥಳದ ವಿವರಗಳನ್ನು ಆಲಿಸಲು ಸಾಧ್ಯವಾಗದಷ್ಟು ದೂರದಲ್ಲಿ ಹಾಜರಿರುವಂತೆ ಕೋರ್ಟ್ ಅನುಮತಿ ನೀಡಿದೆ. ಆದರೆ ಇದುವರೆಗೂ ವಾಜೆ ಪರ ವಕೀಲರು ಹಾಜರಾಗಿಲ್ಲ. ಇದರಿಂದ ವಾಜೆ ಕೂಡ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಎನ್ಯೆ ಆರೋಪಿಸಿದೆ.

ಇನ್ನೊಂದೆಡೆ ಪ್ರತ್ಯಾರೋಪ ಮಾಡಿರುವ ವಾಜೆ ಪರ ವಕೀಲರಲ್ಲಿ ಒಬ್ಬರಾದ ಸಜಲ್ ಯಾದವ್, ಎನ್ಐಎ ಕಚೇರಿಯ ಸಮೀಪದ ಹೋಟೆಲ್ ಒಂದರಲ್ಲಿ ತಾವು ಇಡೀ ದಿನ ಕಳೆದಿದ್ದು, ವಾಜೆ ವಿಚಾರಣೆ ವೇಳೆ ತಮಗೆ ಕರೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎನ್ಐಎಯಿಂದ ತಮಗೆ ಯಾವ ಕರೆಯೂ ಬಂದಿಲ್ಲ ಎಂದು ಹೇಳಿದ್ದಾರೆ.
ಸಚಿನ್ ವಾಜೆ ವಿಚಾರಣೆಗೆ ಸಹಕರಿಸದ ಕಾರಣ ಅವರ ವಕೀಲರಿಗೆ ಹಾಜರಾಗುವಂತೆ ಸೂಚನೆ ನೀಡಬೇಕೆಂದು ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಜತೆಗೆ ವಿಚಾರಣೆಯ ನಡುವೆ ವಾಜೆ ಅವರನ್ನು ಭೇಟಿ ಮಾಡಲು ಸಮಯಾವಕಾಶ ನೀಡುವಂತೆ ವಾಜೆಯ ವಕೀಲರು ಮಾಡಿದ್ದ ಮನವಿಯನ್ನು ಕೂಡ ತಿರಸ್ಕರಿಸಿದೆ.












Click it and Unblock the Notifications