ನರಭಕ್ಷಕ ಹುಲಿ 'ಅವನಿ' ಹತ್ಯೆ ಕಟ್ಟುಕಥೆಯೇ? ತಜ್ಞರ ಅನುಮಾನ
ನಾಗಪುರ, ನವೆಂಬರ್ 9: ನರಭಕ್ಷಕ ಹುಲಿ ಅವನಿ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಅವನಿ ವಿಪರೀತ ಆಂತರಿಕ ರಕ್ತಸ್ರಾವದಿಂದ ಮತ್ತು ಹೃದಯ-ಶ್ವಾಸಕೋಶ ವೈಫಲ್ಯದಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.
ಹೀಗಾಗಿ ಶೂಟರ್ ಅಸ್ಘರ್ ಅಲಿ ಖಾನ್ ಹೇಳಿಕೊಂಡಂತೆ ಹುಲಿಗೆ ಚೂಪಾದ ಚುಚ್ಚುಮದ್ದು ಹಾರಿಸಿ ಕೊಲ್ಲುವ ಪ್ರಯತ್ನ ನಡೆದಿತ್ತೇ ಎಂಬುದರ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಹುಲಿ ಹತ್ಯೆ ಮಾಡಲು ನಿಯೋಜನೆಗೊಂಡಿದ್ದ ಅಸ್ಘರ್ ಅಲಿ ಖಾನ್ ಹೇಳಿಕೆಗೂ, ಅವನಿಯ ಮರಣೋತ್ತರ ಪರೀಕ್ಷೆಯ ವರದಿಯ ಅಂಶಗಳಿಗೂ ಸಾಕಷ್ಟು ವ್ಯತ್ಯಾಸಗಳಿರುವುದು ಪತ್ತೆಯಾಗಿದೆ. ಹೀಗಾಗಿ ಕಾರ್ಯಾಚರನೆ ನಡೆಸಿದ ತಂಡ ಹೇಳಿಕೆ ನೀಡಿರುವ ರೀತಿಯಲ್ಲಿ ಅವನಿಯ ಹತ್ಯೆ ನಡೆದಿಲ್ಲ. ಅಲ್ಲಿ ಬೇರೆಯದೇ ರೀತಿಯ ಘಟನಾವಳಿಗಳು ನಡೆದಿವೆ ಎಂಬ ಅನುಮಾನ ಮೂಡಿದೆ.
ನರಭಕ್ಷಕ ಅವನಿ ಒಂದು ವಾರದಿಂದ ಆಹಾರ ಸೇವನೆ ಮಾಡದೆ ಹಸಿದಿರುವುದು ಸಹ ವರದಿಯಲ್ಲಿ ಖಚಿತವಾಗಿದೆ. ಇದರಿಂದ ಅವನಿಯ ಕುರಿತಾದ ಅನೇಕ ಊಹಾಪೋಹಗಳ ಸತ್ಯಾಸತ್ಯತೆ ಬಗ್ಗೆ ಚರ್ಚೆ ನಡೆದಿದೆ.

ಹುಲಿಯ ಸಾವು ಬಿಂಬಿತವೇ?
ಅರಣ್ಯಾಧಿಕಾರಿ ಮುಕ್ಬೀರ್ ಶೇಖ್ 20 ಮೀಟರ್ ದೂರದಿಂದ ಚುಚ್ಚುಮದ್ದು ಹಾರಿಸಿದ್ದರು ಎಂದಾದರೆ, ಯಾವುದೇ ಪ್ರಾಣಿಗೂ ಅದು ಬಲು ಅಪಾಯಕಾರಿ. ಹಾಗೆ ಹಾರಿಸಿದ್ದಾಗಿದ್ದರೆ ಅದು ಹುಲಿಯ ಸ್ನಾಯುಗಳನ್ನು ಕುಗ್ಗಿಸುತ್ತಿತ್ತು. ವರದಿಯಲ್ಲಿ ಆ ರೀತಿ ಹೇಳಿಲ್ಲ. ವಾಸ್ತವವಾಗಿ ನಿಜಕ್ಕೂ ಚುಚ್ಚುಮದ್ದನ್ನು ಹಾರಿಸಲಾಗಿತ್ತೇ ಅಥವಾ ಹಾಗೆ ಬಿಂಬಿಸಲಾಗಿದೆಯೇ ಎಂಬ ಪ್ರಶ್ನೆ ಉಂಟಾಗಿದೆ ಎಂದು ಕರ್ನಾಟಕದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ಡಾ. ಪ್ರಯಾಗ್ ಎಚ್ಎಸ್ ಹೇಳಿದ್ದಾರೆ.
| Array |
ಅಸ್ಘರ್ ಹೇಳಿಕೆ ಸುಳ್ಳು?
ಹುಲಿಯ ಎಡಭುಜದ ಮೂಳೆಯ ಕೆಳಗ್ಗೆ ಗುಂಡು ಹಾರಿಸಿದ್ದರಿಂದ ಅದು ಅಲ್ಲಿಂದ ತೂರಿ ಬಲಭಾಗದ ಭುಜದ ಮೂಳೆಯನ್ನು ಮುರಿದಿದೆ. ಕಾರ್ಯಾಚರಣೆ ನಡೆಸುತ್ತಿದ್ದ ತಂಡದ ಮೇಲೆ ಅವನಿ ನುಗ್ಗಿ ಬಂದಾಗ ಅದರ ಮೇಲೆ ಹತ್ತಿರದಿಂದ ಗುಂಡು ಹಾರಿಸಲಾಯಿತು ಎಂಬ ಅಸ್ಘರ್ ಹೇಳಿಕೆ ಸುಳ್ಳು ಎಂದರ್ಥ.

ತಲೆ ಭಾಗಕ್ಕೆ ಬೀಳಬೇಕಿತ್ತು...
ವರದಿಗಳ ಪ್ರಕಾರ ಇದು ವಿವರಿಸಿದಂತೆ ಹತ್ತಿರದಿಂದ ಹಾರಿಸಿದ ಗುಂಡೇಟಲ್ಲ. ಒಂದು ವೇಳೆ ಅವನಿ ತಂಡದ ಮೇಲೆ ದಾಳಿ ಮಾಡಲು ಮುನ್ನುಗ್ಗಿದ್ದರೆ ಗುಂಡು ಅದರ ತಲೆ, ಮುಖ ಅಥವಾ ಗಂಟಲಿಗೆ ಹೊಕ್ಕಬೇಕಿತ್ತು ಎಂದು ವನ್ಯಜೀವಿ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಹೊರಗಿನ ವ್ಯಕ್ತಿ ಏಕೆ?
ಹುಲಿಯನ್ನು ಸೆರೆಹಿಡಿಯಲು ಹೊರಗಿನ ವ್ಯಕ್ತಿಯನ್ನು ನಿಯೋಜನೆ ಮಾಡಿದ್ದಕ್ಕೆ ಮಹಾರಾಷ್ಟ್ರ ವನ್ಯಜೀವಿ ಮುಖ್ಯ ಅಧಿಕಾರಿಗೆ ನೋಟಿಸ್ ನೀಡುವಂತೆ ಪಶು ವೈದ್ಯ ಸಮಿತಿಗೆ ಡಾ. ಪ್ರಯಾಗ್ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಅಲ್ಲಿಗೆ ಅಹವಾಲು ಸಲ್ಲಿಸಿದ್ದಾರೆ.












Click it and Unblock the Notifications