ಮರಾಠಾ ಕ್ರಾಂತಿ ಮೋರ್ಚಾ ಪ್ರತಿಭಟನೆ ಬಿಸಿಗೆ ಮುಂಬೈ ಸ್ತಬ್ಧ
ದಕ್ಷಿಣ ಮುಂಬೈನಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಪ್ರತಿಭಟನಾ ಮೆರವಣಿಗೆ. ಮರಾಠಿಗರಿಗೆ ಮೀಸಲಾತಿ, ಎಸ್ಸಿ ಎಸ್ಟಿ ಮೀಸಲಾತಿ ದುರ್ಬಳಕೆ ತಡೆ, ರೈತರ ಸಾಲ ಮನ್ನಾ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ.
ಮುಂಬೈ, ಆಗಸ್ಟ್ 9: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಬುಧವಾರ (ಆಗಸ್ಟ್ 9) ಅತಿ ದೊಡ್ಡ ಮಟ್ಟದಲ್ಲಿ ನಡೆದ 'ಮರಾಠಾ ಕ್ರಾಂತಿ ಮೋರ್ಚಾ' (ಎಂಕೆಎಂ) ಮೌನ ಪ್ರತಿಭಟನೆಯಿಂದಾಗಿ ದಕ್ಷಿಣ ಮುಂಬೈನಲ್ಲಿ ಎಂದಿನ ಜನಜೀವನಕ್ಕೆ ಗ್ರಹಣ ಹಿಡಿದಿತ್ತು.
ಮರಾಠಿಗರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗಿತ್ತು. ಈ ಮೌನ ಪ್ರತಿಭಟನೆಯ ನೇತೃತ್ವವನ್ನು ಮರಾಠಾ ಕ್ರಾಂತಿ ಮೋರ್ಚಾದ ಮಾತೃಸಂಸ್ಥೆಯಾದ 'ಸಕಾಲ್ ಮರಾಠಾ ಸಮಾಜ್' ವಹಿಸಿತ್ತು.
ನಾಗರಿಕರ ದೈನಂದಿನ ಚಟುವಟಿಕೆಗಳು, ಸಾರಿಗೆ ವ್ಯವಸ್ಥೆ ಮುಂತಾದ ಎಲ್ಲಾ ಸೌಕರ್ಯಗಳಿಗೆ ಕೊಂಚ ತೊಂದರೆಯಾಗಿದ್ದರಿಂದಾಗಿ ಜನರು ಕೊಂಚ ತೊಂದರೆಗೊಳಗಾದರು. ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲೆಂದು, ಮುಂಬೈನ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ದೊಡ್ಡ ಮಟ್ಟದ ಪ್ರತಿಭಟನೆ
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಎಂಕೆಎಂ ಕಾರ್ಯಕರ್ತರು, ಬೃಹತ್ ಮುಂಬೈ ಕಾರ್ಪೊರೇಷನ್ ಬಳಿಯ ಜೀಜಾಮಾತಾ ಉದ್ಯಾನ್ ನಿಂತ ತಮ್ಮ ಮೌನ ಮೆರವಣಿಗೆಯನ್ನು ಆರಂಭಿಸಿದರು. ಆನಂತರ, ಮಧ್ಯಾಹ್ನದ ಹೊತ್ತಿಗೆ ಆಜಾದ್ ಮೈದಾನದವರೆಗೆ (ದಕ್ಷಿಣ ಮುಂಬೈ) ಸಾಗಿ ಪರಾಕಾಷ್ಠೆಗೆ ತಲುಪಿತು. ಅಲ್ಲಿ, ಸಂಘಟನೆಯ ನಾಯಕರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತುಗಳನ್ನಾಡಿದರು.

ಔರಂಗಾಬಾದ್ ನಲ್ಲೂ ಆಗಿತ್ತು
ಅಂದಹಾಗೆ, ಇದು ಎಂಕೆಎಂ ವತಿಯಿಂದ ಆಯೋಜಿಸಲಾಗಿದ್ದ 58ನೇ ಮಹಾ ಪ್ರತಿಭಟನೆ. ಇತ್ತೀಚೆಗೆ, ಔರಂಗಾಬಾದ್ ನಲ್ಲಿಯೂ ಇಂಥದ್ದೊಂದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಸಾಲ ಮನ್ನಾಕ್ಕೆ ಆಗ್ರಹ
ಪ್ರತಿಭಟನೆ ಹಿಂದಿನ ಮತ್ತಷ್ಟು ಬೇಡಿಕೆಗಳು ಹೀಗಿವೆ. ಎಸ್ಸಿ, ಎಸ್ಟಿ ಮೀಸಲಾತಿ ನಿಯಮಗಳು ದುರುಪಯೋಗವಾಗದಂತೆ ತಿದ್ದುಪಡಿ ತರಬೇಕು. ರೈತರ ಆತ್ಮಹತ್ಯೆ ತಪ್ಪಿಸಲು ಅವರ ಸಾಲ ಮನ್ನಾ ಮಾಡಬೇಕು. ರೈತರ ಬೆಳೆಯುವ ವ್ಯವಸಾಯ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು.

ವರ್ಷದ ಹಿಂದಿನ ಬೇಡಿಕೆ
ಕೊರ್ಪಾಡಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. 2016ರ ಜುಲೈ 13ರಂದು ಕೊರ್ಪಾಡಿ ಎಂಬ ಮರಾಠಾ ಹುಡುಗಿಯ ಮೇಲೆ ಮೂವರು ದಲಿತ ಯುವಕರು ಅತ್ಯಾಚಾರವೆಸಗಿ, ಆಕೆಯನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಬೇಗನೇ ಶಿಕ್ಷೆ ನೀಡಬೇಕೆಂದು ಎಂಕೆಎಂ ವರ್ಷದಿಂದಲೂ ಆಗ್ರಹಿಸುತ್ತಿದೆ.












Click it and Unblock the Notifications